ಶೀಘ್ರದಲ್ಲೇ ಹಾಲಿನ ದರ ಏರಿಕೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸುಳಿವು
ಮೈಸೂರು

ಶೀಘ್ರದಲ್ಲೇ ಹಾಲಿನ ದರ ಏರಿಕೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸುಳಿವು

March 21, 2022

ಬೆಳಗಾವಿ, ಮಾ.೨೦- ಇಂಧನ ದರ ಏರಿಕೆ, ಖಾದ್ಯ ತೈಲ ದರ ಏರಿಕೆಯಿಂದಾಗಿ ತತ್ತರಿಸಿರುವ ಗ್ರಾಹಕರಿಗೆ ಮತ್ತೊಂದು ಶಾಕ್ ಕಾದಿದ್ದು, ಶೀಘ್ರದಲ್ಲೇ ನಂದಿನಿ ಹಾಲಿನ ದರ ಕೂಡ ಏರಿಕೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಸ್ವತಃ ಕರ್ನಾಟಕ ಹಾಲು ಒಕ್ಕೂಟ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದು, ನಂದಿನಿ ಹಾಲಿನ ದರ ಹೆಚ್ಚಳಕ್ಕೆ ೧೪ ಜಿಲ್ಲೆಗಳ ಹಾಲಿನ ಒಕ್ಕೂಟದವರು ಒತ್ತಡ ಹೇರುತ್ತಿದ್ದಾರೆ. ಹಾಲಿನ ದರ ಹೆಚ್ಚಳ ಮಾಡಬೇಕು. ಆ ಹಣವನ್ನು ರೈತರಿಗೆ ನೀಡುತ್ತೇವೆ ಎಂದು ಹೇಳಿದ್ದಾರೆ. ಅದನ್ನೇ ನಾವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ
ಮನವಿ ಮಾಡಿದ್ದೇವೆ. ಸಾಧಕ ಬಾಧಕ ನೋಡಿ ಬಳಿಕ ನಿರ್ಧಾರ ತಗೆದುಕೊಳ್ಳೋಣ ಎಂದು ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಬೇಸಿಗೆ ಕಾಲದಲ್ಲಿ ಹಾಲು ಕಡಿಮೆ ಬರುತ್ತದೆ. ಹೀಗಾಗಿ ಹೆಚ್ಚಿನ ದರ ಕೊಟ್ಟರೆ ರೈತರಿಗೆ ಅನುಕೂಲ ಆಗುತ್ತದೆ. ಬೆಳಗಾವಿಯಲ್ಲಿ ಆಕಳು ಹಾಲು ೨೩ ರೂ.ನಷ್ಟು ಇತ್ತು ೨೫ ರೂ. ಮಾಡಿದ್ದೇವೆ. ಎಮ್ಮೆ ಹಾಲು ೩೬ ರೂಪಾಯಿ ಇದ್ದದ್ದನ್ನು ೩೮ ರೂ.ಗಳಷ್ಟು ಮಾಡಿದ್ದೇವೆ ಎಂದರು. ಇಡೀ ಭಾರತದಲ್ಲೇ ನಾವು ಅತಿ ಕಡಿಮೆ ದರದಲ್ಲಿ ಹಾಲು ಮಾರುತ್ತೇವೆ. ಬೇರೆಡೆ ಹಾಲಿನ ದರ ಹೆಚ್ಚಿದೆ. ಗ್ರಾಹಕರಿಗೆ ಹೊರೆ ಆಗದ ಹಾಗೇ ಹಾಲಿನ ದರ ಹೆಚ್ಚು ಮಾಡಿದರೆ ರೈತರಿಗೆ ಅನುಕೂಲ ಆಗುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಾವ ನಿರ್ಧಾರ ತಗೆದುಕೊಳ್ಳುತ್ತಾರೆ ನೋಡಿ ನಾವು ನಿರ್ಣಯ ಕೈಗೊಳ್ಳುತ್ತೇವೆ ಎಂದು ಜಾರಕಿಹೊಳಿ ತಿಳಿಸಿದ್ದಾರೆ.

Translate »