ಮೈಸೂರು, ಜ. 6(ಆರ್ಕೆ)- ಕೇಂದ್ರ ಸರ್ಕಾರದ ‘ಸ್ವದೇಶ ದರ್ಶನ’ ಯೋಜನೆಯಡಿ ಪ್ರವಾಸೋದ್ಯಮ ಅಭಿವೃದ್ಧಿಗೆ ಮೈಸೂರು ನಗರ ಆಯ್ಕೆಯಾ ಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿ ಸಿದ್ದಾರೆ. ಮೈಸೂ ರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯವು ಜಾರಿಗೆ ತಂದಿರುವ ಸ್ವದೇಶ ದರ್ಶನ ಮಹತ್ವಾಕಾಂಕ್ಷೆ ಯೋಜನೆ ಅನುಷ್ಠಾನಕ್ಕೆ ಕರ್ನಾಟಕ ರಾಜ್ಯದ ಮೈಸೂರು ಮತ್ತು ಹಂಪಿಯನ್ನು ಆಯ್ಕೆ ಮಾಡಲಾಗಿದ್ದು, ಈ ಬಗ್ಗೆ ಇಷ್ಟರಲ್ಲೇ ಅಧಿಕೃತ ಆದೇಶ ಹೊರ ಬೀಳಲಿದೆ ಎಂದರು.
ಈ ಯೋಜನೆಯಡಿ ಪ್ರವಾಸೋದ್ಯಮ ಅಭಿ ವೃದ್ಧಿ ಚಟುವಟಿಕೆ ಕೈಗೊಳ್ಳಲು ಅನುದಾನ ಕೋರಿ ಮೈಸೂರು ಸೇರಿದಂತೆ ರಾಜ್ಯದ 5 ನಗರಗಳ ಪ್ರಸ್ತಾವನೆ ಸಲ್ಲಿಸಲಾಗಿತ್ತು. ನಾನು, ಮುಖ್ಯಮಂತ್ರಿಗಳು, ಕೇಂದ್ರ ಪ್ರವಾಸೋದ್ಯಮ ಸಚಿವರನ್ನು ಭೇಟಿ ಮಾಡಿ ಪ್ರವಾ ಸೋದ್ಯಮಕ್ಕೆ ವಿಫುಲ ಅವಕಾಶವಿರುವ ಸಾಂಸ್ಕøತಿಕ ನಗರಿಯನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಅವರು ಮೈಸೂರನ್ನು ಆಯ್ಕೆ ಮಾಡಲು ಸಮ್ಮತಿಸಿದರು ಎಂದು ತಿಳಿಸಿದರು.
ಅಧಿಕೃತ ಆದೇಶ ಬಂದ ನಂತರ ದೊಡ್ಡಕೆರೆ ಮೈದಾನದಲ್ಲಿರುವ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ವರ್ಷದ 365 ದಿನವೂ ಸ್ಥಳೀಯ ಉತ್ಪನ್ನಗಳ ಮಾರಾಟ ವ್ಯವಸ್ಥೆಗೆ ಡಿಪಿಆರ್ ತಯಾರಿಸಿ ಸರ್ಕಾರದಿಂದ ಅನುಮೋದನೆ ಪಡೆದು ಕೊಂಡು ವರ್ಷ ಪೂರ್ತಿ ದಸರಾ ವಸ್ತುಪ್ರದರ್ಶನ ತೆರೆದು ಮಾರಾಟ ವಹಿವಾಟು ನಿರಂತರವಾಗಿ ನಡೆಯಲು ಕ್ರಮ ಕೈಗೊಳ್ಳಲಾ ಗುವುದು ಎಂದು ಸಂಸದರು ನುಡಿದರು. ಇಲ್ಲಿನ ಗುಡಿಗಾರಿಕೆ, ಕರಕುಶಲ ವಸ್ತು, ಚನ್ನಪಟ್ಟಣದ ಬೊಂಬೆಗಳು, ಸುತ್ತಲಿನ ಸಣ್ಣ ಉದ್ಯಮಗಳಲ್ಲಿ ತಯಾರಿಸಿದ ಉತ್ಪನ್ನಗಳು, ಮೈಸೂರು ಸಿಲ್ಕ್ ಸೀರೆ ಮುಂತಾದವುಗಳು ಪ್ರವಾಸಿಗರಿಗೆ ಸಿಗುವಂತೆ ಮಾಡಿ ಕೇವಲ ದಸರಾ ಸಂದರ್ಭ ದಲ್ಲಷ್ಟೇ ಚಟುವಟಿಕೆಗೆ ಸೀಮಿತವಾಗಿದ್ದ ಮೈಸೂರು ದಸರಾ ವಸ್ತುಪ್ರದರ್ಶನ ವರ್ಷ ಪೂರ್ತಿ ನಡೆಯುವಂತೆ ಯೋಜನೆ ರೂಪಿಸಲಾಗು ವುದು ಎಂದು ಪ್ರತಾಪ್ ಸಿಂಹ ತಿಳಿಸಿದರು.
ಪ್ರಸಾದ ಯೋಜನೆ: ಪ್ರಸಾದ ಯೋಜನೆ ಯಡಿ ಮೈಸೂರು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು 49.29 ಕೋಟಿ ರೂ. ಅನುದಾನವನ್ನು ಇನ್ನೆರಡು ದಿನಗಳಲ್ಲಿ ಬಿಡುಗಡೆ ಮಾಡಲಿದೆ. ಅದರಡಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸುವ ಕಾಮಗಾರಿ ಕೈಗೊಳ್ಳಲಾಗುವುದು. ವಿಶ್ರಾಂತಿ ಗೃಹ, ಶುದ್ಧ ಕುಡಿಯುವ ನೀರು, ಮಾಹಿತಿ ಕೇಂದ್ರ ಸೇರಿದಂತೆ ಹಲವು ಸೌಕರ್ಯಗಳನ್ನು ಪ್ರಸಾದ ಯೋಜನೆ ಯಡಿ ಒದಗಿಸಲು ಮುಜರಾಯಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪ್ರತಾಪ ಸಿಂಹ ನುಡಿದರು.
ಅದೇ ರೀತಿ ಮೈಸೂರು ಸುತ್ತಮುತ್ತಲ ದೇವಸ್ಥಾನಗಳನ್ನೂ ಅಭಿವೃದ್ಧಿಗೊಳಿಸಲು ಯೋಜನೆ ರೂಪಿಸಲಾಗುತ್ತಿದೆ. ಆ ಮೂಲಕ ದೇಶ-ವಿದೇಶಗಳ ಪ್ರವಾಸಿಗರನ್ನು ಮೈಸೂರಿ ನತ್ತ ಸೆಳೆಯುವುದು ನಮ್ಮ ಸರ್ಕಾರದ ಆದ್ಯತೆ ಯಾಗಿದೆ ಎಂದು ಸಂಸದರು ತಿಳಿಸಿದರು.