ಮೈಸೂರು: ಪಬ್ನಲ್ಲಿ ಪಾರ್ಟಿ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಯುವತಿಯೊಂದಿಗೆ ನಾಲ್ವರು ಯುವಕರು ಅಸಭ್ಯವಾಗಿ ವರ್ತಿಸಿ ಹಲ್ಲೆ ನಡೆಸಿರುವ ಬಗ್ಗೆ ಜಯಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋಕುಲಂನ ಪಂಚವಟಿ ವೃತ್ತದ ಬಳಿಯ ಲಾಸ್ಟ್ ಅಂಡ್ ಫೌಂಡ್ ಪಬ್ನಲ್ಲಿ ಶನಿವಾರ ಸಂಜೆ ಪಾರ್ಟಿ ಮುಗಿಸಿಕೊಂಡು ಹೊರ ಬಂದ ವಿಜಯನಗರ 3ನೇ ಹಂತದ ನಿವಾಸಿ ಮಹಾಲಕ್ಷ್ಮಿ(22) ಎಂಬ ಯುವತಿ ಮೇಲೆ ಉಮೇಶ್ಕುಮಾರ್, ವಿವೇಕ್, ದಿನೇರ್ಶ, ರವೀಶ್ ಎಂಬುವರು ಹಲ್ಲೆ ನಡೆಸಿದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಘಟನೆ ವಿವರ: ಮಹಾಲಕ್ಷ್ಮಿರವರು ಶನಿವಾರ ಸಂಜೆ ಪಂಚವಟಿ ವೃತ್ತದ ಬಳಿಯಿರುವ ಲಾಸ್ಟ್ ಅಂಡ್ ಫೌಂಡ್ ಪಬ್ಗೆ ಹೋಗಿದ್ದು, ಪಾರ್ಟಿ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದಾಗ ಉಮೇಶ್ಕುಮಾರ್ ಹಾಗೂ ವಿವೇಕ್ ಎಂಬುವರು ಆಶ್ಲೀಲವಾಗಿ ವರ್ತಿಸಿ ಹಲ್ಲೆ ನಡೆಸಿದ್ದಾರೆ. ನಂತರ ಡ್ರಾಗನ್ನಲ್ಲಿ ಕೈಗೆ ಹೊಡೆದು, ಕುತ್ತಿಗೆ ಹಿಡಿದು ಎಳೆದಾಡಿ ಬಟ್ಟೆಗಳನ್ನು ಹರಿದು ಹಾಕಿದ್ದಾರೆ. ನಂತರ ರವೀಶ್ ಮತ್ತು ದಿನೇಶ್ ಎಂಬುವರು ಅಶ್ಲೀಲವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿದರು ಎಂದು ಮಹಾಲಕ್ಷ್ಮಿ ದೂರಿನಲ್ಲಿ ತಿಳಿಸಿದ್ದಾರೆ.