ಸೋಮವಾರಪೇಟೆಯಲ್ಲಿ ಆಟಿ ಸಂಭ್ರಮ
ಕೊಡಗು

ಸೋಮವಾರಪೇಟೆಯಲ್ಲಿ ಆಟಿ ಸಂಭ್ರಮ

August 13, 2018

ಸೋಮವಾರಪೇಟೆ:  ನಾರಾಯಣ ಗುರು ಸೇವಾ ಸಮಿತಿ ಹಾಗೂ ತುಳು ನಾಡು ಬಿಲ್ಲವ ಮಹಿಳಾ ಸಂಘದ ವತಿಯಿಂದ ಇಲ್ಲಿನ ಜಾನಕಿ ಕನ್ವೆನ್‍ಷನ್ ಸಭಾಂಗಣದಲ್ಲಿ 6ನೇ ವರ್ಷದ ಆಟಿ ಸಂಭ್ರಮೋತ್ಸವ ಕಾರ್ಯಕ್ರಮ ನಡೆಯಿತು.

ನಾರಾಯಣಗುರು ಸೇವಾ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ಬಿ.ಟಿ. ರವಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮುದಾಯದ ಸಂಘಟನೆಗಳು ಹೆಚ್ಚು ಬಲಗೊಂಡಂತೆ ರಾಜಕೀಯ, ಆರ್ಥಿಕ, ಸಾಮಾಜಿಕವಾಗಿ ಉನ್ನತಿ ಸಾಧಿಸಬಹುದು. ಸಂಘಟನೆಗಳು ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ತಮ್ಮ ಆಚಾರ, ವಿಚಾರ, ಸಂಸ್ಕೃತಿಗಳನ್ನು ಉಳಿಸಿ ಬೆಳೆಸ ಬೇಕು. ಮುಂದಿನ ಜನಾಂಗಕ್ಕೂ ಹಸ್ತಾಂತರಿಸಬೇಕು ಎಂದು ಅಭಿಪ್ರಾಯಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಮಿತಿಯ ಅಧ್ಯಕ್ಷ ಬಿ.ಎ. ಭಾಸ್ಕರ್ ಮಾತನಾಡಿ, ಸಮುದಾಯದ ಹಿತ ಚಿಂತನೆಯೊಂದಿಗೆ ಸಂಘ ಕಾರ್ಯನಿರ್ವಹಿಸುತ್ತಿದ್ದು, ನಮ್ಮೊಳಗಿರುವ ಭಿನ್ನಾಭಿಪ್ರಾಯಗಳನ್ನು ಬದಿಗಿಡಬೇಕಿದೆ. ಇಂದಿಗೂ ಸಮುದಾಯ ಬಾಂಧವರು ತೀರಾ ಸಂಕಷ್ಟದ ಸ್ಥಿತಿಯಲ್ಲಿದ್ದು, ಅವರುಗಳ ಕಷ್ಟ ಸುಖದಲ್ಲಿ ಸಂಘಟನೆ ಭಾಗಿಯಾಗುತ್ತಿದೆ ಎಂದರು.

ಪೂರ್ವಿಕರು ನಮ್ಮ ಸಮುದಾಯಕ್ಕೆ ಭವ್ಯ ಸಂಸ್ಕೃತಿಯನ್ನು ಬಳುವಳಿಯಾಗಿ ನೀಡಿದ್ದಾರೆ. ಆಧುನಿಕ ಯುಗದ ಭರಾಟೆಯಲ್ಲಿ ಅವುಗಳನ್ನು ನಿರ್ಲಕ್ಷಿಸಬಾರದು. ಈ ಹಿನ್ನೆಲೆ ತುಳುನಾಡಿನ ವಿಶೇಷ ಆಚರಣೆಯಾದ ಆಟಿ ಸಂಭ್ರಮವನ್ನು ಸಮಿತಿಯ ಮೂಲಕ ಆಯೋಜಿಸಲಾಗಿದೆ. ಸಮುದಾಯ ಬಾಂಧವರನ್ನು ಒಂದೆಡೆ ಸೇರಿಸುವ ಮೂಲಕ ಪರಸ್ಪರ ಬಾಂಧವ್ಯ ವೃದ್ಧಿಸುವ ಕಾರ್ಯ ನಡೆಸಲಾಗುತ್ತಿದೆ ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ಸಮಿತಿಯ ಮಾಜಿ ಉಪಾಧ್ಯಕ್ಷ ಬಿ.ಡಿ. ರಘು, ಮಾಜೀ ಕಾರ್ಯದರ್ಶಿ ಬಿ.ಆರ್. ಜಯರಾಂ, ಮಾಜಿ ಖಜಾಂಚಿ ಎಂ.ಆರ್. ಸತೀಶ್, ಡೊಂಬಯ್ಯ, ಮಾಜಿ ಕಾರ್ಯದರ್ಶಿ ಕೆ.ಸಿ.ದಿನೇಶ್, ಮಾಜಿ ಸಹಕಾರ್ಯದರ್ಶಿ ಲಾಲೂ ಸಾಲ್ಯಾನ್, ತುಳುನಾಡು ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಬೇಬಿ ಚಂದ್ರಹಾಸ್, ಸೇವಾ ಸಮಿತಿಯ ಮಾಜೀ ಉಪಾಧ್ಯಕ್ಷೆ ಹೇಮ ಕೃಷ್ಣಪ್ಪ, ದಾನಿಗಳಾದ ಬಿ.ಆರ್. ಚಂದ್ರಹಾಸ್ ಅವರುಗಳು ಉಪಸ್ಥಿತರಿದ್ದರು. ನಂತರ ಸಮಾಜದ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಹಗ್ಗಜಗ್ಗಾಟ ಸ್ಪರ್ಧೆ, ಮಕ್ಕಳಿಗೆ ಸೇರಿದಂತೆ ವಯಸ್ಕರಿಗೆ ವಿವಿಧ ಕ್ರೀಡೆ ಹಾಗೂ ಮನೋರಂಜನಾ ಸ್ಪರ್ಧೆಗಳು ನಡೆದವು.

ಕಾಗಡಿಕಟ್ಟೆಯ ಸೈನಿಕ ದಿವಂಗತ ಬಿ.ಆರ್. ಮನು ಅವರ ಸ್ಮರಣಾರ್ಥ ಸಹೋದರ ಮಂಜುನಾಥ್ ಅವರು ಪ್ರಾಯೋಜಿಸಿದ್ದ ಬಹುಮಾನಗಳನ್ನು ವಿಜೇತರಿಗೆ ನೀಡಲಾಯಿತು. ಇದರೊಂದಿಗೆ ಆಟಿ ಮಾಸದ ವಿಶೇಷ ಖಾದ್ಯಗಳನ್ನು ಉಣಬಡಿಸಲಾಯಿತು. ತುಳುನಾಡಿನಲ್ಲಿ ಬಳಸಲ್ಪಡುತ್ತಿದ್ದ ವಿವಿಧ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

Translate »