ಶರಣರ ಜೀವನ ಮೌಲ್ಯಗಳು ಎಂದೆಂದಿಗೂ ಪ್ರಸ್ತುತ
ಮೈಸೂರು

ಶರಣರ ಜೀವನ ಮೌಲ್ಯಗಳು ಎಂದೆಂದಿಗೂ ಪ್ರಸ್ತುತ

July 9, 2018

ಮೈಸೂರು:  ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ವತಿಯಿಂದ ಮೈಸೂರಿನ ಸರಸ್ವತಿಪುರಂನಲ್ಲಿರುವ ಜೆಎಸ್‍ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ನಡೆದ ಶಿವಾನುಭವ ದಾಸೋಹ ಉಪನ್ಯಾಸ ಕಾರ್ಯಕ್ರಮದಲ್ಲಿ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಬಿ.ವಿ.ವಸಂತಕುಮಾರ್ ಅವರು `ಶರಣರ ಜೀವನಮೌಲ್ಯ’ ಕುರಿತು ಉಪನ್ಯಾಸ ನೀಡಿದರು.

ಬಸವಣ್ಣ, ಅಕ್ಕಮಹಾದೇವಿ, ಅಲ್ಲಮ, ಸತ್ಯಕ್ಕ ಮೊದಲಾದ ಶಿವಶರಣರ ವಚನ ಗಳನ್ನು ಉದಾಹರಿಸುತ್ತಾ ಅವರು ಶರಣರ ಜೀವನ ಮೌಲ್ಯಗಳು ಯಾವುದೋ ಒಂದು ಕಾಲಕ್ಕೆ ಸೀಮಿತವಾದುದಲ್ಲ. ಅವು ಸಾರ್ವಕಾಲಿಕ ಸತ್ಯ. ಮನುಷ್ಯ-ಮನು ಷ್ಯರ ನಡುವೆ ಇಂದು ಸಂಬಂಧಗಳು ಶಿಥಿಲಗೊಳ್ಳುತ್ತಿವೆ. ಜಾತ್ಯಾತೀತ ಭಾವನೆ ದೂರವಾಗುತ್ತಿದೆ. ಜಾತೀಯತೆ ಹೆಚ್ಚಾಗುತ್ತಿದೆ. ಸಮಾಜದ ಆರೋಗ್ಯ ಸರಿಯಾಗ ಬೇಕಾದರೆ ಮೇಲು-ಕೀಳು ಭಾವನೆ ದೂರವಾಗಬೇಕು. ಶಿವಶರಣರ ವಚನಗಳ ಮೂಲಕ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ನುಡಿದರು. ಮಾಜಿ ವಿಧಾನ ಪರಿಷತ್ ಸದಸ್ಯ ತೋಂಟದಾರ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, 12ನೇ ಶತಮಾನದ ಶಿವಶರಣರು ಸಾಹಿತ್ಯ ಸೃಷ್ಟಿ ಮಾಡಲು ಹೊರಟವರಲ್ಲ, ಅವರ ನಡೆ ನುಡಿಗಳೇ ಸಾಹಿತ್ಯದ ರೂಪ ಪಡೆದುಕೊಂಡಿದೆ ಎಂದರು.

Translate »