ಬಾಹುಬಲಿ ನಿರ್ಮಾಪಕರಿಂದ ಯಾರಿವಳು
ಸಿನಿಮಾ

ಬಾಹುಬಲಿ ನಿರ್ಮಾಪಕರಿಂದ ಯಾರಿವಳು

August 30, 2020

ನಂದಿನಿ, ಮನಸಾರೆ, ಕಾವ್ಯಾಂಜಲಿ, ಕಸ್ತೂರಿ ನಿವಾಸದಂತಹ ಕುತೂಹಲಕಾರಿ ಕಥೆಗಳನ್ನು ನೀಡಿದ ಉದಯ ವಾಹಿನಿ ಈಗ `ಯಾರಿವಳು’ ಎಂಬ ವಿಭಿನ್ನ ಕಥೆಯನ್ನು ತನ್ನ ವೀಕ್ಷಕರಿಗೆ ಹೇಳಹೊರಟಿದೆ. ಆಗಸ್ಟ್ 31ರಿಂದ ಪ್ರಸಾರವಾಗಲಿರುವ, ಸಿನಿಮಾ ಶೈಲಿಯಲ್ಲಿ ನಿರ್ಮಾಣವಾಗಿರುವ ಈ ಸೀರಿಯಲ್‍ನ ಮೇಕಿಂಗ್ ಸ್ಟೈಲ್ ವಿಶೇಷವಾಗಿದೆ. ಶ್ರೇಷ್ಠ ಎಂಬ ಬಾಲಕಿ ಶ್ರೀಮಂತರ ಮನೆಯಲ್ಲಿ ಹುಟ್ಟಿದರೂ ತನ್ನ ತಂದೆ, ತಾಯಿಯ ಪ್ರೀತಿಯಿಂದ ವಂಚಿತಳಾಗಿರುತ್ತಾಳೆ. ಶ್ರೇಷ್ಟಳ ಈ ಕಷ್ಟಕ್ಕೆ ಬೆನ್ನೆಲುಬಾಗಿ ಮಂಗಳಮುಖಿಯೊಬ್ಬಳು ನಿಲ್ಲುತ್ತಾಳೆ. ಈ ವಿಶೇಷ ಪಾತ್ರದ ಜೊತೆಗೆ ಪೋಷಕ ಪಾತ್ರಗಳಿಗೂ ಮಂಗಳಮುಖಿ ಸಮುದಾಯದ ಸದಸ್ಯರನ್ನೇ ಆಯ್ಕೆ ಮಾಡಿಕೊಂಡಿರುವುದು ಈ ಧಾರಾವಾಹಿಯ ಹೆಗ್ಗಳಿಕೆಯಾಗಿದೆ.

ಬ್ಯೂಟಿಫುಲ್ ಮನಸುಗಳು, ಕಮರೊಟ್ಟು ಚೆಕ್ ಪೆÇೀಸ್ಟ್, ವೆನಿಲ್ಲಾ, ಕಟ್ಟುಕಥೆ ಮುಂತಾದ ಚಿತ್ರಗಳಲ್ಲಿ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ ನಟಿ ಸ್ವಾತಿ ಕೊಂಡೆ ಮಾಯಾ ಎಂಬ ನಾಯಕಿಯ ಪಾತ್ರ ಮಾಡುತ್ತಿದ್ದಾರೆ. ಆಂಜನೇಯನ ಪರಮ ಭಕ್ತೆಯಾದ ಮಾಯಾ ಧೈರ್ಯವಂತ ಹೆಣ್ಣು. ಭಜರಂಗಿಯನ್ನು ಸದಾ ನೆನೆಯುವ ಈಕೆ ಭಂಡ ಧೈರ್ಯದಿಂದ ಮುನ್ನುಗ್ಗುವ ಸ್ವಭಾವದವಳು. ಮಾಯಾ ಮತ್ತು ಶ್ರೇಷ್ಟಳ ಸ್ವಂತ ತಾಯಿ ಅಹಲ್ಯ ನೋಡಲು ಒಂದೇ ಥರ ಇದ್ದು, ಇವರಿಬ್ಬರಿಗಿರುವ ಸಂಬಂಧ ಏನೆಂದು ಕಥೆಯಲ್ಲಿ ಹೇಳಲಾಗಿದೆ. ಈ ಮಾಯಾ ಯಾರು ? ಮಾಯಾಳ ಹಿಂದಿನ ಕಥೆಯೇನು ? ಎಂಬ ಪ್ರಶ್ನೆಗಳಿಗೆ ಯಾರಿವಳು ಉತ್ತರ ನೀಡುತ್ತದೆ.

ಶ್ರೇಷ್ಟಳ ಪಾತ್ರವನ್ನು ಜಂಟಲ್‍ಮ್ಯಾನ್ ಖ್ಯಾತಿಯ ಬಾಲ ನಟಿ ಆರಾಧ್ಯ ನಿರ್ವಹಿಸುತ್ತಿದ್ದಾರೆ. ತೆಲುಗಿನ ಬಾಹುಬಲಿ ಸರಣಿ ಚಿತ್ರಗಳನ್ನು ನಿರ್ಮಾಣ ಮಾಡಿದ ಅರ್ಕಾ ಮೀಡಿಯಾ ಸಂಸ್ಥೆ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದು, ದರ್ಶಿತ್ ಭಟ್ ಇದಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹಿರಿಯ ಕಲಾವಿದರಾದ ಅಶೋಕ್ ಹೆಗಡೆ, ಬಾಲರಾಜ್, ವಾಣಿಶ್ರೀ, ಆರವ್ ಸೂರ್ಯ, ದೀಪಾ ಪಾರ್ವತಿ, ನಾಗರಾಜ್‍ಭಟ್, ಅಂಬರೀಶ್ ಸಾರಂಗಿ, ಶರ್ಮಿತಾ ಹಾಗೂ ಮಂಗಳಮುಖಿ ಪಾತ್ರದಲ್ಲಿ ಸನಾ ಸುಮನ್ ಹಾಗೂ ಲೋಹಿತ್ ಪಟೇಲ್ ನಟಿಸಿದ್ದಾರೆ.

Translate »