ವರಿಷ್ಠರಿಂದಲೇ ಅಭ್ಯರ್ಥಿಗಳ ಆಯ್ಕೆ
News

ವರಿಷ್ಠರಿಂದಲೇ ಅಭ್ಯರ್ಥಿಗಳ ಆಯ್ಕೆ

November 4, 2022

ಬೆಂಗಳೂರು,ನ.3(ಕೆಎಂಶಿ)-ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಆಯ್ಕೆಯನ್ನು ವರಿಷ್ಠರೇ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಇಂದಿಲ್ಲಿ ಪ್ರಕಟಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ಕಾಂಗ್ರೆಸ್‍ನ ಹಿರಿಯ ನಾಯಕರು ಹಾಗೂ ಮಾಜಿ ಸಂಸದ ಮುದ್ದಹನುಮೇಗೌಡ, ಚಿತ್ರನಟ ಶಶಿಕುಮಾರ್, ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್ ಸೇರಿದಂತೆ ಹಲವು ಮುಖಂಡರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು, ಚುನಾವಣೆಯಲ್ಲಿ ನಾನು ಕಣಕ್ಕಿಳಿಯಬೇಕೇ ಬೇಡವೇ ಎಂಬ ನಿರ್ಧಾರವನ್ನು ವರಿಷ್ಠರೇ ಮಾಡಲಿದ್ದಾರೆ.

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಈಗಾಗಲೇ ವರಿಷ್ಠರು ಚಾಲನೆ ನೀಡಿದ್ದಾರೆ. ಪಕ್ಷದ ಸಿದ್ಧಾಂತ ಒಪ್ಪಿ ಕಮಲದ ಕೈ ಹಿಡಿಯುವವರನ್ನು ವರಿಷ್ಠರು ಕೈಬಿಡುವುದಿಲ್ಲ. ಪಕ್ಷದ ತೀರ್ಮಾನಕ್ಕೆ ನೀವು, ನಾವೆಲ್ಲರೂ ಬದ್ಧರಾಗಿರಬೇಕು. ಟಿಕೆಟ್ ನೀಡುವ ಅಂತಿಮ ನಿರ್ಧಾರವನ್ನು ಸಂಸದೀಯ ಮಂಡಳಿ ಕೈಗೊಳ್ಳುತ್ತದೆ. ಪಕ್ಷದ ವರಿಷ್ಠರು ಬಲವಾಗಿದ್ದಾರೆ. ಅವರಿಗೆ ಇಡೀ ರಾಷ್ಟ್ರದಲ್ಲಿ ಕಮಲವನ್ನು ಅರಳಿಸಬೇಕು ಎಂಬ ಅಪೇಕ್ಷೆ ಇದೆ. ಆ ನಿಟ್ಟಿನಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಚುನಾವಣೆ ಯಲ್ಲಿ ಸ್ಪರ್ಧೆಗಿಳಿಯುವ ಅಭ್ಯರ್ಥಿಗಳ ಆಯ್ಕೆಯೇ ಪ್ರಮುಖ ಮಾನದಂಡ. ಹಲವು ಕೋನಗಳಿಂದ ಪರಿಶೀಲನೆ ಮಾಡಿ, ಅಭ್ಯರ್ಥಿಗಳ ಆಯ್ಕೆ ಮಾಡುತ್ತಾರೆ. ಹೀಗಾಗಿ ಯಾರಿಗೂ ಭರವಸೆ ನೀಡಲಾಗುವುದಿಲ್ಲ. ಟಿಕೆಟ್ ಹಂಚಿಕೆ ನಮ್ಮ ಕೈಯ್ಯಲ್ಲಿ ಇಲ್ಲ ಎಂದು ವೇದಿಕೆಯಿಂದಲೇ ಕಾರ್ಯಕರ್ತರಿಗೆ ಸಂದೇಶ ನೀಡಿದರು.

ಪ್ರಮುಖ ನಾಯಕರ ಭಾಜಪ ಸೇರ್ಪಡೆಯಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣ ಜನಮನ್ನಣೆ ಪಡೆ ಯುವ ದಿಕ್ಸೂಚಿ ನಿಚ್ಚಳವಾಗಿದೆ ಎಂದರು. ಇಂದು ಕಾಂಗ್ರೆಸ್ ಪಕ್ಷದಲ್ಲಿರುವ ಹತ್ತು ಹಲವಾರು ನಾಯಕರು, ಬಹಳಷ್ಟು ವರ್ಷಗಳು ಪಕ್ಷಕ್ಕಾಗಿ ದುಡಿದರೂ, ಅವರ ಸೇವೆ ಹಾಗೂ ಸಜ್ಜನಿಕೆಗೆ ಬೆಲೆ ಕಾಂಗ್ರೆಸ್ ಪಕ್ಷದಲ್ಲಿಲ್ಲ ಎಂದು ಸಂಪೂರ್ಣ ಖಾತ್ರಿಯಾದ ನಂತರ ಭಾಜಪ ದೇಶಭಕ್ತ, ವಿಶ್ವಮಾನ್ಯ ನಾಯಕ ನರೇಂದ್ರ ಮೋದಿಯವರ ನೇತೃತ್ವದ ಪಕ್ಷವಾಗಿದ್ದು, ಡಬಲ್ ಇಂಜಿನ್ ಸರ್ಕಾರ ಕರ್ನಾಟಕದ ಏಳಿಗೆಗಾಗಿ, ಪ್ರಗತಿಗಾಗಿ ಕೆಲಸ ಮಾಡಲಾಗುತ್ತದೆ ಎಂಬ ವಿಶ್ವಾಸದೊಂದಿಗೆ ಎಲ್ಲ ಪ್ರಮುಖರು ಇಂದು ಭಾಜಪವನ್ನು ಸೇರಿದ್ದಾರೆ ಎಂದರು. ಮುದ್ದಹನುಮೇಗೌಡ ತುಮಕೂರು ಜಿಲ್ಲೆಯ ನಾಯಕರಾಗಿ, ಶಾಸಕರಾಗಿ, ಸಂಸದರಾಗಿ ವಿಧಾನಸಭೆಯಲ್ಲಿ ಹಾಗೂ ಸಂಸತ್ತಿನಲ್ಲಿ ತಮ್ಮದೇ ಆದ ಸ್ಥಾನವನ್ನು ಪಡೆದ ಸಜ್ಜನ ಮತ್ತು ಜನಪರ ಧ್ವನಿ ಎತ್ತುವ ರಾಜಕಾರಣಿಯಾಗಿ ಸಾರ್ವಜನಿಕ ಜೀವನದಲ್ಲಿರುವವರು. ಅವರು ಇಂದು ಭಾಜಪಕ್ಕೆ ಸೇರ್ಪಡೆಯಾಗಿ ರುವುದು ನಮ್ಮ ಪಕ್ಷಕ್ಕೆ ಬಹಳ ದೊಡ್ಡ ಬಲ ಬಂದಿದೆ ಎಂದರು.

ಶಶಿಕುಮಾರ್ ಅವರು ಸಂಸತ್ ಸದಸ್ಯರಾಗಿದ್ದು, ಭಾಜಪದಲ್ಲಿದ್ದರೆ ಗೌರವ ಎಂದು ಅರಿತು ನಮ್ಮಲ್ಲಿ ಸೇರಿದ್ದಾರೆ. ಖ್ಯಾತ ಚಲನಚಿತ್ರ ನಟರಾಗಿರುವ ಅವರು ರಾಜ್ಯದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದು, ಎಸ್‍ಟಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರ ಸೇರ್ಪಡೆಯಿಂದ ಪಕ್ಷಕ್ಕೆ ಶಕ್ತಿ ಬಂದಿದೆ. ಸೇವಾದಳದಲ್ಲಿ ಕಾರ್ಯ ನಿರ್ವಹಿಸಿದ ಹನುಮಂತರಾವ್, ಅಂತಹ ಪರಿಶ್ರಮಿಗೂ ಬೇರೆ ಪಕ್ಷದಲ್ಲಿ ಬೆಲೆಯಿಲ್ಲ ಎಂದು ಮನಗಂಡು ಭಾಜಪ ಸೇರಿದ್ದಾರೆ. ಅವರ ಸೇವೆಯನ್ನು ಪಕ್ಷ ಬಯಸುತ್ತದೆ ಎಂದರು.

ನಿವೃತ್ತ ಐಎಎಸ್ ಅಧಿಕಾರಿ ಬಿ.ಹೆಚ್.ಅನಿಲ್‍ಕುಮಾರ್ ಅವರು ಸದಾಕಾಲ ಜನಪರ ಕೆಲಸ ಮಾಡಿದ್ದು, ಅವರೊಂದಿಗೆ ಸುಮಾರು 35 ವರ್ಷಗಳ ಬಾಂಧವ್ಯ ಇದೆ. ವಿಶೇಷವಾಗಿ ದೀನದಲಿತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಅವರು ಎಸ್‍ಸಿ ಸಮು ದಾಯಕ್ಕೆ ಸೇರಿದ್ದು, ಮೌಲಿಕ ರಾಜಕಾರಣಕ್ಕೆ ಇಂದು ಬೆಲೆ ದೊರೆತಿದೆ. ರಮೇಶ್ ಮುನಿಯಪ್ಪ ನವರು ಆಡಳಿತದಲ್ಲಿ ಅಪಾರವಾದ ಅನುಭವ ಹೊಂದಿದವರು. ದಿಲ್ಲಿಯಲ್ಲಿದ್ದ ಇವರಿಗೆ ರಾಷ್ಟ್ರೀಯ ರಾಜಕಾರಣದ ಬಗ್ಗೆ ಅನುಭವವಿದೆ. ಈ ಎಲ್ಲ ನಾಯಕರನ್ನು ಭಾರತೀಯ ಪಕ್ಷಕ್ಕೆ ತುಂಬು ಹೃದಯದಿಂದ ಸ್ವಾಗತಿಸುತ್ತಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

Translate »