ಸಾಮಾಜಿಕ ಅಂತರ ಕಾಪಾಡುವಲ್ಲಿ ಗಿರಿಜನರು ಮೊದಲಿಗರು
ಚಾಮರಾಜನಗರ

ಸಾಮಾಜಿಕ ಅಂತರ ಕಾಪಾಡುವಲ್ಲಿ ಗಿರಿಜನರು ಮೊದಲಿಗರು

April 25, 2020

ಯಳಂದೂರು,ಏ.24-ಲಾಕ್‍ಡೌನ್‍ನಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಲ್ಲಿ ಗಿರಿಜನರು ಮೊದಲಿಗರು ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ ತಿಳಿಸಿದರು.

ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗಿರಿಜನರ ಕಾಲೋನಿಗಳಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು, ಕೊರೊನಾ ಇಡೀ ಸಮಾಜದ ಸ್ವಾಸ್ಥ್ಯ ಹಾಳು ಮಾಡಿದೆ. ಈ ಮಹಾಮಾರಿ ವಿರುದ್ಧ ಇಡೀ ವಿಶ್ವವೇ ಸಮರ ಸಾರಿದೆ. ಇದಕ್ಕೆ ಮನೆಯಲ್ಲಿರುವುದೇ ಮದ್ದು. ಸರ್ಕಾರ ಲಾಕ್‍ಡೌನ್ ಮಾಡಿದ್ದು ಇದಕ್ಕೆ ವಿರೋಧ ಪಕ್ಷಗಳು ಬೆಂಬಲ ಸೂಚಿಸಿವೆ. ಈ ನಿಟ್ಟಿನಲ್ಲಿ ಕಾಡಿನಲ್ಲಿ ವಾಸ ಮಾಡುವ ಬುಡಕಟ್ಟು ಸೋಲಿಗ ಜನಾಂಗದವರು ಮೊದಲಿನಿಂದಲೇ ಇತರೆ ಜನರ ಜೊತೆ ಬೆರೆಯು ವುದು ತುಂಬಾ ಕಡಿಮೆ. ಇಂತಹ ಸಂದರ್ಭದಲ್ಲಿ ತಮ್ಮ ಪೋಡುಗಳಿಗೆ ತಾವೇ ಇತರರಿಗೆ ನಿರ್ಬಂಧ ವಿಧಿಸಿಕೊಂಡು ಬೆಂಬಲ ಸೂಚಿಸಿದ್ದಾರೆ. ಈ ಸಂದರ್ಭ ದೇಶಕ್ಕೆ ಸಂದಿಗ್ಧ ಪರಿಸ್ಥಿತಿ ತಂದೊಡ್ಡಿದೆ. ಇಂತಹ ಸಂದರ್ಭ ಬಡಜನರು, ನಿರ್ಗತಿಕರು, ಗಿರಿಜನರು ಕೂಲಿಯನ್ನೇ ನೆಚ್ಚಿಕೊಂಡು ಬದುಕಿರುವ ಮಂದಿಗೆ ಹೆಚ್ಚಿನ ತೊಂದರೆಯಾಗಿದೆ. ಸರ್ಕಾರ ಇವರಿಗೆ ನೆರವು ನೀಡಿದ್ದರೂ ಇದು ಸಾಲದಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಸಿಗುವ ಧವಸಧಾನ್ಯ, ಹೊರತುಪಡಿಸಿ ಇತರೆ ನಿತ್ಯ ಬಳಕೆಯ ಆಹಾರ ಪದಾರ್ಥಗಳನ್ನು ಕಿಟ್‍ಗಳ ರೂಪದಲ್ಲಿ ಜಿಲ್ಲಾದ್ಯಂತ ನೀಡಲು ಪಕ್ಷ ತೀರ್ಮಾ ನಿಸಿದೆ. ಈ ಹಿನ್ನೆಲೆಯಲ್ಲಿ ಬಿಳಿಗಿರಿರಂಗನಬೆಟ್ಟದ ಬಂಗ್ಲೆಪೋಡು, ಯರಕನಗದ್ದೆಪೋಡು, ಪುರಾಣಿ, ಮುತ್ತುಗದಗದ್ದೆ, ಈರಣ್ಣಯ್ಯನಕಟ್ಟೆ, ಹೊಸ ಪೋಡು ಸೇರಿದಂತೆ 8 ಪೋಡುಗಳಲ್ಲಿ ವಾಸ ಮಾಡುವ 724 ಕುಟುಂಬಗಳಿಗೆ ಆಹಾರ ಕಿಟ್‍ಗಳನ್ನು ವಿತರಿಸ ಲಾಗುತ್ತಿದೆ. ಇದರೊಂದಿಗೆ ಬೆಟ್ಟದಲ್ಲಿ ವಾಸ ಮಾಡುವ ಇತರೆ ಜನಾಂಗದ ಕೂಲಿ ಕಾರ್ಮಿಕರಿಗೂ ಇದನ್ನು ವಿತರಿಸಲು ಕ್ರಮ ವಹಿಸಲಾಗಿದೆ ಎಂದರು. ಈ ವೇಳೆ ಮಾಜಿ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಎಸ್.ಬಾಲ ರಾಜು, ಜಿಪಂ ಸದಸ್ಯರಾದ ಜೆ.ಯೋಗೇಶ್, ಸದಾ ಶಿವಮೂರ್ತಿ, ಮಾಜಿ ಸದಸ್ಯರಾದ ಕೇತಮ್ಮ, ವಡಗೆರೆ ದಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ವಿ.ಚಂದ್ರು, ತಾಪಂ ಅಧ್ಯಕ್ಷ ನಿರಂಜನ್, ನಂಜಯ್ಯ, ಗುಂಬಳ್ಳಿ ನಂಜಯ್ಯ, ಕೃಷ್ಣಾಪುರ ದೇವರಾಜು, ಚಂದ್ರು ಇತರರಿದ್ದರು.

Translate »