ಶಿರೂರು ಶ್ರೀಗಳಿಗೆ ಒಳ್ಳೆಯ ಗುಣಗಳಿತ್ತು, ಜೊತೆಗೆ ಹೆಣ್ಣು, ಹೆಂಡದ ಚಟವೂ ಇತ್ತು: ಪೇಜಾವರ ಶ್ರೀ ವಿವರಣೆ
ಮೈಸೂರು

ಶಿರೂರು ಶ್ರೀಗಳಿಗೆ ಒಳ್ಳೆಯ ಗುಣಗಳಿತ್ತು, ಜೊತೆಗೆ ಹೆಣ್ಣು, ಹೆಂಡದ ಚಟವೂ ಇತ್ತು: ಪೇಜಾವರ ಶ್ರೀ ವಿವರಣೆ

July 21, 2018

ಉಡುಪಿ:  ನಿನ್ನೆ ಅನುಮಾನಾ ಸ್ಪದವಾಗಿ ಮೃತಪಟ್ಟ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮಿಜಿಗೆ ಮಹಿಳೆಯರ ಚಟವಿತ್ತು ಮತ್ತು ಮದ್ಯಪಾನ ಮಾಡುತ್ತಿದ್ದರು ಎಂದು ಪೇಜಾವರ ಶ್ರೀಗಳು ಶುಕ್ರ ವಾರ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಇಂದು ಉಡುಪಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಷ್ಠಮಠಗಳಲ್ಲಿನ ಹಿರಿಯ ಯತಿ ವಿಶ್ವೇಶತೀರ್ಥ ಶ್ರೀಗಳು, ಶಿರೂರು ಶ್ರೀಗಳ ನಿಗೂಢ ಸಾವಿನ ವಿಚಾರದಲ್ಲಿ ಅಷ್ಟ ಮಠಗಳ ಕಡೆಯಿಂದ ಯಾವುದೇ ತಪ್ಪುಗಳು ನಡೆದಿಲ್ಲ. ಅವರಿಗೆ ಕುಡಿಯುವ ಮತ್ತು ಮಹಿಳೆಯರ ಚಟವಿತ್ತು. ಹೆಣ್ಣು ಮತ್ತು ಹೆಂಡದ ಸಹವಾಸದಿಂದ ಸನ್ಯಾಸತ್ವಕ್ಕೆ ದ್ರೋಹ ಬಗೆದಿದ್ದಾರೆ ಎಂದರು. ನಾನು ಬೇರೆ ಊರಲ್ಲಿ ಇದ್ದ ಕಾರಣ ಶಿರೂರು ಶ್ರೀಗಳ ಅಂತಿಮ ವಿಧಿ-ವಿಧಾನದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ ಮತ್ತು ನಮ್ಮ ಪದ್ಧತಿಯಲ್ಲಿ ಸಾವಿಗೆ ಹೋಗುವ ಕ್ರಮ ಇಲ್ಲ ಎಂದು ಹೇಳಿದ್ದಾರೆ.

ಶಿರೂರು ಶ್ರೀಗಳ ಸಾವು ಕೊಲೆಯಲ್ಲ. ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು. ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳಬೇಕಿತ್ತು. ಅವರ ಸಾವಿಗೆ ವಿಷ ಪ್ರಾಶನವೋ, ಆಹಾರ ದೋಷವೋ ಗೊತ್ತಿಲ್ಲ. ಆದರೆ ಪೊಲೀಸರು ವಿಚಾರಣೆಗೆ ಕರೆದರೆ ಹೋಗುತ್ತೇನೆ ಎಂದರು. ಯಾವ ಸ್ವಾಮೀಜಿಗಳೂ ವಿಷ ಹಾಕಲು ಸಾಧ್ಯವಿಲ್ಲ. ನಾನು ಬಾಲ್ಯದಲ್ಲಿದ್ದಾಗ ಕೆಲವು ಪ್ರಕರಣ ಕೇಳಿದ್ದೆ. ಆದರೆ, ದುಶ್ಚಟ ಬಿಡುವಂತೆ ಸ್ವತಃ ನಾನೇ ಶಿರೂರು ಶ್ರೀಗಳಿಗೆ ಹೇಳಿದ್ದೆ. ತಾರುಣ್ಯದಲ್ಲಿ ಸ್ತ್ರೀಯರ ಸಂಪರ್ಕವಿತ್ತು. ಅವರು ಮಠಾಧೀಶರಿಗೆಲ್ಲಾ ಮಕ್ಕಳಿದ್ದರು ಎಂದು ಹೇಳಿಕೆ ನೀಡಿದ್ದರು. ಅದು ಎಲ್ಲರಿಗೂ ಅಪಾರವಾದ ನೋವು ತಂದಿತ್ತು ಎಂದರು.

ಶಿರೂರು ಶ್ರೀಗಳಿಗೆ ಮಕ್ಕಳಿದ್ದಾರೆ ಎಂದು ಅನಾಮಿಕರೊಬ್ಬರು ಹೇಳಿದ್ದರು. ಈ ಬಗ್ಗೆ 10 ಸಾವಿರ ಕರಪತ್ರ ಹಂಚುವುದಾಗಿ ಹೇಳಿದ್ದರು. ಆದರೆ ಅನಾಮಿಕರು ಮಾಡಿದ ಆರೋಪಗಳೆಲ್ಲವೂ ಸತ್ಯ ಎನ್ನುವುದಕ್ಕೆ ಆಗುವುದಿಲ್ಲ ಎಂದರು. ಇದೇ ವೇಳೆ ಶಿರೂರು ಶ್ರೀಗಳಲ್ಲಿ ಅನೇಕ ಒಳ್ಳೆಯ ಗುಣಗಳಿದ್ದವು. ಉತ್ತಮ ಕಲಾವಿದರಾಗಿದ್ದರು. ವಿದ್ಯಾರ್ಥಿಗಳಿಗೆ ಅತೀ ಹೆಚ್ಚಿನ ಸಹಾಯ ಮಾಡಿದ್ದರು. ಬ್ರಾಹ್ಮಣೇತರರೊಂದಿಗೂ ಬೆರೆತು ಅನೇಕ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ ಎಂದು ಪೇಜಾವರ ಶ್ರೀಗಳು ಹೇಳಿದರು.

Translate »