ಬೆಂಗಳೂರು, ಮೇ 31- ಕೇಂದ್ರದ ಮಾನವ ಸಂಪನ್ಮೂಲ ಸಚಿವಾಲಯ ಮಾರ್ಗಸೂಚಿಗಳನ್ನು ನೀಡಿದ ಬಳಿಕ ನೂತನ ಶೈಕ್ಷಣಿಕ ವರ್ಷದ ಕ್ಯಾಲೆಂಡರ್ಅನ್ನು ಪ್ರಕಟಗೊಳಿಸಲಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ಕುಮಾರ್ ಶನಿವಾರ ಹೇಳಿದ್ದಾರೆ.
ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮಾರ್ಗ ಸೂಚಿ ಹೊರಡಿಸುತ್ತಿದ್ದಂತೆಯೇ ನೂತನ ಶೈಕ್ಷಣಿಕ ವರ್ಷದ ಕ್ಯಾಲೆಂಡರ್ನ್ನು ಬಿಡುಗಡೆ ಮಾಡಲಾಗುತ್ತದೆ ಎಂದಿದ್ದಾರೆ.
ಇದೇ ವೇಳೆ ಶಾಲೆಗಳು ಯಾವಾಗ ಪುನ ರಾರಂಭಗೊಳ್ಳುತ್ತದೆ ಎಂಬ ಪ್ರಶ್ನೆಗೆ ಮೌನತಾಳಿದ್ದಾರೆ. ಪಠ್ಯಕ್ರಮಗಳ ಗಾತ್ರ ಮತ್ತು ಶೈಕ್ಷಣಿಕ ವರ್ಷದ ಅವಧಿ ಯನ್ನು ರಾಜ್ಯದ ಅವಶ್ಯಕತೆಗಳಿಗನುಗುಣವಾಗಿ ನಿರ್ಧಾರ ಕೈಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ಎಂಬಸ್ಸಿ ಗ್ರೂಪ್ ರೂ. 75 ಲಕ್ಷ ಮೌಲ್ಯದ ಸ್ಯಾನಿಟೈಸರ್ ವಿತರಿಸಿದ್ದು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಶಿಕ್ಷಕರು ಮತ್ತು ಕೆಡೆಟ್ಗಳು ಕೈಯಿಂದ ಹೊಲಿದು ತಯಾರಿಸಿದ ಮಾಸ್ಕ್ಗಳನ್ನು ವಿತರಿಸಿದ್ದಾರೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯಾ ಮಾತನಾಡಿ, ಇಂತಹ ಸಾಂಕ್ರಾಮಿಕ ಸಮಯದಲ್ಲಿ ಸಹಾಯ ಮಾಡಲು ಬಹಳ ಸಂತೋಷವಾಗುತ್ತಿದೆ ಎಂದಿದ್ದಾರೆ.