ಬಿಜೆಪಿ ಅಭ್ಯರ್ಥಿ ನಿರಂಜನಮೂರ್ತಿ ಪರ ಸಂಸದ ಪ್ರತಾಪ್‍ಸಿಂಹ ಮತ ಯಾಚನೆ
ಮೈಸೂರು

ಬಿಜೆಪಿ ಅಭ್ಯರ್ಥಿ ನಿರಂಜನಮೂರ್ತಿ ಪರ ಸಂಸದ ಪ್ರತಾಪ್‍ಸಿಂಹ ಮತ ಯಾಚನೆ

June 5, 2018

ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‍ಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಿರಂಜನಮೂರ್ತಿ ಪರವಾಗಿ ಸಂಸದ ಪ್ರತಾಪ್‍ಸಿಂಹ ಸೋಮವಾರ ಪ್ರಚಾರ ಕೈಗೊಂಡರು.

ಸಂಸದ ಪ್ರತಾಪ್‍ಸಿಂಹ, ಪ್ರಮುಖ ಬಿಜೆಪಿ ಮುಖಂಡರು ಹಾಗೂ ಮೈಸೂರು ನಗರ ಮತ್ತು ಕೃಷ್ಣರಾಜ ಕ್ಷೇತ್ರದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರೊಂದಿಗೆ ಮೈಸೂರಿನ ಹಲವು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಬಿಜೆಪಿ ಅಭ್ಯರ್ಥಿಗೆ ಮತ ನೀಡುವಂತೆ ಶಿಕ್ಷಕರಲ್ಲಿ ಮನವಿ ಮಾಡಿದರು.

ಸದ್ವಿದ್ಯಾ ಕಾಲೇಜಿಗೆ ತೆರಳಿ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ನಿರಂಜನಮೂರ್ತಿ, ಸ್ವತಃ ಶಿಕ್ಷಕರೇ ಆಗಿದ್ದು, ಶಿಕ್ಷಕರ ಸಮಸ್ಯೆಗಳ ಸಂಪೂರ್ಣ ಮಾಹಿತಿ ಹೊಂದಿದ್ದಾರೆ. ಹಲವು ವರ್ಷಗಳಿಂದ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿರುವ ಅವರು, ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಿ, ತಿಂಗಳಿಗೆ 30,000 ರೂ. ವೇತನ ಕೊಡಿಸುವ ಗುರಿ ಹೊಂದಿದ್ದಾರೆ. ಬಡ್ತಿ ಶಿಕ್ಷಕರು, ಐಟಿಐ, ಪಾಲಿಟೆಕ್ನಿಕ್ ಶಿಕ್ಷಕರ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವ ಯೋಜನೆ ರೂಪಿಸಿದ್ದಾರೆ. ಇವೆಲ್ಲವೂ ಕಾರ್ಯರೂಪಕ್ಕೆ ಬರಲು ನಿರಂಜನಮೂರ್ತಿ ಅವರಿಗೆ ಮತ ಚಲಾಯಿಸುವಂತೆ ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಮೈಸೂರು ನಗರ ಯುವ ಮೋರ್ಚಾ ಅದ್ಯಕ್ಷ ಗೊಕುಲ್ ಗೋವರ್ಧನ್, ಕೆ.ಆರ್. ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಜೈಶಂಕರ್, ಪ್ರಧಾನ ಕಾರ್ಯದರ್ಶಿ ಕೆ.ಎಂ. ನಿಶಾಂತ್, ಬಿಜೆಪಿ ಮುಖಂಡರಾದ ಸೋಮಸುಂದರ್, ಜಗದೀಶ್, ಮನೋಜ್, ಸಂತೋಷ್, ಸದ್ವಿದ್ಯಾ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು ಉಪಸ್ಥಿತರಿದ್ದರು.

ವಿಧಾನಪರಿಷತ್‍ಗೆ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ನಿರಂಜನಮೂರ್ತಿ ಪರ ಸಂಸದ ಪ್ರತಾಪ್‍ಸಿಂಹ ಮೈಸೂರಿನ ಸದ್ವಿದ್ಯಾ ಕಾಲೇಜಿನಲ್ಲಿ ಮತ ಯಾಚಿಸಿದರು.

Translate »