ಮೈಸೂರು, ಜೂ.1(ಆರ್ಕೆಬಿ)- ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರಕ್ಕೆ 7 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮೈಸೂರಿನ ಬಿಜೆಪಿ ವ್ಯಾಪಾರಿ ಪ್ರಕೋಷ್ಠ ಹಾಗೂ ವಾಣಿಜ್ಯ ಪ್ರಕೋಷ್ಠ ವತಿಯಿಂದ ಚಾಮುಂಡಿಪುರಂ ವೃತ್ತದಲ್ಲಿ ಪೌರಕಾರ್ಮಿಕರಿಗೆ ಪೌಷ್ಟಿಕ ಆಹಾರ ವಿತರಿಸಲಾಯಿತು. ಬಿಜೆಪಿ ರಾಜ್ಯ ಘಟಕದ ಆದೇಶದ ಮೇರೆಗೆ ಸೇವೆಯೇ ಸಂಘಟನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಆಯುರ್ವೇದ ಕಷಾಯ, ಸಾವಯವ ಬಾಳೆಹಣ್ಣು, ಬನ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಪ್ರಧಾನಿ ಮೋದಿ ಸರ್ಕಾರ 7 ವರ್ಷಗಳಿಂದ ದೇಶದ ಜನರ ಸೇವೆಯಲ್ಲಿ ತೊಡಗಿದೆ. ಈ ಸಂದರ್ಭದಲ್ಲಿ ದೇಶವನ್ನು ಸ್ವಚ್ಛವಾಗಿಡುವ ಸ್ವಚ್ಛತಾ ಸೇನಾನಿಗಳಾದ ಪೌರಕಾರ್ಮಿಕರ ಸೇವೆಯನ್ನು ಪ್ರಧಾನಿಯವರೇ ಶ್ಲಾಘಿಸಿದ್ದಾರೆ ಎಂದರು. ನಗರಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್, ಬಿಜೆಪಿ ವ್ಯಾಪಾರಿ ಪ್ರಕೋಷ್ಠ ಸಂಚಾಲಕ ಅಪೂರ್ವ ಸುರೇಶ್, ಸಹ ಸಂಚಾಲಕ ಪರಮೇಶ್ಗೌಡ, ನಗರಪಾಲಿಕೆ ಮಾಜಿ ಸದಸ್ಯ ಜಯರಾಂ, ಮುಖಂಡರಾದ ಚೇತನ್, ಸಂದೀಪ್ ಇತರರು ಉಪಸ್ಥಿತರಿದ್ದರು.