ಸೋಮವಾರಪೇಟೆ ಬಳಿ ತಾಯಿ-ಮಗಳ ಹತ್ಯೆ
ಕೊಡಗು, ಮೈಸೂರು

ಸೋಮವಾರಪೇಟೆ ಬಳಿ ತಾಯಿ-ಮಗಳ ಹತ್ಯೆ

May 1, 2019

ಸೋಮವಾರಪೇಟೆ: ತೋಟದಲ್ಲಿ ಕೆಲಸ ಮಾಡುತ್ತಿದ್ದ ತಾಯಿ-ಮಗಳನ್ನು ಕತ್ತಿಯಿಂದ ಕೊಚ್ಚಿ ಕೊಲೆಗೈದಿರುವ ದಾರುಣ ಘಟನೆ ಸಮೀಪದ ದೊಡ್ಡಮಳ್ತೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ದಿ. ವೀರರಾಜು ಅವರ ಪತ್ನಿ ಕವಿತಾ(45) ಹಾಗೂ ಅವರ ಪುತ್ರಿ ಜಗಶ್ರೀ (17) ಹತ್ಯೆಗೀಡಾಗಿದ್ದು, ಘಟನೆಗೆ ಸಂಬಂಧಿ ಸಿದಂತೆ ಅದೇ ಗ್ರಾಮದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ಹೇಳಲಾಗಿದೆ. ಕವಿತಾ ಅವರ ತಲೆ, ಕುತ್ತಿಗೆ, ಕೈ, ಕಾಲು ಹಾಗೂ ಜಗಶ್ರೀಯ ಕೈ ಹಾಗೂ ತಲೆ ಭಾಗಕ್ಕೆ ಕತ್ತಿಯಿಂದ ಕಡಿದಿರುವ ಪರಿಣಾಮ ತೀವ್ರ ರಕ್ತಸ್ರಾವವಾಗಿ ಈರ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತನ್ನ ತಾಯಿಯ ಮೊಬೈಲ್‍ಗೆ ಕರೆ ಮಾಡಿದ ಪುತ್ರ ಮೇಘಮದನ್‍ರಾಜ್, ಮೊಬೈಲ್ ಸ್ವಿಚ್‍ಆಫ್ ಆಗಿದ್ದರಿಂದ ತೋಟದ ಬಳಿ ತೆರಳಿದ ಸಂದರ್ಭ ಘಟನೆ ಬೆಳಕಿಗೆ ಬಂದಿದೆ.

ತಕ್ಷಣ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಅವರು ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಸೋಮವಾರಪೇಟೆ ಡಿವೈಎಸ್‍ಪಿ ದಿನಕರ್‍ಶೆಟ್ಟಿ, ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಶ್ವಾನದಳದಿಂದ ಪರಿಶೀಲನೆ ನಡೆಸದೇ, ಸೂಕ್ತ ರೀತಿ ಮಹಜರ್ ಕೂಡ ಮಾಡದೇ ದೇಹಗಳನ್ನು ಸ್ಥಳಾಂತರಿಸಲು ಪೊಲೀಸರು ಮುಂದಾಗುತ್ತಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿ ಸಿದ್ದರಿಂದ ಕೆಲಕಾಲ ಗೊಂದಲ ಉಂಟಾಗಿತ್ತು. ಈ ಸಂದರ್ಭ ಡಿವೈಎಸ್‍ಪಿ ದಿನಕರ್ ಶೆಟ್ಟಿ ಸ್ಥಳೀಯರನ್ನು ಸಮಾಧಾನಪಡಿ ಸಿದರು. ನಂತರ ಶ್ವಾನದಳದಿಂದ ಪರಿಶೀಲನೆ ನಡೆಸಿದ ನಂತರ ದೇಹಗಳನ್ನು ಸಾಗಿಸಲಾಯಿತು. ಘಟನೆಗೆ ಆಸ್ತಿ ವೈಷಮ್ಯವೇ ಕಾರಣ ಎನ್ನಲಾಗಿದ್ದು, ಈ ಹಿಂದೆ ಆಸ್ತಿಗೆ ಸಂಬಂಧಿಸಿದಂತೆ ತಕರಾರು ನಡೆಸುತ್ತಿದ್ದ ಸ್ಥಳೀಯ ಮೂವರನ್ನು ಪೊಲೀಸರು ವಶಕ್ಕೆ ಪಡೆದು, ತೀವ್ರ ವಿಚಾರಣೆಗೆ ಒಳಪಡಿಸಿರುವ ಬಗ್ಗೆ ತಿಳಿದುಬಂದಿದೆ. ಜಗಶ್ರೀ ಹಾಸನದ ಸಂತ ಫಿಲೋಮಿನಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ರಜೆಯ ಹಿನ್ನೆಲೆಯಲ್ಲಿ ಮನೆಗೆ ಬಂದಿದ್ದಳು. ಪುತ್ರ ಮೇಘಮದನ್‍ರಾಜ್ ವೀರಾಜಪೇಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ.

 

 

Translate »