ದೇವೇಗೌಡರಿಂದ ರಾಹುಲ್‍ಗೆ 16 ಸೀಟು ಗೆಲ್ಲಿಸಿಕೊಡುವ ಭರವಸೆ
ಮೈಸೂರು

ದೇವೇಗೌಡರಿಂದ ರಾಹುಲ್‍ಗೆ 16 ಸೀಟು ಗೆಲ್ಲಿಸಿಕೊಡುವ ಭರವಸೆ

March 22, 2019

ಬೆಂಗಳೂರು: ಕಾಂಗ್ರೆಸ್‍ಗೆ ಕಬ್ಬಿಣದ ಕಡಲೆಯಾಗಿರುವ ಕ್ಷೇತ್ರಗಳನ್ನು ಗೆಲ್ಲಿಸಿಕೊಡಲು ಸಕಲ ಪ್ರಯತ್ನ ಮಾಡುವುದಾಗಿ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರಿಗೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇ ಗೌಡ ಭರವಸೆ ನೀಡಿದ್ದಾರೆ. ರಾಜ್ಯದ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳ ಪೈಕಿ ಇಪ್ಪತ್ತಕ್ಕೂ ಹೆಚ್ಚು ಸೀಟುಗಳನ್ನು ಮೈತ್ರಿಕೂಟ ಗೆಲ್ಲುತ್ತದೆ ಎಂದು ಭರವಸೆ ನೀಡಲಾರೆ. ಆದರೆ ನಿಶ್ಚಿತವಾಗಿ ಹದಿನೈದರಿಂದ ಹದಿನಾರು ಸೀಟುಗಳನ್ನು ಗೆಲ್ಲಿಸಿಕೊಡಲು ಶ್ರಮಿಸುತ್ತೇನೆ ಎಂದು ಗೌಡರು ಹೇಳಿದ್ದಾರೆ.

ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಕೆಲ ಕ್ಷೇತ್ರಗಳು ಕಾಂಗ್ರೆಸ್ ಪಾಲಿಗೆ ಸಂಕಷ್ಟಕರ ಕ್ಷೇತ್ರಗಳಾಗಿದ್ದು, ಇಲ್ಲೆಲ್ಲ ನಿಮ್ಮ ಅಭ್ಯರ್ಥಿ ಗೆಲ್ಲಿಸಲು ನನಗಿ ರುವ ಅನುಭವವನ್ನು ಸಂಪೂರ್ಣವಾಗಿ ಧಾರೆ ಎರೆಯುತ್ತೇನೆ ಎಂದು ದೇವೇ ಗೌಡರು ಭರವಸೆ ನೀಡಿದ್ದಾರೆ. ಬಿಜೆಪಿ ಮರಳಿ ಅಧಿಕಾರಕ್ಕೆ ಬರುವ ಉದ್ದೇಶ ದಿಂದ ಸಕಲ ಯತ್ನಗಳನ್ನು ನಡೆಸಿದ್ದು ಅದಕ್ಕೆ ಹಲವು ರೀತಿಯ ಅನುಕೂಲ ಗಳಿವೆ. ನರೇಂದ್ರ ಮೋದಿ ಅವರನ್ನು ಪ್ರಧಾನಿ ಹುದ್ದೆಗೆ ಏರಿಸಲು ದೇಶದ ದೊಡ್ಡ ದೊಡ್ಡ ಉದ್ಯಮಿಗಳ ಪಡೆ ಕಾತರದಿಂದಿದೆ.

ಕಾಂಗ್ರೆಸ್ ಎಲ್ಲೆಲ್ಲಿ ಸ್ಪರ್ಧಿಸಿದೆಯೋ ಅಲ್ಲೆಲ್ಲ ಜೆಡಿಎಸ್ ಮತಗಳನ್ನು ಸಂಪೂರ್ಣವಾಗಿ ಅದಕ್ಕೆ ಹಾಕಿಸಲು ಕಾರ್ಯತಂತ್ರ ರೂಪಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಯಾವುದೇ ಒಂದು ಪಕ್ಷ ಸುಮ್ಮನೆ ಉಳಿದುಕೊಂಡರೂ ಗಂಡಾಂತರ ತಪ್ಪಿದ್ದಲ್ಲ. ಹೀಗಾಗಿ ಮೈತ್ರಿಕೂಟದ ಅಭ್ಯರ್ಥಿಗಳ ಗೆಲ್ಲಿಸಲು ಎಲ್ಲರೂ ಶ್ರಮ ವಹಿಸಬೇಕು. ಈ ಅಂಶವನ್ನು ನಿಮ್ಮ ಪಕ್ಷದ ರಾಜ್ಯ ನಾಯಕರಿಗೆ ಮನದಟ್ಟು ಮಾಡಿಕೊಡಿ ಎಂದು ದೇವೇಗೌಡರು ಹೇಳಿದ್ದಾರೆ. ಮೈತ್ರಿಕೂಟದ ಅಭ್ಯರ್ಥಿ ಸ್ಪರ್ಧಿಸಿದಾಗ ಟಿಕೆಟ್ ಸಿಗದ ಪಕ್ಷದ ಸ್ಥಳೀಯ ನಾಯಕರು, ಕಾರ್ಯಕರ್ತರಿಗೆ ನೋವಾಗುವುದು ಸಹಜ. ಆದರೆ ಅದನ್ನೆಲ್ಲ ಮರೆತು ದುಡಿಯಬೇಕಾದ ಅನಿವಾರ್ಯತೆ ಇದೆ. ನೀವು ದೇಶದ ಪ್ರಧಾನಿ ಹುದ್ದೆಗೇರಬೇಕು ಎಂಬುದು ನನ್ನಾಸೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಕ್ಯಾಂಡಿಡೇಟುಗಳು ನಿಂತ ಕಡೆಯಲ್ಲೆಲ್ಲ ಜೆಡಿಎಸ್ ಮತಗಳನ್ನು ನಿಮ್ಮ ಅಭ್ಯರ್ಥಿಗಳಿಗೆ ಮತಗಳನ್ನು ವರ್ಗಾಯಿಸಲು ಮನಃಪೂರ್ವಕವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದೇ ರೀತಿ ಮಾರ್ಚ್ ಮೂವತ್ತೊಂದರಂದು ನಡೆಯಲಿರುವ ಉಭಯ ಪಕ್ಷಗಳ ಬೃಹತ್ ಸಮಾವೇಶದ ನಂತರ ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಪ್ರವಾಸ ನಡೆಸಿ ಮೈತ್ರಿಕೂಟದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ತೀರ್ಮಾನಿಸಿದ್ದಾರೆ.

Translate »