ಜಾಗ ವಿವಾದ: ದಂಪತಿ ಮೇಲೆ ಹಲ್ಲೆ
ಮೈಸೂರು

ಜಾಗ ವಿವಾದ: ದಂಪತಿ ಮೇಲೆ ಹಲ್ಲೆ

December 8, 2018

ಮೈಸೂರು: ಮನೆ ಪಕ್ಕದಲ್ಲಿರುವ ತಗ್ಗು ಪ್ರದೇಶಕ್ಕೆ ಮಣ್ಣು ತುಂಬಿ ಸುವ ವಿಚಾರಕ್ಕೆ ಗುಂಪೊಂದು ದಂಪತಿ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿರುವ ಘಟನೆ ಹೆಚ್.ಡಿ.ಕೋಟೆ ತಾಲೂಕು, ಆಲನಹಳ್ಳಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ಗ್ರಾಮದ ಜವರನಾಯ್ಕ ಹಾಗೂ ಪತ್ನಿ ಸುಂದರಮ್ಮ ತೀವ್ರವಾಗಿ ಗಾಯ ಗೊಂಡವರಾಗಿದ್ದು, ಅವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಲಾ ಗಿದೆ. ತಮ್ಮ ಮನೆಯ ಪಕ್ಕದಲ್ಲಿರುವ ತಗ್ಗು ಪ್ರದೇಶಕ್ಕೆ ಮಣ್ಣು ತುಂಬಿಸುತ್ತಿದ್ದ ತಮಗೆ ಅದೇ ಗ್ರಾಮದ ಗಿರೀಶ್, ಮನೋಜ್, ರವೀಶ ಹಾಗೂ ನವೀನ ಅಡ್ಡಿಪಡಿಸಿ ದೊಣ್ಣೆ, ಕಲ್ಲಿನಿಂದ ಹಲ್ಲೆ ಮಾಡಿ ಗಾಯಗೊಳಿಸಿದರೆಂದು ಜವರನಾಯ್ಕ ಹಾಗೂ ಸುಂದರಮ್ಮ ಅವರು ಆಸ್ಪತ್ರೆಯಲ್ಲಿ ಹೆಚ್.ಡಿ.ಕೋಟೆ ಠಾಣೆ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಗುರುವಾರ ಮಧ್ಯಾಹ್ನ ಘಟನೆಯಾಗಿರುವ ವಿಷಯ ತಿಳಿಸಿದರೂ, ಅಂದು ಬಾರದ ಪೊಲೀಸರು, ಇಂದು ಬೆಳಿಗ್ಗೆ ಬಂದ ಸ್ವಾಮಿ ಎಂಬ ಸಿಬ್ಬಂದಿ ಲಿಖಿತ ಹೇಳಿಕೆ ದಾಖಲಿಸದೆ ಗಾಯಾಳುಗಳಿಂದ ಖಾಲಿ ಪೇಪರ್‍ಗೆ ಸಹಿ ಮಾಡಿಸಿಕೊಂಡರೆಂದು ಆರೋಪಿಸಿ ಸಂಬಂಧಿಕರು ಪ್ರತಿರೋಧ ವ್ಯಕ್ತಪಡಿಸಿದ ಬಳಿಕ ಎಎಸ್‍ಐ ಆಗಮಿಸಿ ಘಟನೆ ಬಗ್ಗೆ ಹೇಳಿಕೆ ದಾಖಲಿಸಿಕೊಂಡರು. ಪ್ರಕರಣ ದಾಖಲಿಸಿಕೊಂಡಿರುವ ಹೆಚ್.ಡಿ.ಕೋಟೆ ಠಾಣೆ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

Translate »