ತಲೆ ಮೇಲೆ ಕಲ್ಲು ಎತ್ತಿಹಾಕಿ ಮಹಿಳೆ ಕೊಲೆ
Uncategorized, ಮಂಡ್ಯ

ತಲೆ ಮೇಲೆ ಕಲ್ಲು ಎತ್ತಿಹಾಕಿ ಮಹಿಳೆ ಕೊಲೆ

March 4, 2020

ಶ್ರೀರಂಗಪಟ್ಟಣ, ಮಾ.3(ವಿನಯ್ ಕಾರೇಕುರ)- ತಲೆ ಮೇಲೆ ಕಲ್ಲು ಎತ್ತಿಹಾಕಿ ಮಹಿಳೆಯೊಬ್ಬರನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಪಟ್ಟಣದ ಮೈಸೂರು- ಬೆಂಗಳೂರು ಹೆದ್ದಾರಿ ಸಮೀಪದ ಅಗ್ನಿಶಾಮಕ ಠಾಣೆಯ ಪಕ್ಕದ ನೀರಿನ ಟ್ಯಾಂಕ್ ಹಿಂಭಾಗದಲ್ಲಿ ನಡೆದಿದೆ.

ಸುಮಾರು 30 ರಿಂದ 35 ವಯೋಮಾನದ ಮಹಿಳೆ ಎಂದು ಅಂದಾಜಿಸಲಾ ಗಿದ್ದು, ಮುಖ ಛಿದ್ರವಾಗಿದ್ದರಿಂದ ಈಕೆಯ ಗುರುತು ಪತ್ತೆಯಾಗಿಲ್ಲ. ಮಂಗಳವಾರ ಬೆಳಿಗ್ಗೆ ಸ್ಥಳೀಯರೊಬ್ಬರು ಬಹಿರ್ದೆಸೆಗೆ ಹೋಗಿದ್ದಾಗ ಮಹಿಳೆಯ ಶವ ಪತ್ತೆಯಾ ಗಿದ್ದು, ಕೂಡಲೇ ಅವರು ಪೊಲೀಸ್ ಹೈವೇ ಪೆಟ್ರೋಲ್ ವಾಹನಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಎಎಸ್‍ಪಿ ಶೋಭಾರಾಣಿ, ಪಿಎಸ್‍ಐ ಮುದ್ದುಮಾದಪ್ಪ, ಸರ್ಕಲ್ ಇನ್‍ಸ್ಪೆಕ್ಟರ್ ಯೋಗೇಶ್ ಸೇರಿದಂತೆ ಸಿಬ್ಬಂದಿ, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂಬಂಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೋಮವಾರ ರಾತ್ರಿ ದುಷ್ಕರ್ಮಿಗಳು ಮಹಿಳೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ. ಇದರಿಂದ ಶವದ ಗುರುತು ಸಿಕ್ಕಿಲ್ಲ. ಕೊಲೆ ಯಾಕೆ ಮಾಡಿದ್ದಾರೆ ಎಂಬುದರ ಬಗ್ಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೇಲ್ನೋಟಕ್ಕೆ ಇದು ವೇಶ್ಯಾವಾಟಿಕೆ ಸಂಬಂಧ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಶವವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಶ್ರೀರಂಗಪಟ್ಟಣ ಸರ್ಕಲ್ ಇನ್‍ಸ್ಪೆಕ್ಟರ್ ಯೋಗೇಶ್ ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು.

Translate »