ಮೈಸೂರು, ಮೇ 22(ಆರ್ಕೆ) ಜೂನ್ 1ರಿಂದ ರಾಜ್ಯದಾದ್ಯಂತ ಮತ್ತಷ್ಟು ರೈಲು ಸಂಚಾರ ಆರಂಭಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ. ನೈರುತ್ಯ ರೈಲ್ವೆಯು ಜೂ.1ರಿಂದ 100 ಜೋಡಿ ರೈಲು ಸೇವೆಯನ್ನು ಆರಂಭಿಸ ಲಿದ್ದು, ಮುಂಗಡವಾಗಿ ಟಿಕೆಟ್ ಗಳನ್ನು ಕಾಯ್ದಿರಿಸಲು ಮೈಸೂರು ವಿಭಾಗದ ವ್ಯಾಪ್ತಿಯ ಮೈಸೂರು, ದಾವಣಗೆರೆ, ಶಿವಮೊಗ್ಗ ಮತ್ತು ಹಾಸನ ರೈಲು ನಿಲ್ದಾಣಗಳಲ್ಲಿ ಪಿಆರ್ಎಸ್ ಕೌಂಟರ್ಗಳನ್ನು ತೆರೆಯಲಾಗಿದೆ ಎಂದು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕಿ ಪ್ರಿಯಾಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೈಸೂರು-ಬೆಂಗಳೂರು ನಡುವೆ ಭಾನುವಾರ ಹೊರತುಪಡಿಸಿ ವಾರದಲ್ಲಿ 6 ದಿನ ಎಕ್ಸ್ಪ್ರೆಸ್ ವಿಶೇಷ ರೈಲು ಹಾಗೂ ಬೆಂಗಳೂರಿನಿಂದ ಬೆಳಗಾವಿಗೆ ವಾರದಲ್ಲಿ 3 ದಿನ ಎಕ್ಸ್ಪ್ರೆಸ್ ವಿಶೇಷ ರೈಲು ಸಂಚರಿಸುವುದರಿಂದ ಮುಂಗಡ ಟಿಕೆಟ್ ಕಾಯ್ದಿರಿಸಲು ಕೌಂಟರ್ಗಳು ಇಂದಿನಿಂದಲೇ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದ್ದಾರೆ. ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ್-19 ಮಾರ್ಗಸೂಚಿಯನ್ನು ಪಾಲಿಸಿ ಕೌಂಟರ್ಗಳಲ್ಲಿ ಟಿಕೆಟ್ ರಿಸರ್ವ್ ಮಾಡಿಸುವ ಮೂಲಕ ಪ್ರಯಾಣಿಕರು ರೈಲ್ವೆ ಇಲಾಖೆಯೊಂದಿಗೆ ಸಹಕರಿಸಬೇಕೆಂದೂ ಪ್ರಿಯಾಶೆಟ್ಟಿ ತಿಳಿಸಿದ್ದಾರೆ.