ಭ್ರಷ್ಟಾಚಾರದ ನಿಗ್ರಹಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ
ಕೊಡಗು

ಭ್ರಷ್ಟಾಚಾರದ ನಿಗ್ರಹಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ

October 28, 2020

ಸೋಮವಾರಪೇಟೆ, ಅ.27-ಭ್ರಷ್ಟಾ ಚಾರದ ನಿಗ್ರಹಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಸಿಪಿಐ ಶ್ರೀಧರ್ ತಿಳಿಸಿದರು.

ಕೊಡಗು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದಿಂದ ಪತ್ರಿಕಾಭವನದಲ್ಲಿ ಮಂಗಳ ವಾರ ಏರ್ಪಡಿಸಿದ್ದ ಭ್ರಷ್ಟಾಚಾರ ವಿರುದ್ಧ ಜಾಗೃತ ಅರಿವು ಸಪ್ತಾಹ-2020 ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ಸರ್ಕಾರಿ ನೌಕರ ತನ್ನ ದಿನನಿತ್ಯದ ಕೆಲಸಗಳನ್ನು ನಿರ್ವಹಿಸಲು ಅನಗತ್ಯ ವಿಳಂಬ, ನಿರ್ಲಕ್ಷ್ಯತೆ ತೋರಿದ್ದಲ್ಲಿ ಅಥವಾ ಲಂಚದ ಬೇಡಿಕೆ ಇಟ್ಟಲ್ಲಿ ಕೂಡಲೇ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಠಾಣೆ ಅಥವಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿ ಎಂದು ಇಲಾಖೆಯ ಸಿಪಿಐ ಶ್ರೀಧರ್ ಮನವಿ ಮಾಡಿದರು. ಅಧಿಕಾರಿಗಳಿಂದ ತೊಂದರೆಗೊಳಗಾದ ಸಾರ್ವಜನಿಕರು ದೂರು ನೀಡದಿದ್ದಲ್ಲಿ, ಭ್ರಷ್ಟಾಚಾರಿಗಳ ವಿರುದ್ಧ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ದೂರು ನೀಡಿದರೆ ಅಧಿಕಾರಿ ಗಳು ತಮ್ಮ ಕೆಲಸ ಮಾಡಿಕೊಡುವುದಿಲ್ಲ ಎಂಬ ಹೆದರಿಕೆ ಬೇಡ. ಯಾವುದೇ ಕೆಲಸವನ್ನಾದರೂ ನಾವು ಮಾಡಿಸಿ ಕೊಡುವುದರೊಂದಿಗೆ, ಸಂಬಂಧಿಸಿದ ಅಧಿ ಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ತಾಲೂಕು ಕಚೇರಿಯಲ್ಲಿ ಭ್ರಷ್ಟಾ ಚಾರದಿಂದಾಗಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಎಲ್ಲಾ ಕೆಲಸಗಳಿಗೂ ಇಂತಿಷ್ಟು ಬೆಲೆ ನಿಗದಿಗೊಳಿಸಿ, ಆ ಮೂಲಕ ಸಾರ್ವ ಜನಿಕರಿಂದ ಹಣ ವಸೂಲಿ ಮಾಡ ಲಾಗುತ್ತಿದೆ ಎಂದು ಮಸಗೋಡು ಗ್ರಾಮದ ಸುರೇಶ್, ಕಲ್ಕಂದೂರು ಗ್ರಾಮದ ರವೀಶ್ ಸೇರಿದಂತೆ ಹಲವರು ಆರೋಪಿಸಿದರು.

ಕಾರೆಕೊಪ್ಪ ಗ್ರಾಮದ ಶಿವಾನಂದ ಮಾತ ನಾಡಿ, ಮಳೆಯಿಂದ ಹಾನಿಗೀಡಾದ ಮನೆ ಪರಿಹಾರಕ್ಕಾಗಿ ಕಂದಾಯ ಇಲಾಖೆಗೆ ಅರ್ಜಿ ನೀಡಲು ಹೋದರೆ, ಸಂಬಂಧಿ ಸಿದ ಅಧಿಕಾರಿ ಹಣದ ಬೇಡಿಕೆ ಇಟ್ಟು ಅರ್ಜಿ ಸ್ವೀಕರಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆರ್‍ಟಿಓ ಇಲಾಖೆಯ ಕೆಲಸಗಳನ್ನು ಮಧ್ಯವರ್ತಿಗಳ ಮೂಲಕವೇ ಮಾಡಿಸಿಕೊಳ್ಳುವಂತೆ ಇಲಾಖೆ ಅಧಿಕಾರಿ ಗಳೇ ಸೂಚಿಸುತ್ತಿದ್ದಾರೆ. ನೇರವಾಗಿ ಹೋದಲ್ಲಿ ಯಾವುದೇ ಕೆಲಸಗಳಾಗುತ್ತಿಲ್ಲ. ಹೆಚ್ಚಿನ ಹಣ ವಸೂಲಿ ಮಾಡುವ ಮೂಲಕ ಸಾರ್ವಜನಿಕರ ಕೆಲಸಗಳನ್ನು ಕೆಲವು ಆರ್‍ಟಿಓ ಮಧ್ಯವರ್ತಿಗಳು ಮಾಡುತ್ತಿದ್ದಾರೆ.

ಕೆಲ ಅಧಿಕಾರಿಗಳು ಆಟೋ ನಿಲ್ದಾಣ ದಲ್ಲಿ ದಾಖಲಾತಿ ಮತ್ತು ವಾಹನಗಳ ತಪಾಸಣೆ ಮಾಡಲು ಅನುಮತಿ ಇಲ್ಲದಿದ್ದರೂ, ಪಟ್ಟಣಕ್ಕೆ ಬಂದು ತಪಾಸಣೆ ಮಾಡುತ್ತಿದ್ದಾರೆ. ಆಟೋಗಳ ಎಫ್‍ಸಿ ಮಾಡಿಸಲು ಮಡಿಕೇರಿಗೆ ಬರಲು ತಿಳಿಸುತ್ತಿದ್ದಾರೆ. ಆದರೆ ನಮಗೆ ಕೇವಲ 15 ಕಿ.ಮೀಗೆ ಮಾತ್ರ ಸಂಚರಿಸಲು ಅನುಮತಿ ಇದ್ದು, ಆರ್‍ಟಿಓ ಅಧಿಕಾರಿಗಳ ಒತ್ತಾಯದ ಮೆರೆಗೆ ಸಮೀಪದ ಬೇಳೂರು ಗ್ರಾಮಕ್ಕೆ ಬಂದು ಅಲ್ಲಿಗೆ ವಾಹನಗಳನ್ನು ತಂದು ತಪಾಸಣೆ ಮಾಡಿಸಬೇಕಾಗಿದೆ ಎಂದು ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಮೋಹನ್ ಅಲವತ್ತುಕೊಂಡರು.

ಜಯಕರ್ನಾಟಕ ಸಂಘಟನೆ ತಾಲೂಕು ಘಟಕದ ಅಧ್ಯಕ್ಷ ಸುರೇಶ್‍ಶೆಟ್ಟಿ, ವಕ್ಫ್ ಮಂಡಳಿಯ ಸಲಹಾ ಸಮಿತಿ ಜಿಲ್ಲಾ ಅಧ್ಯಕ್ಷ ಕೆ.ಎ.ಯಾಕೂಬ್, ಪಪಂ ಸದಸ್ಯ ಮಹೇಶ್ ಸೇರಿದಂತೆ ಹಲವರು ಧ್ವನಿಗೂಡಿಸಿದರು. ಸಾರ್ವಜನಿಕರ ಹಿತ ಕಾಯಲು ಸರ್ಕಾರ ಕಾನೂನು ಮಾಡಿದೆ. ಯಾರೂ, ಯಾರ ವಿರುದ್ಧವೂ ಸುಳ್ಳು ದೂರು ದಾಖ ಲಿಸುವಂತಿಲ್ಲ. ದೇಶವನ್ನು ಭ್ರಷ್ಟಾಚಾರ ಮುಕ್ತ ಮಾಡಲು ನಮ್ಮ ಇಲಾಖೆಯನ್ನು ಪ್ರಾರಂಭಿಸಲಾಗಿದೆ. ಆದರೆ ಸಂಪೂರ್ಣ ಭ್ರಷ್ಟಾಚಾರ ಮುಕ್ತ ಮಾಡಲು ಸಾಧ್ಯವಾ ಗದಿದ್ದರೂ ಸಾಧ್ಯವಾದಷ್ಟು ಕಡಿಮೆ ಮಾಡಬಹುದು. ಅದಕ್ಕೆ ಸಾರ್ವಜನಿಕರು ತಮಗಾದ ಅನ್ಯಾಯದ ವಿರುದ್ಧ ಸಂಬಂ ಧಿಸಿದ ಅಧಿಕಾರಿ ಅಥವಾ ಇಲಾಖೆಯ ವಿರುದ್ಧ ದೂರು ನೀಡಿವುದು ಅಗತ್ಯ. ಆದ್ದರಿಂದ ಜನರು ಅಳುಕದೆ, ತಮಗಾದ ತೊಂದರೆ ಬಗ್ಗೆ ದೂರು ನೀಡುವಂತೆ ಸಿಪಿಐ ಮನವಿ ಮಾಡಿದರು. ಈ ವೇಳೆ ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಎಸ್. ಮಹೇಶ್, ಇಲಾಖಾಧಿಕಾರಿಗಳಾದ ದಿನೇಶ್, ಲೋಹಿತ್ ಹಾಗೂ ಪ್ರವೀಣ್ ಇದ್ದರು.

Translate »