ಮೈಸೂರು ಡಿಸಿಯಾಗಿ ನಿಯೋಜಿಸಲು ಮನವಿ ಮಾಡಿದ್ದೇನೆ: ರಂದೀಪ್
ಮೈಸೂರು

ಮೈಸೂರು ಡಿಸಿಯಾಗಿ ನಿಯೋಜಿಸಲು ಮನವಿ ಮಾಡಿದ್ದೇನೆ: ರಂದೀಪ್

June 15, 2018

ಮೈಸೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ವರ್ಗಾವಣೆಯಾಗಿದ್ದ ಅಧಿಕಾರಿಗಳನ್ನು ಮತ್ತೆ ಮೂಲ ಸ್ಥಾನದಲ್ಲಿ ಮುಂದುವರೆಸುವಂತೆ ಸರ್ಕಾರ ಆದೇಶಿಸಿರುವ ಮಾಹಿತಿ ಇದ್ದು, ಒಂದು ವಾರದಲ್ಲಿ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ ಎಂದು ಮಾಜಿ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಗುರುವಾರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು, ಇದುವರೆಗೂ ನನಗೆ ಯಾವುದೇ ಹುದ್ದೆ ನೀಡಿಲ್ಲ. ಮೈಸೂರಿನಿಂದ ಹಾಸನಕ್ಕೆ ವರ್ಗಾವಣೆಯಾಗಿತ್ತು. ನಂತರ ಅಲ್ಲಿ ವರದಿ ಮಾಡಿಕೊಂಡ ನಂತರ ನಡೆದ ಬೆಳವಣ ಗೆಯಿಂದಾಗಿ ರಜೆ ಹಾಕಿದ್ದೆ. ಇಂದಿಗೂ ನಾನು ಸೇರಿದಂತೆ ಒಟ್ಟು 36 ಅಧಿಕಾರಿಗಳಿಗೆ ಯಾವುದೇ ಸ್ಥಳ ನಿಯೋಜಿಸಿಲ್ಲ. ಈ ನಡುವೆ ಚುನಾವಣೆಯ ಹಿನ್ನೆಲೆಯಲ್ಲಿ ವರ್ಗ ಮಾಡಲಾಗಿದ್ದ ಅಧಿಕಾರಿಗಳನ್ನು ಮತ್ತೆ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಸ್ಥಳದಲ್ಲಿಯೇ ಮುಂದುವರೆಸುವಂತೆ ಸರ್ಕಾರ ಆದೇಶ ಮಾಡಿರುವ ಬಗ್ಗೆ ಮಾಹಿತಿ ಬಂದಿದೆ. ಇನ್ನು ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗದ ಕಾರಣ ಅಧಿಕಾರಿಗಳ ಸ್ಥಳ ನಿಯೋಜನೆ ಪ್ರಕ್ರಿಯೆಗೆ ಅಡ್ಡಿಯಾಗಿದೆ. ಮುಂದಿನ ಒಂದು ವಾರದಲ್ಲಿ ಸ್ಪಷ್ಟ ಚಿತ್ರಣ ದೊರೆಯಲಿದೆ. ನಾನು ಮೈಸೂರಿನಲ್ಲಿಯೇ ಮುಂದುವರೆಸುವಂತೆ ಕೇಳಿದ್ದೇನೆ. ಈ ಹಿಂದೆ ಕೇವಲ ಒಂದೂವರೆ ವರ್ಷ ಮಾತ್ರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿರುವುದರಿಂದ. ಸೇವೆ ಮುಂದುವರೆಸುವಂತೆ ಕೋರಿದ್ದೇನೆ ಎಂದು ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

Translate »