ಮಹಿಳೆಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಕಲ್ಪಿಸಿಕೊಟ್ಟವರು ಡಾ. ಅಂಬೇಡ್ಕರ್
ಮಂಡ್ಯ

ಮಹಿಳೆಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಕಲ್ಪಿಸಿಕೊಟ್ಟವರು ಡಾ. ಅಂಬೇಡ್ಕರ್

April 15, 2019
  • ಸುಮಲತಾ ಅಂಬರೀಶ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ, ಚರ್ಚ್‍ಗೆ ಭೇಟಿ ನೀಡಿ ಮತಯಾಚನೆ

ಮಂಡ್ಯ: ಮತ ದಾನ ಹಕ್ಕು ಕಲ್ಪಿಸಿಕೊಟ್ಟವರೇ ಬಾಬಾ ಸಾಹೇಬ್ ಅಂಬೇಡ್ಕರ್‍ರವರು, ಅದರಲ್ಲೂ ಮಹಿಳೆಯರಿಗೆ ಮತದಾನದ ಜೊತೆಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಕಲ್ಪಿಸಿಕೊಟ್ಟವರು ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ತಿಳಿಸಿದರು.

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಹಿನ್ನೆಲೆ ಯಲ್ಲಿ ನಗರದ  ಡಿಸಿ ಕಚೇರಿ ಎದುರಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಅವರು ಸುದ್ದಿಗಾರ ರೊಂದಿಗೆ ಮಾತನಾಡಿದರು.

ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಮಹಿಳೆಯರಿಗೆ ಮತದಾನ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕಲ್ಪಿಸಿಕೊಡದಿದ್ದರೆ ನಾನಿಂದು ಇಲ್ಲಿ ನಿಲ್ಲುವ ಅವಕಾಶವೇ ಇರುತ್ತಿರಲಿಲ್ಲ. ಅಂತಹ ಮಹನೀಯರ ಜಯಂತಿಯಲ್ಲಿ ಪಾಲ್ಗೊಂ ಡಿರುವುದು ನಮ್ಮ ಪುಣ್ಯ ಎಂದರು.

ಎಲ್.ಆರ್.ಶಿವರಾಮೇಗೌಡರ ಟೀಕೆಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಇವತ್ತು ಅಂಬೇಡ್ಕರ್ ಜಯಂತಿ ಆಗಿರುವುದರಿಂದ ಒಳ್ಳೆಯ ವಿಚಾರ ಮಾತ್ರ ಮಾತನಾಡೋಣ. ಅಂತಹವರ ವಿಚಾರ ಬೇಡ ಎಂದರು. ನನಗೆ ಭಯದ ವಾತಾ ವರಣ ಇದೆ. ಆ ಕಾರಣಕ್ಕೆ ನಾನು ಚುನಾ ವಣಾ ಆಯೋಗಕ್ಕೆ ದೂರು ಕೊಟ್ಟಿದ್ದು, ಅಂತೆಯೇ ಆಯೋಗ ನನಗೆ ವಿಶೇಷ ಭದ್ರತೆ ಬಗ್ಗೆ ಸೂಚಿಸಿರಬಹುದು ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ಬಿಜೆಪಿ ಬೆಂಬಲ ಘೋಷಣೆಯಿಂದ ಮುಸ್ಲಿಮರೆಲ್ಲಾ ಜೆಡಿಎಸ್‍ಗೆ ಬೆಂಬಲ ಸೂಚಿಸುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಅವರಿಗೂ ಮುಸ್ಲಿಮ್ ಮತದಾರರಿರಬಹುದು, ನನಗೂ ಸಹ ಮುಸ್ಲಿಮರ ಬೆಂಬಲ ಇದೆ, ಈಗಾಗಲೆ ಮುಸ್ಲಿಮ್ ಮುಖಂಡರನ್ನೆಲ್ಲಾ ಭೇಟಿ ಮಾಡಿದ್ದೇನೆ, ಬಿಜೆಪಿ ಬೆಂಬಲದ ಬಗ್ಗೆಯೂ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ಹೇಳಿದರು.

ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುಮಲತಾ ಅಂಬರೀಶ್, ಸುಭಾಷ್ ನಗರದಲ್ಲಿರುವ ಸಾಡೆ ಸ್ಮಾರಕ ಚರ್ಚ್‍ಗೆ ತೆರಳಿ, ಸಾಮೂಹಿಕ ಪ್ರಾರ್ಥನೆ ಯಲ್ಲಿ ಪಾಲ್ಗೊಂಡು, ಕ್ರೈಸ್ತ ಬಾಂಧವರ ಮತಯಾಚನೆ ಮಾಡಿದರು, ಇದೇ ವೇಳೆ ಕ್ರೈಸ್ತ ಸಮುದಾಯದ ಮುಖಂಡರ ಜೊತೆ ಸಮಾಲೋಚನೆ ನಡೆಸಿ, ಬೆಂಬಲ ಕೋರಿದರು. ಕ್ರೈಸ್ತ ಧರ್ಮ ಗುರುಗಳು ಸುಮಲತಾ ಅಂಬರೀಶ್ ಗೆಲುವಿಗಾಗಿ ಪ್ರಾರ್ಥಿಸಿ, ಆಶೀರ್ವಾದ ಮಾಡಿದರು.ಈ ಚುನಾವಣೆಯು ಶಾಂತಿಯುತವಾಗಿ ನಡೆಯುವಂತೆ ಯೇಸು ನಮಗೆಲ್ಲಾ ಆಶೀರ್ವದಿಸಲಿ ಎಂದು ಸುಮಲತಾ ಅವರು ಪ್ರಾರ್ಥಿಸಿದರು.

ಸುಮಲತಾ ಅಂಬರೀಶ್ ಅವರಿಗೆ  ರಾಕ್ ಲೈನ್ ವೆಂಕಟೇಶ್, ಜಿಲ್ಲೆಯ ದಲಿತ ಮುಖಂಡರು ಹಾಗೂ ವಿವಿಧ ಪಕ್ಷಗಳ ಮುಖಂಡರು ಸಾಥ್ ನೀಡಿದರು.

Translate »