ಸಮುದಾಯದ ಅಭಿವೃದ್ಧಿಗೆ ಆದ್ಯತೆ: ಹರೀಶ್‍ಕುಮಾರ್
ಚಾಮರಾಜನಗರ

ಸಮುದಾಯದ ಅಭಿವೃದ್ಧಿಗೆ ಆದ್ಯತೆ: ಹರೀಶ್‍ಕುಮಾರ್

November 19, 2018

ಗ್ರಾಮಸ್ಥರಿಂದ ಅಹವಾಲು ಸಲ್ಲಿಕೆ, ಕಾಲೋನಿಯ ಪ್ರತಿ ಬೀದಿಗೆ ಸಿಇಓ ಭೇಟಿ
ಚಾಮರಾಜನಗರ: ದಲಿತ ಸಮು ದಾಯಗಳ ಅಭಿವೃದ್ಧಿಯ ಅವಲೋಕನ ಹಾಗೂ ಗ್ರಾಮದ ಪರಿಸ್ಥಿತಿ ವಾಸ್ತವ ದರ್ಶನದ ಉದ್ದೇಶದೊಂದಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹ ಣಾಧಿಕಾರಿ ಡಾ.ಕೆ.ಹರೀಶ್‍ಕುಮಾರ್ ಆರಂಭಿಸಿರುವ ಮುಸ್ಸಂಜೆ ಮಾತು ಕಾರ್ಯಕ್ರಮಕ್ಕೆ ಗುಂಡ್ಲುಪೇಟೆ ತಾಲೂಕಿನ ಸಿದ್ದಯ್ಯನಪುರ ಕಾಲೋನಿಯಲ್ಲಿ ಶನಿ ವಾರ ಚಾಲನೆ ದೊರೆತಿದೆ.

ಶನಿವಾರ ಸಂಜೆ ಜಿಲ್ಲಾ ಮಟ್ಟದ ಅಧಿ ಕಾರಿಗಳೊಡನೆ ಒಡಗೂಡಿ ದಲಿತ ಸಮು ದಾಯದವರೊಂದಿಗೆ ಸಮಾಲೋಚನೆ ನಡೆಸುವ ಮುಸ್ಸಂಜೆ ಮಾತುಕತೆಗಾಗಿ ಆಗಮಿಸಿದ ಸಿಇಒ ಅವರನ್ನು ಆರತಿ ಬೆಳಗಿ ಸ್ಥಳೀಯರು ಬರಮಾಡಿಕೊಂಡರು.
ಕಾಲೋನಿಯ ಪ್ರತಿ ಬೀದಿಗಳಿಗೂ ಭೇಟಿ ನೀಡಿದ ಹರೀಶ್‍ಕುಮಾರ್ ಅವರು, ಅಲ್ಲಿನ ನೈಜ ಚಿತ್ರಣವನ್ನು ವೀಕ್ಷಿಸಿದರು.
ಈ ವೇಳೆ ಜನರಿಂದ ಅಹವಾಲುಗಳನ್ನು ಸ್ವೀಕರಿಸಿದರು. ಬಳಿಕ ಗ್ರಾಮದಲ್ಲಿ ಆಯೋ ಜಿತವಾಗಿದ್ದ ಸಭೆಯನ್ನು ಡಾ.ಬಿ.ಆರ್.ಅಂಬೇ ಡ್ಕರ್ ಹಾಗೂ ಬಾಬು ಜಗಜೀವನ್‍ರಾಮ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿ ಸುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಹಾಡಿ ವಾಸ್ತವ್ಯ ಹಮ್ಮಿಕೊಂಡಂತೆ ನಮ್ಮ ಸಮು ದಾಯಗಳ ಗ್ರಾಮಗಳಿಗೂ ಭೇಟಿಕೊಟ್ಟು ಸ್ಥಿತಿಗತಿ ಅರಿಯಿರಿ ಎಂಬ ಮನವಿ ಬಂದಿತ್ತು. ಇದಕ್ಕಾಗಿಯೇ ಸಂಜೆಯ ವೇಳೆ ದಲಿತ ಸಮುದಾಯಗಳ ಕಾಲೋನಿಯಲ್ಲಿ ಅಧಿ ಕಾರಿಗಳ ಜೊತೆಗೆ ಜನರ ಗ್ರಾಮಗಳ ಪರಿ ಸ್ಥಿತಿಯನ್ನು ನೇರವಾಗಿ ಅರಿತು ಅಭಿವೃದ್ಧಿ ಸಂಬಂಧ ಏನು? ಮಾಡಬಹುದು ಎಂಬು ದನ್ನು ತಿಳಿಯುವ ಪ್ರಯತ್ನವೇ ಕಾರ್ಯ ಕ್ರಮದ ಉದ್ದೇಶವಾಗಿದೆ ಎಂದರು.

ಸಮುದಾಯ ಪ್ರಜ್ಞೆಯನ್ನು ಅಭಿವೃದ್ಧಿ ಯಲ್ಲಿ ಕಾಣಬೇಕು. ಆಯಾಭಾಗದ ಸಮಸ್ಯೆ ಗಳ ನೈಜ ಚಿತ್ರಣ ನೇರವಾಗಿ ಭೇಟಿ ನೀಡಿ ದಾಗ ಆಗುತ್ತದೆ. ಅಭಿವೃದ್ಧಿ ಕುರಿತ ಸಮಗ್ರ ಮಾಹಿತಿ ಜನರು ಮುಂದಿಡುವ ಬೇಡಿಕೆ, ಮೂಲ ಸೌಕರ್ಯಗಳ ಕೊರತೆಯಂತಹ ಅನೇಕ ವಿಷಯಗಳು ಮನನವಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮದ ಉಪಯುಕ್ತ ತೆಯಾಗಲಿದೆ ಎಂದು ತಿಳಿಸಿದರು.
ಈ ವೇಳೆ ಯಾವ ಯಾವ ಅಭಿವೃದ್ಧಿ ಕೆಲಸಗಳು ಆಗಬೇಕಿದೆ? ಯಾವ ಸೌಲಭ್ಯ ಗಳು ತಲುಪಬೇಕಿದೆ? ನಿಮಗೆ ಉದ್ಯೋಗ ಕೈಗೊಳ್ಳಲು ಯಾವ ರೀತಿಯ ತರಬೇತಿ ಬಯಸುವಿರಿ? ಎಂಬ ಬಗ್ಗೆ ಜನರೊಡನೆ ನೇರವಾಗಿ ಸಂವಾದ ನಡೆಸಲಾಯಿತು. ಟಿಎಪಿಸಿಎಂಎಸ್ ಸದಸ್ಯರು ಹಾಗೂ ಗ್ರಾಮದ ಮುಖಂಡರಾದ ಸೋಮ ಶೇಖರ ಅವರು ಸಮಗ್ರವಾಗಿ ಇದುವರೆಗೆ ಗ್ರಾಮಕ್ಕೆ ಆಗಿರುವ ಅನುಕೂಲಗಳು ಹಾಗೂ ಅವಶ್ಯಕತೆ ಇರುವ ಮೂಲ ಸೌಕರ್ಯಗಳ ಬಗ್ಗೆ ಮನವಿ ಮಾಡಿದರು.

ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಉಪ ನಿರ್ದೇಶಕರು ಹಾಗೂ ಜಂಟಿ ಕೃಷಿ ನಿರ್ದೇಶಕ ಎಂ.ತಿರು ಮಲೇಶ್, ಪ್ರಾಸ್ತಾವಿಕ ನುಡಿಗಳನ್ನಾಡಿ ದರು. ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Translate »