ಬೆಂಗಳೂರು, ಅ.31(ಕೆಎಂಶಿ)- ದೇಶದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲರು ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಕೊಟ್ಟಿರುವ ಸ್ಫೂರ್ತಿ ಹಾಗೂ ಮಾರ್ಗದರ್ಶನ ನಮಗೆ ಅಗತ್ಯ ವಾಗಿದೆ. ಪ್ರತಿಯೊಬ್ಬರೂ ಅವರ ಒಂದು ಅಂಶವನ್ನಾದರೂ ರೂಢಿಸಿ ಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯತಿಥಿ ಹಾಗೂ ಸರ್ದಾರ್ ವಲ್ಲಭಭಾಯ್ ಪಟೇಲರ ಜನ್ಮದಿನದ ಅಂಗವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶನಿವಾರ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಪಕ್ಷದ ಕಚೇರಿಯಲ್ಲಿ ಇಬ್ಬರು ನಾಯಕರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಮಾಧ್ಯಮ ವಿಭಾಗ ಮುಖ್ಯಸ್ಥ ಬಿ.ಎಲ್.ಶಂಕರ್, ಮತ್ತಿತರ ನಾಯಕರು ಇದ್ದರು.
ಇಂದು ನಾವು ದೇಶ ಕಂಡ ಇಬ್ಬರು ಮಹಾನ್ ನಾಯಕರನ್ನು ನೆನೆಸಿಕೊಳ್ಳುತ್ತಿದ್ದೇವೆ. ಇಂದಿರಾಗಾಂಧಿ ಅವರ ಪುಣ್ಯಸ್ಮರಣೆ ಹಾಗೂ ಸರ್ದಾರ್ ವಲ್ಲಭಭಾಯ್ ಪಟೇಲರ ಜನ್ಮದಿನ, ಜತೆಗೆ ಕಿಸಾನ್ ಅಧಿಕಾರ್ ದಿವಸ, ವಾಲ್ಮೀಕಿ ಜಯಂತಿಯನ್ನು ಆಚರಿಸುತ್ತಿದ್ದೇವೆ. ನಮ್ಮ ಸರ್ಕಾರ ಇದ್ದಾಗ ವಾಲ್ಮೀಕಿ ಅವರನ್ನು ಸ್ಮರಿಸಲು ಈ ಜಯಂತಿ ಆಚರಿಸಲು ಆರಂಭಿಸಿದ್ದೆವು. ಈ ಕಾರ್ಯಕ್ರಮವನ್ನು ದೊಡ್ಡದಾಗಿ ಮಾಡಬೇಕಿತ್ತು. ಆದರೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಾವು ಇಂದು ಸಾಂಕೇತಿಕವಾಗಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಈ ನಾಯಕರು ಕೊಟ್ಟಿ ರುವ ಸ್ಫೂರ್ತಿ ಹಾಗೂ ಮಾರ್ಗದರ್ಶನ ನಮಗೆ ಅಗತ್ಯವಾಗಿದೆ. ನಾವು ಪ್ರತಿಯೊಬ್ಬರೂ ಅವರ ಒಂದು ಅಂಶವನ್ನಾದರೂ ರೂಢಿಸಿಕೊಳ್ಳಬೇಕು. ಸರ್ದಾರ್ ವಲ್ಲಭಭಾಯ್ ಪಟೇಲರು ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ತೆಗೆದುಕೊಂಡಿರುವ ನಿರ್ಧಾರ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ್ದಾಗಿತ್ತು. ದೇಶವನ್ನು ಒಗ್ಗೂಡಿಸಲು ಅವರ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಅವರನ್ನು ಉಕ್ಕಿನ ಮನುಷ್ಯ ಎಂದು ಕರೆಯುತ್ತೇವೆ. ಇನ್ನು 4 ದಶಕಗಳ ಹಿಂದೆ ನಾವು ಇಂದಿರಾ ಗಾಂಧಿ ಅವರನ್ನು ಕಣ್ಣಾರೆ ಕಂಡಿದ್ದೆವು. ಅವರು ಕೊಟ್ಟ ಅನೇಕ ಕಾರ್ಯಕ್ರಮದಿಂದ ದೇಶ ಬದಲಾಗಿದ್ದನ್ನು ನೋಡಿ ದ್ದೇವೆ. ದೇಶ ಕಂಡ ಅಪ್ರತಿಮ ಪ್ರಧಾನಿ ಎಂದರೆ ಇಂದಿರಾಗಾಂಧಿ ಎಂದು ಜನ ಹೇಳುತ್ತಾರೆ. ಅವರನ್ನು ದುರ್ಗಾದೇವಿ ಎಂದು ಅಟಲ್ ಬಿಹಾರಿ ವಾಜಪೇಯಿ ಅವರೇ ಹೇಳಿದ್ದಾರೆ. ಅವರು ಇಂದು ಇಲ್ಲದಿರಬಹುದು, ಈ ದೇಶದ ಐಕ್ಯತೆ, ಸಮಗ್ರತೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ದೇಶದ ಮಹತ್ವದ ಬದಲಾವಣೆಯಲ್ಲಿ ಅವರಿದ್ದಾರೆ. ಅವರ ಕಾರ್ಯಕ್ರಮದಿಂದ ಜನರ ಜೀವನದಲ್ಲಿ ಆದ ಪ್ರಗತಿಯಲ್ಲಿ ಇಂದಿರಾಗಾಂಧಿ ಅವರು ಜೀವಂತವಾಗಿದ್ದಾರೆ.
ಬ್ಯಾಂಕುಗಳ ರಾಷ್ಟ್ರೀಕರಣ ಆಗದಿದ್ದರೆ, ದೇಶ ಆರ್ಥಿಕವಾಗಿ ಇಷ್ಟು ಪ್ರಬಲವಾಗಿ ಬೆಳೆಯಲು ಸಾಧ್ಯವಿಲ್ಲ. ಭೂ ಸುಧಾರಣಾ ಕಾಯ್ದೆ ಮೂಲಕ ದೇಶದಲ್ಲಿ ಬಡವರಿಗೆ ಭೂಮಿ ಕೊಟ್ಟರು. ದೇಶ ಅನೇಕ ಯುದ್ಧಗಳನ್ನು ಎದುರಿಸಿದ ಸಮಯದಲ್ಲಿ, ಬಾಂಗ್ಲಾ ರಕ್ಷಣೆ ಸಮಯದಲ್ಲಿ ಅವರು ಇತಿಹಾಸ ಸೃಷ್ಟಿಸಿದ್ದಾರೆ. ಅವರ ಪ್ರತಿ ತೀರ್ಮಾನದಲ್ಲಿ ಐಕ್ಯತೆ ಹಾಗೂ ರಾಜಕೀಯ ಬದ್ಧತೆ ಇತ್ತು. ಅವರು ಚಿಕ್ಕಮಗಳೂರಿನಲ್ಲಿ ಚುನಾವಣೆ ಸಂದರ್ಭದಲ್ಲಿ ನಾವು ವಿದ್ಯಾರ್ಥಿ ನಾಯಕರಾಗಿದ್ದೆವು. ಆಗ ಅವರ ಸರಳತೆ ನೋಡಿದ್ದೆವು. ಕಾರ್ಯಕರ್ತರ ಮನೆಯಲ್ಲೇ ಮಲಗುತ್ತಿದ್ದರು.
ನಾವೆಲ್ಲಾ ಯೂಥ್ ಕಾಂಗ್ರೆಸ್ನಲ್ಲಿದ್ದಾಗ ದೆಹಲಿ ಸಮಾವೇಶಕ್ಕೆ ರೈಲಿನ ಮೂಲಕ ಹೊರಟೆವು. ರೈಲು ಪ್ರಯಾಣ ಆರಂಭವಾದ ಕೆಲವೇ ಹೊತ್ತಲ್ಲಿ ಇಂದಿರಾಗಾಂಧಿ ಅವರ ಹತ್ಯೆ ಬಗ್ಗೆ ಸುದ್ದಿ ಬಂತು. ಆ ಸಂದರ್ಭದಲ್ಲಿ ನಾನು ನಮ್ಮೂರಿನಲ್ಲಿ ಚಿತ್ರಮಂದಿರ ತೆರೆಯಲು ಅರ್ಜಿ ಹಾಕಿದ್ದೆ. ಆಗ ಜಿಲ್ಲಾಧಿ ಕಾರಿಗಳು ಏನು ಹೆಸರಿಡುತ್ತೀರಾ ಎಂದು ಕೇಳಿದರು. ಆಗ ನಾನು ಇಂದಿರಾ ಗಾಂಧಿ ಅಂತಾ ಹೆಸರಿಡುತ್ತೇನೆ ಎಂದಿದ್ದೆ. ಆಗ ಅವರು ಇಂದಿರಾ ಚಿತ್ರಮಂದಿರ ಎಂದು ಬರೆದು ಕೊಟ್ಟರು. ಅವರಲ್ಲಿದ್ದ ರಾಜಕೀಯ ಬದ್ಧತೆ ಹಾಗೂ ಜನರಿಗೆ ಕೊಟ್ಟ ಕಾರ್ಯಕ್ರಮದ ಮೂಲಕ ಅವರು ಜೀವಂತವಾಗಿದ್ದಾರೆ ಎಂದರು.