ಬಿಜೆಪಿ ಹೊರಗಿಡಲು ಕಾಂಗ್ರೆಸ್‍ನೊಂದಿಗೆ ಹೊಂದಾಣಿಕೆ ಪ್ರಯತ್ನ: ಹೆಚ್‍ಡಿಡಿ
ಹಾಸನ

ಬಿಜೆಪಿ ಹೊರಗಿಡಲು ಕಾಂಗ್ರೆಸ್‍ನೊಂದಿಗೆ ಹೊಂದಾಣಿಕೆ ಪ್ರಯತ್ನ: ಹೆಚ್‍ಡಿಡಿ

September 5, 2018

ಹಾಸನ: ಅತಂತ್ರವಾಗಿರುವ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲಾಗುವುದು ಎಂದು ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನದಲ್ಲಿ ನಮ್ಮ ಪಕ್ಷ ಬಹುಮತ ಹೊಂದಿದೆ. ಮೈಸೂರು ಮತ್ತು ತುಮಕೂರಿನಲ್ಲಿ ಇಬ್ಬರೂ ಸೇರಿ ಬಿಜೆಪಿಯನ್ನು ಹೊರಗಿಡ ಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದ್ದು, ಈ ಬಗ್ಗೆ ಯಾರೊಂದಿಗೂ ಇನ್ನೂ ಮಾತುಕತೆ ನಡೆಸಿಲ್ಲ. ಸದ್ಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿದೇಶಕ್ಕೆ ಹೋಗಿದ್ದಾರೆ. ಮೈಸೂರಲ್ಲಿ ಬಿಜೆಪಿಯವರನ್ನು ಹೊರಗಿಡಲು ನಾವು ಕಾಂಗ್ರೆಸ್‍ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ರಾಜ್ಯದ ಎಲ್ಲಾ ಕಡೆ ಇದೇ ರೀತಿ ಮಾಡಿಕೊಳ್ಳುತ್ತೇವೆ ಎಂದರು. ಲೋಕಸಭಾ ಚುನಾವಣೆ ಬೇರೆ. ಸ್ಥಳೀಯ ಸಂಸ್ಥೆ ಚುನಾವಣೆ ಬೇರೆ. ಅದಕ್ಕೂ ಇದಕ್ಕೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಸದ್ಯ ರಾಹುಲ್ ಗಾಂಧಿಯವರು ಕೈಲಾಸ ಯಾತ್ರೆಯಲ್ಲಿದ್ದಾರೆ. ಅವರು ಬಂದ ನಂತರ ಇದರ ಬಗ್ಗೆ ಮಾತುಕತೆ ನಡೆಸುತ್ತೇನೆ ಎಂದರಲ್ಲದೆ, ಸಂಪುಟ ವಿಸ್ತರಣೆ ಸಾಧ್ಯತೆ ಇದೆ ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿದ ಗೌಡರು, ಇದೆಲ್ಲಾ ಸರ್ಕಾರದಲ್ಲಿರುವ ಪಾಲುದಾರರಿಗೆ ಸೇರಿದ್ದು. ಹೆಚ್ಚಿನ ಪಾಲುದಾರಿಕೆ ನಮಗಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಈ ಕುರಿತು ಈಗಾಗಲೇ ಹೇಳಿದ್ದಾರೆ ಎಂದು ಹೇಳಿದರು.

Translate »