ಮೈಸೂರು: ಕುತ್ತಿಗೆ ಅದುಮಿ ವ್ಯಕ್ತಿಯನ್ನು ಹತ್ಯೆಗೈದಿರುವ ಘಟನೆ ಬಿಳಿಕೆರೆ ಸಮೀಪ ಆರ್ಎಂಪಿ ಕ್ವಾರ್ಟರ್ಸ್ ಬಳಿ ಹುಣಸೂರು ರಸ್ತೆಯಲ್ಲಿ ಕಳೆದ ರಾತ್ರಿ ಸಂಭವಿಸಿದೆ. ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲೂಕು, ಹುಲಿಕೆರೆ ಗ್ರಾಮದ ಪುಟ್ಟಲಿಂಗಣ್ಣ ಅವರ ಮಗ ಶಿವಕುಮಾರ್ (30) ಕೊಲೆಯಾದವರು.
ಮೈಸೂರಿನ ಇನ್ಫೋಸಿಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಅವರ ಮೃತದೇಹ ಬಿಳಿಕೆರೆ ಸಮೀಪ ಚಿಕ್ಕಾಡಿಗನಹಳ್ಳಿ ಗೇಟ್ ಬಳಿ ಹುಣಸೂರು ರಸ್ತೆಯಲ್ಲಿ ಇಂದು ಬೆಳಿಗ್ಗೆ ಪತ್ತೆಯಾಯಿತು. ಟವಲ್ನಿಂದ ಕುತ್ತಿಗೆ ಹಿಸುಕಿ ಶಿವಕುಮಾರ್ನನ್ನು ಹತ್ಯೆಗೈದು ಆಗಂತುಕರು ಪರಾರಿಯಾಗಿದ್ದಾರೆ ಎಂದು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಬಿಳಿಕೆರೆ ಠಾಣೆ ಪೊಲೀಸರು ಮಹಜರು ನಡೆಸಿದಾಗ ಮೃತದೇಹ ರಸ್ತೆ ಬದಿ ಬಿದ್ದಿದ್ದು, ಕುತ್ತಿಗೆಯಲ್ಲಿ ಟವೆಲ್ ಹಾಗೆಯೇ ಇತ್ತು. ಪಕ್ಕದಲ್ಲೇ ಶಿವಕುಮಾರ್ನ ಬೈಕ್ ಸಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ಫೋಸಿಸ್ನಿಂದ ಹಿಂಬಾಲಿಸಿಕೊಂಡು ಬಂದು ಶನಿವಾರ ಮಧ್ಯರಾತ್ರಿ ಶಿವಕುಮಾರ್ನನ್ನು ಕುತ್ತಿಗೆ ಹಿಸುಕಿ ಹತ್ಯೆಗೈದು ಮರಕ್ಕೆ ನೇಣು ಹಾಕಿ ದುಷ್ಕರ್ಮಿಗಳು ಪರಾರಿಯಾಗಿರುವ ಶಂಕೆ ಇದೆ ಎಂದು ಸಂಬಂಧಿಕರು ಆರೋಪಿಸಿ ದ್ದರು. ಪ್ರಕರಣ ದಾಖಲಿಸಿಕೊಂಡಿರುವ ಹುಣಸೂರು ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ ಅವರು, ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರ ದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ವಾರಸುದಾರರಿ ಗೊಪ್ಪಿಸಿದರು. ಮೃತದೇಹ ಪತ್ತೆಯಾಗುತ್ತಿ ದ್ದಂತೆಯೇ ಬೆಳಿಗ್ಗೆಯೇ ಎರಡು ಪ್ರತ್ಯೇಕ ತನಿಖಾ ತಂಡಗಳನ್ನು ರಚಿಸಿ ಕೊಲೆಗಡುಕರ ಪತ್ತೆಗೆ ಶೋಧ ಕಾರ್ಯ ಆರಂಭಿಸ ಲಾಗಿತ್ತು. ಸಂಜೆ ವೇಳೆಗೆ ವ್ಯಕ್ತಿ ಹತ್ಯೆಗೈದು ತಲೆಮರೆಸಿಕೊಂಡಿರುವ ಇಬ್ಬರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಾಳೆ (ಏ.1) ಮಧ್ಯಾಹ್ನದ ವೇಳೆಗೆ ಕೊಲೆಗಡುಕರನ್ನು ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.