ಅರಮನೆಯಲ್ಲಿ ಗತವೈಭವ ಕಳೆಗಟ್ಟಿದ ವಿಜಯಯಾತ್ರೆ
ಮೈಸೂರು

ಅರಮನೆಯಲ್ಲಿ ಗತವೈಭವ ಕಳೆಗಟ್ಟಿದ ವಿಜಯಯಾತ್ರೆ

October 27, 2020

ಮೈಸೂರು, ಅ.26(ಪಿಎಂ)- `ವಿಜಯಯಾತ್ರೆ ಹಾಗೂ ಶಮೀ (ಬನ್ನಿ ಮರ) ಪೂಜೆ’ ಅರಮನೆ ಆವರಣದಲ್ಲಿ ಪ್ರತಿ ವರ್ಷ ನಡೆಯುವ ಸಾಂಸ್ಕøತಿಕ ಹಾಗೂ ಧಾರ್ಮಿಕ ದಿಬ್ಬಣ. ಈ ಬಾರಿ ಸರಳ ದಸರವಾದರೂ ಸೋಮವಾರ ಜಂಬೂ ಸವಾರಿಗೂ ಮುನ್ನ ಈ ಸಾಂಸ್ಕøತಿಕ ಹಾಗೂ ಧಾರ್ಮಿಕ ವಿಧಿ ವಿಧಾನ ನೆರವೇರುವ ಮೂಲಕ ಅರಮನೆ ಅಂಗಳದಲ್ಲಿ ಸಂಭ್ರಮ ಕಳೆಗಟ್ಟಿತು. ರಾಜ ಪೋಷಾಕು ಧರಿಸಿದ್ದ ರಾಜವಂಶಸ್ಥ ಯದು ವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಈ ವಿಜಯಯಾತ್ರೆ ಹಾಗೂ ಶಮೀ ಪೂಜೆ ನೆರವೇರಿಸಿ ದರು. ಅರಮನೆಯ ಆನೆ ಬಾಗಿಲು ಎದುರು ಅಡ್ಡಪಲ್ಲಕ್ಕಿಯಲ್ಲಿ ಪಟ್ಟದ ಕತ್ತಿಯನ್ನು ಇಟ್ಟು ವಿಜಯ ಯಾತ್ರೆ ನಡೆಸಲಾಯಿತು. ಪೊಲೀಸ್ ಬ್ಯಾಂಡ್, ಮಂಗಳವಾಧ್ಯ, ಛತ್ರಿ-ಛಾಮರ, ಹೊಗಳುಭಟರು, ದೀವಟಿಗೆ ಯವರು, ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಹಾಗೂ ಪಟ್ಟದ ಒಂಟೆಗಳು ವಿಜಯ ಯಾತ್ರೆ ಮೆರವಣಿಗೆಯಲ್ಲಿ ಸಾಗಿ ದವು. ವಿಜಯ ಯಾತ್ರೆ ಮೆರವಣಿ ಗೆಯು ಅರಮನೆಯ ಶ್ರೀ ಭುವ ನೇಶ್ವರಿ ಅಮ್ಮನವರ ದೇವಸ್ಥಾನ ತಲುಪುತ್ತಿದ್ದಂತೆ ಇಲ್ಲಿನ ಬನ್ನಿ ಮರದ ಬಳಿಗೆ ಯದುವೀರ್ ತೆರಳಿದರು. ಅಲ್ಲಿ ಮರಕ್ಕೆ ಒಂದು ಸುತ್ತು ಪ್ರದಕ್ಷಿಣೆ ಹಾಕಿ ನಮಸ್ಕರಿಸಿ, ವಿಶೇಷ ಕುರ್ಚಿಯಲ್ಲಿ ಆಸೀನ ರಾಗಿ ರಾಜಮನೆತನದ ಪುರೋಹಿ ತರ ಮಾರ್ಗದರ್ಶನದಲ್ಲಿ ಬನ್ನಿ ಮರಕ್ಕೆ ಪೂಜಾ ಕೈಂಕರ್ಯ ನೆರವೇರಿಸಿದರು. ನಂತರ ನೆರೆದಿದ್ದವರಿಗೆ ಪೂಜೆಗೈದ ಹೂಗಳನ್ನು ವಿತರಿಸಿ, ಪುರೋಹಿತ ಸಮೂಹಕ್ಕೆ ಕಾಣಿಕೆ ಅರ್ಪಿಸಿದರು. ಮತ್ತೆ ಅರಮನೆಯವರೆಗೆ ವಿಜಯ ಯಾತ್ರೆ ಕೈಗೊಂಡರು. ಬಳಿಕ ಕನ್ನಡಿ ತೊಟ್ಟಿಯಲ್ಲಿ ಚಾಮುಂಡೇಶ್ವರಿ ಪೂಜೆ ಸಲ್ಲಿಸಿ ವಿಧಿವಿಧಾನ ಪೂರ್ಣ ಗೊಳಿಸಿದರು. ಭುವನೇಶ್ವರಿ ದೇಗುಲಕ್ಕೆ ಆಪ್ತರಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗಿತ್ತು.

Translate »