ಮತ್ತೆ ಬರ್ತಿದ್ದಾರೆ ಕಾವ್ಯಾಂಜಲಿ ಸಹೋದರಿಯರು
ಸಿನಿಮಾ

ಮತ್ತೆ ಬರ್ತಿದ್ದಾರೆ ಕಾವ್ಯಾಂಜಲಿ ಸಹೋದರಿಯರು

July 31, 2020

ಕಿರುತೆರೆಯಲ್ಲಿ ಇತ್ತೀಚೆಗೆ ಡಬ್ಬಿಂಗ್ ಧಾರಾವಾಹಿಗಳ ಅಬ್ಬರವೇ ಜೋರಾಗಿರುವಾಗ ಇದೀಗ ಅಪ್ಪಟ ಕನ್ನಡತನ ಇರುವ ಧಾರಾವಾಹಿ ಯೊಂದು ಪ್ರೇಕ್ಷಕರನ್ನು ರಂಜಿಸಲು ರೆಡಿಯಾಗಿದೆ. ಎಲ್ಲಾ ವರ್ಗದ ಜನರ ಅಭಿರುಚಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ವಿನೂತನ ಕಾರ್ಯಕ್ರಮಗಳ ಮೂಲಕ ಮನರಂಜನೆ ನೀಡುತ್ತಾ ಬಂದಿರುವ ಉದಯ ವಾಹಿನಿ ಈಗ `ಕಾವ್ಯಾಂಜಲಿ’ ಎಂಬ ಅಪ್ಪಟ ಕನ್ನಡತನ ಹೊಂದಿರುವ ಧಾರಾವಾಹಿ ಯನ್ನು ಆಗಸ್ಟ್ 3ರಂದು ಆರಂಭಿಸುತ್ತಿದೆ. ಈಗಾಗಲೇ ನಂದಿನಿ, ಕಸ್ತೂರಿ ನಿವಾಸ, ಸೇವಂತಿ, ಮನಸಾರೆಯಂತಹ ಕೌಟುಂಬಿಕ ಸಂಬಂಧಗಳ ಮಹತ್ವ ಹೇಳುವ ಧಾರಾವಾಹಿಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ ಉದಯ ವಾಹಿನಿ ಈಗ ನವಿರಾದ ಪ್ರೇಮಕಥಾಹಂರ ಹೊಂದಿದ ಈ ಧಾರಾವಾಹಿಯನ್ನು ಪ್ರೇಕ್ಷಕರ ಮುಂದೆ ಪ್ರಸ್ತುತಪಡಿ ಸುತ್ತಿದೆ. ಕಾವ್ಯಾಂಜಲಿ ಹೆಸರು ಕೇಳಿದಾಕ್ಷಣ ವೀಕ್ಷಕರಿಗೆ ಕುತೂಹಲ ಹುಟ್ಟುವುದು ಸಹಜ. ಈ ಹಿಂದೆ ಇದೇ ಹೆಸರಿನಿಂದ ಪ್ರಸಾರವಾಗಿ ಅತಿಹೆಚ್ಚು ಜನಪ್ರಿಯತೆ ಮತ್ತು ಮೆಚ್ಚುಗೆ ಪಡೆದಿತ್ತು. ಪರಿಪೂರ್ಣ ಮನರಂಜನೆಯ ಜೊತೆಗೆ ಪರಿಶುದ್ಧ ಪ್ರೀತಿಯ ಸಾರವನ್ನು ಪ್ರೇಕ್ಷಕರಿಗೆ ಉಣಬಡಿಸಲಿರುವ ಕಾವ್ಯಾಂಜಲಿ ಹೊಸ ಕಲ್ಪನೆಯ ತ್ರಿಕೋನ ಪ್ರೇಮಕಥೆಗೆ ಮ್ಯೂಸಿಕ್‍ನ ಮ್ಯಾಜಿಕ್ ಟಚ್ ನೀಡಿ ಮೋಡಿ ಮಾಡಲು ಬರುತ್ತಿದೆ. ಅಕ್ಕ, ತಂಗಿಯ ಬಾಂಧವ್ಯದ ಮಧುರವಾದ ಕಥೆ ಇದರಲ್ಲಿದ್ದು, ಜಗತ್ತಿನಲ್ಲಿ ಪ್ರೀತಿಗೆ ಅತಿಹೆಚ್ಚು ಮಹತ್ವವಿದೆ, ಆದರೆ, ಪ್ರಾಣ ಉಳಿಸೊ ಅಮೃತದಂತಹ ಪ್ರೀತಿ ಕೆಲವೊಮ್ಮೆ ಹೇಗೆ ಉಸಿರುಗಟ್ಟಿಸುತ್ತೆ. ಇಂತಹದೇ ಪ್ರೀತಿಯಲ್ಲಿ ಉಸಿರುಕಟ್ಟಿರೊ ನಾಯಕನಿಗೆ ನಿಷ್ಕಲ್ಮಷ ಪ್ರೀತಿಯ ತಂಪೆರೆಯುವ ನಾಯಕಿ ಹೇಗೆ ಜೊತೆಯಾಗ್ತಾಳೆ ಅನ್ನೋದೇ ಈ ಸೀರಿಯಲ್‍ನ ಪ್ರಮುಖ ಕಥಾನಕ ವಾಗಿದೆ. ಶ್ಯಾಕ್ ಸ್ಟುಡಿಯೊ ಸಂಸ್ಥೆಯಡಿ ಶಂಕರ್ ವೆಂಕಟರಾಮನ್ ಅವರು ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದು, ನಿರ್ದೇಶನದ ಜವಬ್ದಾರಿಯನ್ನು ಆದರ್ಶ್ ಹೆಗಡೆ ಹೊತ್ತುಕೊಂಡಿದ್ದಾರೆ. ಈ ಹಿಂದೆ ಸಾಕಷ್ಟು ಧಾರಾವಾಹಿಗಳಲ್ಲಿ ತಮ್ಮ ಕ್ಯಾಮರಾ ಕೈಚಳಕ ತೋರಿದ ರುದ್ರಮುನಿ ಬೆಳೆಗೆರೆ ಇಲ್ಲಿ ಛಾಯ ಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ.

ಕಾವ್ಯಾಂಜಲಿಯ ಮತ್ತೊಂದು ವಿಶೇಷತೆ ಎಂದರೆ ಅಂಜಲಿ ಪಾತ್ರದ ಮೂಲಕ ಸುಷ್ಮಿತಾ ಎಂಬ ಹೊಸಪ್ರತಿಭೆ ಕನ್ನಡ ಕಿರುತೆರೆಗೆ ಪರಿಚಯವಾಗು ತ್ತಿದ್ದಾರೆ. ವಿದ್ಯಾಶ್ರಿ ಜಯರಾಂ ಕಾವ್ಯಳ ಪಾತ್ರ ನಿರ್ವಹಿಸುತ್ತಿದ್ದು, ಪವನ್ ರವೀಂದ್ರ ಇವರಿಬ್ಬರ ಜೊತೆ ಮತ್ತೊಂದು ಪಾತ್ರ ನಿರ್ವಹಿಸಿದ್ದಾರೆ. ದರ್ಶಕ್ ಗೌಡ ಕೂಡ ಪ್ರಮುಖ ಪಾತ್ರ ನಿರ್ವಹಿಸುತ್ತಿ ದ್ದಾರೆ. ಮಿಥುನ್ ತೇಜಸ್ವಿ, ರವಿಭಟ್, ಮಹಾಲಕ್ಷ್ಮಿ, ಮರಿನಾ ತಾರ, ರಾಮಸ್ವಾಮಿ, ನಿಸರ್ಗ, ಸಿಂಚನಾ ಪ್ರಮುಖ ತಾರಾ ಬಳಗದಲ್ಲಿದ್ದಾರೆ. ಹಿರಿಯ ಕಲಾವಿದ ಶಂಕರ್ ಅಶ್ವಥ್ ವಿಶೇಷಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ.

Translate »