ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಕೃಷ್ಣರಾಜಸಾಗರ (ಕೆಆರ್ಎಸ್)ಕ್ಕೆ ಅ.7ರಿಂದ 9ರವರೆಗೆ ಮೂರು ದಿನದಲ್ಲಿ 42 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದಾರೆ. ಅ.7 ಮತ್ತು 8ರಂದು ಆಯುಧ ಪೂಜೆ ಮತ್ತು ವಿಜಯದಶಮಿ ಮೆರವಣಿಗೆಯಂದು 25 ಸಾವಿರ ಮತ್ತು ಅ.9ರಂದು ಒಂದೇ ದಿನ 17 ಸಾವಿರ ಮಂದಿ ಕೆಆರ್ಎಸ್ಗೆ ಭೇಟಿ ನೀಡಿದ್ದಾರೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಕೆಆರ್ಎಸ್ನ ಹೊರಭಾಗದ ಹೆಲಿಪ್ಯಾಡ್ ಬಳಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿ ಅಲ್ಲಿಂದ ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಉಚಿತವಾಗಿ ಪ್ರವಾಸಿಗರನ್ನು ಬೃಂದಾವನಕ್ಕೆ ಕರೆದೊಯ್ಯಲು ಅ.6ರಿಂದ 8ರವರೆಗೆ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ಬೃಂದಾವನದ ಪಾರ್ಕಿಂಗ್ ಸ್ಥಳದ ನೂಕು-ನುಗ್ಗಲು ತಪ್ಪಿಸಿದಂತಾಯಿತಲ್ಲದೆ, ಟ್ರಾಫಿಕ್ ಜಾಮ್ ಆಗದೆ ಸರಾಗವಾಗಿ ಪ್ರವಾಸಿಗರನ್ನು ಕರೆದೊಯ್ಯಲು ಸಾಧ್ಯವಾಯಿತು. ಅದಕ್ಕಾಗಿ ಮೈಸೂರಿ ನಿಂದ 15 ನಗರ ಸಾರಿಗೆ ಬಸ್ಗಳನ್ನು ಕಾವೇರಿ ನೀರಾವರಿ ನಿಗಮವು ಬಾಡಿಗೆ ಪಡೆದು ಕೊಂಡಿತ್ತು. ಪ್ರತೀ ದಿನ ಬೆಳಿಗ್ಗೆ 8ರಿಂದ ರಾತ್ರಿ 9 ಗಂಟೆವರೆಗೆ ಬೃಂದಾವನಕ್ಕೆ ಪ್ರವೇಶಾವ ಕಾಶ ಕಲ್ಪಿಸಲಾಗುತ್ತಿದ್ದು, ಸಂಜೆ 6.30ರಿಂದ ರಾತ್ರಿ 9 ಗಂಟೆವರೆಗೆ ಸಂಗೀತ ಕಾರಂಜಿ ವೀಕ್ಷಿಸಬಹುದು. ಸಾಮಾನ್ಯ ದಿನಗಳಲ್ಲಿ ಬೆಳಿಗ್ಗೆ 8ರಿಂದ ರಾತ್ರಿ 8 ಗಂಟೆವರೆಗೆ ಕೆಆರ್ಎಸ್ಗೆ ಪ್ರವೇಶವಿದ್ದು, ಶನಿವಾರ, ಭಾನುವಾರ ಹಾಗೂ ರಜಾ ದಿನಗಳಂದು ಮಾತ್ರ ಬೆಳಿಗ್ಗೆ 8ರಿಂದ ರಾತ್ರಿ 9 ಗಂಟೆವರೆಗೆ ಪ್ರವೇಶ ಕಲ್ಪಿಸಲಾಗುತ್ತದೆ. ಸಂಗೀತ ಕಾರಂಜಿಯು ಸಾಮಾನ್ಯ ದಿನಗಳಲ್ಲಿ ರಾತ್ರಿ 7ರಿಂದ 8 ಗಂಟೆವರೆಗೆ ಮಾತ್ರ ಇರುತ್ತದೆ ಎಂದು ಅಧಿಕಾರಿ ಗಳು ತಿಳಿಸಿದ್ದಾರೆ. ವಯಸ್ಕರಿಗೆ 50 ರೂ., ಮಕ್ಕಳಿಗೆ 10 ರೂ ಹಾಗೂ ಶಾಲಾ ಪ್ರವಾಸ ಕೈಗೊಂಡ ಮಕ್ಕಳಿಗೆ 5 ರೂ. ಪ್ರವೇಶ ಶುಲ್ಕ ಹೆಚ್ಚಿಸಲಾಗಿದ್ದು, ವಾಹನ ಪಾರ್ಕಿಂಗ್ ಶುಲ್ಕವೂ ಪರಿಷ್ಕರಣೆಯಾಗಿರುವುದರಿಂದ ಕೆಆರ್ಎಸ್ ಆದಾಯದಲ್ಲೂ ಹೆಚ್ಚಳವಾಗಿದೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.