ಶಾಶ್ವತ ನೆಲೆ ಕಲ್ಪಿಸುವವರೆಗೆ ಕೊಡಗಿನ ನೆರೆ ಸಂತ್ರಸ್ತರಿಗೆ ಮಾಸಿಕ 10 ಸಾವಿರ ರೂ. ಧನಸಹಾಯ
ಮೈಸೂರು

ಶಾಶ್ವತ ನೆಲೆ ಕಲ್ಪಿಸುವವರೆಗೆ ಕೊಡಗಿನ ನೆರೆ ಸಂತ್ರಸ್ತರಿಗೆ ಮಾಸಿಕ 10 ಸಾವಿರ ರೂ. ಧನಸಹಾಯ

September 26, 2018

ಬೆಂಗಳೂರು: ಭಾರೀ ಮಳೆ, ನೆರೆಯಿಂದ ಮನೆ ಕಳೆದುಕೊಂಡು ನಿರಾಶ್ರಿತರಾಗಿರುವ ಕೊಡಗು ನೆರೆ ಸಂತ್ರಸ್ತ ಪ್ರತಿ ಕುಟುಂಬಕ್ಕೆ ನಿರ್ವಹಣೆಗಾಗಿ ಮಾಸಿಕ ಹತ್ತು ಸಾವಿರ ರೂ.ಗಳನ್ನು ನೀಡುವುದಾಗಿ ಸರ್ಕಾರ ಇಂದಿಲ್ಲಿ ಪ್ರಕಟಿಸಿದೆ.

ರಾಜ್ಯ ಸರ್ಕಾರ ಅವರಿಗೆ ಶಾಶ್ವತ ಸೂರು ಕಲ್ಪಿಸುವವರೆಗೂ ಈ ಮಾಸಿಕ ಧನಸಹಾಯ ಲಭ್ಯವಾಗಲಿದೆ ಎಂದು ವಸತಿ ಸಚಿವ ಯು.ಟಿ. ಖಾದರ್ ಇಂದಿಲ್ಲಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 800 ರಿಂದ 900 ಕುಟುಂಬಗಳು ಸೂರು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಅವರಿಗೆ ಮನೆ ನಿರ್ಮಾಣ ಮಾಡಿಕೊಡುವವರೆಗೂ ಅವರು ವಸತಿ ಹಾಗೂ ಇತರೆ ವೆಚ್ಚಕ್ಕಾಗಿ ಸರ್ಕಾರ ಈ ರೂಪದಲ್ಲಿ ಹಣ ಭರಿಸಲಿದೆ.

ಸೂರು ಕಳೆದುಕೊಂಡ ಪ್ರತಿ ಕುಟುಂಬಕ್ಕೂ ಆರು ಲಕ್ಷ ರೂ. ವೆಚ್ಚದಲ್ಲಿ ಮಾದರಿ ಮನೆ ನಿರ್ಮಿಸಿಕೊಡಲಾಗುವುದು.
ನಿರಾಶ್ರಿತರಿಗೆ ಶೆಡ್ ನಿರ್ಮಾಣ ಮಾಡುವುದನ್ನು ಕೈಬಿಡಲಾಗಿದ್ದು, ರಾಜೀವ್ ಗಾಂಧಿ ವಸತಿ ನಿಗಮ ಮತ್ತು ಖಾಸಗಿಯವರಿಂದಲೂ ಇದೇ ವೆಚ್ಚದಲ್ಲಿ ಮನೆ ನಿರ್ಮಿಸುವ ಕಡೆ ಗಮನ ಹರಿಸಲಾಗಿದೆ ಎಂದರು. ಒಂದು ವೇಳೆ ಫಲಾನುಭವಿಗಳು ಸರ್ಕಾರ ನಿಗದಿ ಪಡಿಸಿರುವ ಹಣದ ಜೊತೆಗೆ ತಾವು ಮತ್ತಷ್ಟು ಹಣ ಹಾಕಿ ಕೊಂಡು ಮನೆ ನಿರ್ಮಾಣ ಮಾಡಿಕೊಂಡರೂ, ಅದಕ್ಕೂ ಅವಕಾಶ ಕಲ್ಪಿಸಲಾಗುವುದು. ಇಲ್ಲವೇ ತಮ್ಮ ಸ್ವಂತ ನಿವೇಶನದಲ್ಲಿ ಸೂರು ನಿರ್ಮಿಸಿಕೊಂಡರೂ, ಸರ್ಕಾರ ನಿಗದಿಪಡಿಸಿದ ಹಣವನ್ನು ಅವರ ಬಾಬ್ತಿಗೆ ಸಂದಾಯ ಮಾಡುವುದಾಗಿ ಸ್ಪಷ್ಟಪಡಿಸಿದರು.

ರಾಜೀವ್ ಗಾಂಧಿ ವಸತಿ ನಿಗಮದಿಂದ ಮಂಜೂರಾಗಿದ್ದ ಮನೆಗಳ ಫಲಾನುಭವಿಗಳು ನಿಗದಿತ ಸಮಯದಲ್ಲಿ ಮನೆ ನಿರ್ಮಾಣದ ಪ್ರಗತಿಯ ವಿವರಗಳನ್ನು ಅಪ್‍ಲೋಡ್ ಮಾಡದವರಿಗೆ ಸೆ.5ರಿಂದ 25ರ ನಡುವೆ ಒಂದು ಬಾರಿ ಅವಕಾಶ ಕಲ್ಪಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ರಾಜ್ಯದಲ್ಲಿ 72 ಸಾವಿರದ 370 ಮನೆಗಳು ವಿವಿಧ ಹಂತದಲ್ಲಿದ್ದು, ಅವುಗಳು ಬ್ಲಾಕ್ ಆಗಿದ್ದವು. ಬ್ಲಾಕ್ ತೆಗೆದು ಮನೆ ಪ್ರಗತಿ ವಿವರವನ್ನು ಆನ್‍ಲೈನ್ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಿದಾಗ 37,508 ಫಲಾನುಭವಿಗಳು ತಮ್ಮ ಮನೆಯ ವಿವರಗಳನ್ನು ಅಪ್‍ಲೋಡ್ ಮಾಡಿದ್ದರು. ಆ ಪೈಕಿ 19,245 ಮನೆಗಳ ವಿವರ ಸರಿಯಾಗಿದ್ದವು.

ಆಯಾಯ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದು. ಆ ಅಧಿಕಾರಿಗಳು ಅದನ್ನು ಪರಿಶೀಲಿಸಿ ಸರಿಯಾಗಿದೆ ಎಂದು ಕಳುಹಿಸಿದರೆ ಅಂಥವರಿಗೆ ಮತ್ತೆ ಆನ್‍ಲೈನ್ ನಲ್ಲಿ ಅಪ್‍ಲೋಡ್ ಮಾಡಲು ಮತ್ತೊಂದು ಅವಕಾಶ ಕಲ್ಪಿಸ ಲಾಗುತ್ತದೆ ಎಂದು ಹೇಳಿದರು. ಮೈತ್ರಿ ಸರ್ಕಾರದ ಪೂರ್ಣ ಅವಧಿಯಲ್ಲಿ 20 ಲಕ್ಷ ಮನೆಗಳನ್ನು ನಿರ್ಮಿಸಿ ಸೂರಿಲ್ಲದವರಿಗೆ ಹಂಚಲು ತೀರ್ಮಾನ ಕೈಗೊಳ್ಳಲಾಗಿದೆ.

ಪ್ರತಿ ವರ್ಷ ನಾಲ್ಕು ಲಕ್ಷ ಮನೆ ನಿರ್ಮಾಣ ಮಾಡಲಿದ್ದು, ಅದರಲ್ಲಿ 2.50 ಲಕ್ಷ ಗ್ರಾಮೀಣ ಭಾಗಕ್ಕೂ, ಉಳಿದ 1.50 ಲಕ್ಷ ಮನೆಗಳು ನಗರ ಪ್ರದೇಶಕ್ಕೆ ಮೀಸಲಿಡಲಾಗುವುದು. ಪ್ರಸಕ್ತ ವರ್ಷ ಕೊಳೆಗೇರಿ ನಿವಾಸಿಗಳಿಗೆ 83 ಸಾವಿರ ಮನೆ ನಿರ್ಮಿಸಲು ಕ್ರಿಯಾ ಯೋಜನೆ ರೂಪಿಸಿರುವುದರ ಜೊತೆಗೆ ಮನೆಗಳ ನಿರ್ಮಾಣಕ್ಕೆ ಟೆಂಡರ್ ಕರೆಯುವುದಾಗಿ ತಿಳಿಸಿದರು.

Translate »