ಅಧಿಕಾರಿಯನ್ನೇ ಹಿಮ್ಮೆಟ್ಟಿಸಿದ ಕಾಡಾನೆಗಳು…!
ಕೊಡಗು

ಅಧಿಕಾರಿಯನ್ನೇ ಹಿಮ್ಮೆಟ್ಟಿಸಿದ ಕಾಡಾನೆಗಳು…!

March 10, 2020

ಮಡಿಕೇರಿ,ಮಾ.9-ಕಾಡಾನೆಗಳನ್ನು ಕಾಫಿ ತೋಟದೊಳಗಿ ನಿಂದ ಓಡಿಸಲು ಹೋದ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳನ್ನೇ ಕಾಡಾನೆಗಳು ಹಿಮ್ಮೆಟ್ಟಿಸಿದ ಘಟನೆ ಚೆಟ್ಟಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ.

ಚೆಟ್ಟಳ್ಳಿ ವ್ಯಾಪ್ತಿಯ ಮೋದೂರು, ಹೊರೂರು ಹಾಗೂ ಈರಳೆ ವಳಮುಡಿ ಗ್ರಾಮದ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿದ್ದ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಅರಣ್ಯಾಧಿಕಾರಿ ಸುಬ್ರಾಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ಕಾರ್ಯಾಚರಣೆಯ ಸಂದರ್ಭ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇರಿ ಕಾಫಿ ತೋಟದಿಂದ ಕಾಡಾನೆಗಳನ್ನು ಓಡಿಸಲು ಪಟಾಕಿ ಸಿಡಿಸಿದರು. ಈ ವೇಳೆ ಕಾಡಾನೆಗಳ ಹಿಂಡಿನ ಪೈಕಿ 2 ಹೆಣ್ಣಾನೆಗಳು ಅರಣ್ಯಾಧಿಕಾರಿ ಸುಬ್ರಾಯ ಹಾಗೂ ಸಿಬ್ಬಂದಿಯನ್ನು ಅಟ್ಟಾಡಿಸಿಕೊಂಡು ಬಂದು ದಾಳಿ ನಡೆಸಲು ಮುಂದಾಗಿವೆ. ಸಮಯ ಪ್ರಜ್ಞೆಯಿಂದ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ತೋಟ ದೊಳಗೆ ಓಡಿ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ.

ಭಾನುವಾರದಂದು ಬೆಳಿಗ್ಗೆ 9ಗಂಟೆಯಿಂದ ಕಾಫಿ ತೋಟ ದೊಳಗೆ ಅರಣ್ಯಾಧಿಕಾರಿಗಳು ಸೇರಿದಂತೆ 15 ಮಂದಿ ಸಿಬ್ಬಂದಿ ಪಟಾಕಿ ಸಿಡಿಸಿ ಕಾರ್ಯಾಚರಣೆಯನ್ನು ನಡೆಸಿದರು. ಈ ಸಂದರ್ಭ 3 ಬೃಹತ್ ಗಾತ್ರದ ಕಾಡಾನೆಗಳು ಹಾಗೂ ಸಣ್ಣ ಆನೆಗಳ ಹಿಂಡು ಕಂಡು ಬಂದಿತ್ತು. ಚೆಟ್ಟಳ್ಳಿ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಮಿತಿಮೀರಿದ ಕಾಡಾನೆಗಳ ಹಾವಳಿಯಿಂದಾಗಿ ಕಾಫಿ ಬೆಳೆಗಾರರು ಹಾಗೂ ಕಾರ್ಮಿಕರು ಭಯಭೀತರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ ಮೇರೆಗೆ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಕಾರ್ಯಾ ಚರಣೆ ನಡೆಸಲಾಯಿತು. ಆದರೆ ಕಾಡಾನೆಗಳು ತೋಟಗಳನ್ನು ಬಿಟ್ಟು ಕದಲದಿರುವುದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಮುಂದಿನ ದಿನಗಳಲ್ಲಿ ಗ್ರಾಮಸ್ಥರಿಗೆ, ಸಾರ್ವಜ ನಿಕರಿಗೆ ಮಾಹಿತಿ ನೀಡಿ ಮತ್ತೊಮ್ಮೆ ಕಾರ್ಯಾಚರಣೆ ನಡೆಸಲಾಗುವುದೆಂದು ಅರಣ್ಯಾಧಿಕಾರಿ ಸುಬ್ರಾಯ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಅರಣ್ಯ ಸಿಬ್ಬಂದಿಗಳಾದ ಚರಣ್ ಕುಮಾರ್, ಮಾದೇವ ನಾಯಕ್ ಹಾಗೂ ಇತರರು ಹಾಜರಿದ್ದರು.

Translate »