ಮೈಸೂರು, ಜು.23(ಎಂಕೆ)- ಮೈಸೂರಿನ ಮಹಾನಗರ ಪಾಲಿಕೆಯ ವಾರ್ಡ್ ನಂ-44ರ ವ್ಯಾಪ್ತಿಯ ಜನತಾ ನಗರದ 13 ಮತ್ತು 14ನೇ ಕ್ರಾಸ್ನಿಂದ ವಸಂತ ನಗರ ದವರೆಗೆ ಕೈಗೊಳ್ಳಬೇಕಾಗಿರುವ 12 ಲಕ್ಷ ರೂ. ವೆಚ್ಚದ ಯುಜಿಡಿ ಕಾಮಗಾರಿಗೆ ಟ್ರಾನ್ಸ್ ಫಾಮರ್ ಘಟಕ ತಡೆಯಾಗಿದೆ. ಕೂಡಲೇ ಸೆಸ್ಕ್ ಅಧಿಕಾರಿಗಳು ಟ್ರಾನ್ಸ್ಫಾಮರ್ ಸ್ಥಳಾಂತರಿಸಬೇಕು ಎಂದು ಪಾಲಿಕೆ ಸದಸ್ಯೆ ಸವಿತಾ ಸುರೇಶ್ ಒತ್ತಾಯಿಸಿದ್ದಾರೆ.
‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಅವರು, ಜನತಾ ನಗರದ 7ನೇ ಕ್ರಾಸ್ನಿಂದ 14ನೇ ಕ್ರಾಸ್ವರೆಗೆ ಯುಜಿಡಿ ಸಮಸ್ಯೆ ಯನ್ನು ಹಂತಹಂತವಾಗಿ ಸರಿಪಡಿಸಲಾಗುತ್ತಿದೆ. ಈಗಾ ಗಲೇ 45 ಲಕ್ಷ ರೂ. ವೆಚ್ಚದಲ್ಲಿ 7ನೇ ಕ್ರಾಸ್ ನಿಂದ ಸಿಎಫ್ಟಿಆರ್ಐ ಬಡಾವಣೆವರೆಗೆ ಯುಜಿಡಿ ಕಾಮಗಾರಿ ಮಾಡಲಾಗಿದೆ. ಆದರೆ 13 ಮತ್ತು 14ನೇ ಕ್ರಾಸ್ನಿಂದ ವಸಂತ ನಗರ ಮುಖ್ಯರಸ್ತೆವರೆಗೆ ಇರುವ ಯುಜಿಡಿ ಪೈಪ್ಲೈನ್ ಮೇಲೆಯೇ ಸೆಸ್ಕ್ ಸಿಬ್ಬಂದಿ ಟ್ರಾನ್ಸ್ ಫಾಮರ್ ಅಳವಡಿಸಿರುವುದರಿಂದ ಕಾಮಗಾರಿಗೆ ಅಡ್ಡಿಯಾಗಿದೆ ಎಂದು ವಿವರಿಸಿದರು.
13 ಮತ್ತು 14ನೇ ಕ್ರಾಸ್ನಲ್ಲಿ ಮಳೆ ಬಂದಾಗಲೆಲ್ಲಾ ಹಾಗೂ ವಾರದಲ್ಲಿ 3-4 ಬಾರಿ ಒತ್ತಡದಿಂದಲೇ ಯುಜಿಡಿ ಮ್ಯಾನ್ಹೋಲ್ನಿಂದ ಕೊಳಚೆ ನೀರು ಹೊರಕ್ಕೆ ಹರಿಯುತ್ತದೆ. ಈ ಸಮಸ್ಯೆ ಪರಿಹರಿಸುವಂತೆ ಸ್ಥಳೀಯರು ಸಾಕಷ್ಟು ಮನವಿ ಮಾಡಿದ್ದಾರೆ. ಆದರೆ ಯುಜಿಡಿ ಮಾರ್ಗ ಮಧ್ಯದಲ್ಲಿಯೇ ಟ್ರಾನ್ಸ್ಫಾಮರ್ ಅಳವಡಿಸಿರುವುದರಿಂದ ಕಾಮಗಾರಿ ಪ್ರಾರಂಭಿಸಲು ಆಗುತ್ತಿಲ್ಲ. ಈ ಬಗ್ಗೆ ಸೆಸ್ಕ್ ಅಧಿಕಾರಿಗಳಿಗೆ ಬಹಳಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.