ವಾಯುಪಡೆಗೆ ರಫೇಲ್ ವಿದ್ಯುಕ್ತ ಸೇರ್ಪಡೆ
ಮೈಸೂರು

ವಾಯುಪಡೆಗೆ ರಫೇಲ್ ವಿದ್ಯುಕ್ತ ಸೇರ್ಪಡೆ

September 11, 2020

ಅಂಬಾಲಾ(ಹರ್ಯಾಣ), ಸೆ.10- ನಮ್ಮ ದೇಶದ ಸಾರ್ವಭೌಮತ್ವದ ಮೇಲೆ ಕಣ್ಣಿಡು ತ್ತಿರುವವರಿಗೆ ರಫೇಲ್ ಯುದ್ಧ ವಿಮಾನ ಭಾರತೀಯ ವಾಯುಪಡೆಗೆ ಸೇರ್ಪಡೆ ಅತಿದೊಡ್ಡ ಕಠಿಣ ಸಂದೇಶ ರವಾನಿಸಿದೆ. ನಮ್ಮ ದೇಶದ ಗಡಿಭಾಗದಲ್ಲಿ ಸದ್ಯ ಇರುವ ಪರಿಸ್ಥಿತಿಗೆ ಅಥವಾ ನಮ್ಮ ನೆರೆಯ ದೇಶಗಳು ಉಂಟು ಮಾಡಿರುವ ಪರಿಸ್ಥಿತಿ ಪರಿಗಣಿಸಿದರೆ ರಫೇಲ್ ಯುದ್ಧ ವಿಮಾನ ಸೇರ್ಪಡೆ ಅತ್ಯಂತ ಮುಖ್ಯವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಹರ್ಯಾಣದ ಅಂಬಾಲಾ ವಾಯುನೆಲೆಯಲ್ಲಿ ಇಂದು ವಿಧ್ಯುಕ್ತವಾಗಿ ಫ್ರಾನ್ಸ್‍ನಿಂದ ಖರೀದಿಸಲಾದ ರಫೇಲ್ ಯುದ್ಧ ವಿಮಾನವನ್ನು ಸೇರ್ಪಡೆಗೊಳಿಸುವ ಕಾರ್ಯಕ್ರಮ ನೆರವೇರಿತು. ಸರ್ವಧರ್ಮ ಪೂಜೆಯ ಮೂಲಕ ಯುದ್ಧ ವಿಮಾನವನ್ನು ಸೇರ್ಪಡೆಗೊಳಿಸಿದ ಬಳಿಕ ಮಾತನಾಡಿದ ರಕ್ಷಣಾ ಸಚಿವರು, ಇತ್ತೀಚೆಗೆ ನಾನು ರಷ್ಯಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭಾರತದ ದೃಷ್ಟಿಕೋನ, ನಿಲುವನ್ನು ಜಗತ್ತಿನ ಮುಂದೆ ಸಾರಿದ್ದೇನೆ. ಭಾರತ ದೇಶದ ಸ್ವಾಯತ್ತತೆ, ಪ್ರಾಂತೀಯ ಐಕ್ಯತೆ, ಸಾರ್ವಭೌಮತ್ವದ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ನಮ್ಮ ಬದ್ಧತೆ, ತೀರ್ಮಾನದ ಬಗ್ಗೆ ಕೂಡ ಸ್ಪಷ್ಟ ಸಂದೇಶ ರವಾನಿಸಿದ್ದೇನೆ ಎಂದರು. ಕಾಲ ಬದಲಾದಾಗ ಅದಕ್ಕೆ ತಕ್ಕಂತೆ ನಾವು ಬದಲಾಗಬೇಕು, ನಮ್ಮನ್ನು ನಾವು ಸಂಪೂರ್ಣವಾಗಿ ಸನ್ನದ್ಧ ಮಾಡಿಕೊಳ್ಳಬೇಕು ಎಂಬುದನ್ನು ನಾವು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೇವೆ ಎಂದರು.

Translate »