ಜೂ.21ರಿಂದ ಹೆಚ್‍ಡಿಕೆ ಬಜೆಟ್ ಪೂರ್ವಭಾವಿ ಸಭೆ
ಮೈಸೂರು

ಜೂ.21ರಿಂದ ಹೆಚ್‍ಡಿಕೆ ಬಜೆಟ್ ಪೂರ್ವಭಾವಿ ಸಭೆ

June 18, 2018

ಬೆಂಗಳೂರು: ದೋಸ್ತಿ ಸಂಘರ್ಷದ ನಡುವೆಯೂ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೊಸ ಬಜೆಟ್ ಮಂಡಿಸುವುದು ಖಚಿತವಾಗಿದೆ. ಈ ಸಂಬಂಧ ಮುಂಗಡ ಪತ್ರ ಸಿದ್ಧತೆಯ ಪೂರ್ವಭಾವಿ ಸಭೆಗೆ ವೇಳಾಪಟ್ಟಿ ತಯಾರಿಸಲಾಗಿದೆ.

ಇಲಾಖಾವಾರು ಸಭೆಗೆ ಸಚಿವರು, ಉನ್ನತಾಧಿಕಾರಿಗಳು ಹಾಜರಾಗುವಂತೆಯೂ ಮುಖ್ಯಮಂತ್ರಿಯವರ ಕಾರ್ಯಾಲಯದಿಂದ ಸೂಚನೆ ನೀಡ ಲಾಗಿದೆ. ವಿಧಾನಸಭೆ ಚುನಾವಣೆಗೆ ಮುನ್ನ ಹಾಲಿ ಆರ್ಥಿಕ ವರ್ಷದ ಬಜೆಟ್ ಮಂಡಿಸಲಾಗಿದೆ. ಅದನ್ನೇ ಮುಂದುವರಿಸಿಕೊಂಡು ಹೋಗಬೇಕು. ಹೊಸ ಸೇರ್ಪಡೆಯಿದ್ದರೆ ಪೂರಕ ಮುಂಗಡ ಪತ್ರವನ್ನು ಎಚ್‍ಡಿಕೆ ಮಂಡಿಸಬಹುದು ಎಂಬ ಸಲಹೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ್ದರು. ಇದು ಸಮ್ಮಿಶ್ರ ಸರಕಾರ ಪ್ರತ್ಯೇಕ ಬಜೆಟ್ ಮಂಡಿಸಬೇಕೊ, ಬೇಡವೊ ಎಂಬ ಚರ್ಚೆಯಾಗುವಂತೆ ಮಾಡಿತ್ತು.

ದೋಸ್ತಿಗಳ ನಡುವೆ ಬಿಕ್ಕಟ್ಟು ಸೃಷ್ಟಿಯ ಆತಂಕವನ್ನೂ ತಂದಿಟ್ಟಿತ್ತು. ಆದರೆ, ಹೊಸ ಬಜೆಟ್ ಮಂಡಿಸುವ ನಿಲುವು ಗಟ್ಟಿ ಮಾಡಿಕೊಂಡಿರುವ ಸಿಎಂ ಎಚ್‍ಡಿಕೆ ಜೂ.21ರಿಂದ 30ರವರೆಗೆ ಆಯವ್ಯಯ ಸಿದ್ಧತಾ ಸುತ್ತಿನ ಸಭೆಗೆ ಮುಹೂರ್ತ ನಿಗದಿಪಡಿಸಿದ್ದಾರೆ. ಈ ವೇಳೆ ಸಂಬಂಧಿಸಿದ ಸಚಿವರು, ಇಲಾಖೆಗಳ ಪ್ರಮುಖರು ತಪ್ಪದೇ ಹಾಜರಿರಬೇಕು ಎಂಬ ನಿರ್ದೇಶನ ಕೊಟ್ಟಿದ್ದಾರೆ. ವಿದ್ಯುತ್ ನಿಗಮದ ಸಭಾಂಗಣದಲ್ಲಿ ಈ ಸಭೆಗಳು ನಡೆಯಲಿವೆ. ಕಳೆದ ಫೆಬ್ರವರಿಯಲ್ಲಿ 2018-19ರ ಬಜೆಟ್ ಮಂಡಿಸಿದ್ದ ಅಂದಿನ ಸಿಎಂ ಸಿದ್ದರಾಮಯ್ಯ ಅವರು, ಜುಲೈ ಅಂತ್ಯದವರೆಗೆ ಲೇಖಾನುದಾನ ತೆಗೆದುಕೊಂಡಿದ್ದರು. ಹಾಗಾಗಿ ಸಿದ್ದ ರಾಮಯ್ಯ ಬಜೆಟ್ ಈ ಬಾರಿ 4 ತಿಂಗಳಿಗೆ ಸೀಮಿತಗೊಂಡಂತಾಗಲಿದೆ. ವಿತ್ತ ವರ್ಷದ ಬಾಕಿಯುಳಿದ 8 ತಿಂಗಳ ಅವಧಿಗೆ ಎಚ್.ಡಿ. ಕುಮಾರಸ್ವಾಮಿ ಬಜೆಟ್ ಜಾರಿಯಾಗಲಿದೆ.

ಬಜೆಟ್ ಸಭೆಗಳ ವೇಳಾಪಟ್ಟಿ: ಜೂ.21: ಆರೋಗ್ಯ, ವೈದ್ಯ ಶಿಕ್ಷಣ, ಜಲಸಂಪನ್ಮೂಲ, ಸಣ್ಣ ನೀರಾವರಿ, ಪ್ರಾಥಮಿಕ, ಪ್ರೌಢ ಶಿಕ್ಷಣ, ಕಂದಾಯ, ಕೌಶಲ್ಯಾಭಿವೃದ್ಧಿ, ಕಾರ್ಮಿಕ ಜೂ.22: ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಜೂ.23: ರೈತ ಸಂಘಟನೆ ಪ್ರತಿನಿಧಿಗಳು ಜೂ.25: ಕೃಷಿ, ಪಶು ಸಂಗೋಪನೆ, ಮೀನುಗಾರಿಕೆ, ತೋಟಗಾರಿಕೆ, ರೇಷ್ಮೆ, ಪ್ರವಾಸೋದ್ಯಮ, ಗೃಹ, ಬೆಂಗಳೂರು ಅಭಿವೃದ್ಧಿ, ಯುವ ಸಬಲೀಕರಣ ಮತ್ತು ಕ್ರೀಡೆ ಜೂ.26: ವಾಣಿಜ್ಯ, ಕೈಗಾರಿಕೆ, ಐಟಿ, ಬಿಟಿ, ವಿಜ್ಞಾನ ತಂತ್ರಜ್ಞಾನ, ಸಣ್ಣ ಕೈಗಾರಿಕೆ, ಸಹಕಾರ, ಗ್ರಾಮೀಣಾಭಿವೃದ್ಧಿ, ಕಾನೂನು, ಪೌರಾಡಳಿತ, ಬಂದರು, ಒಳನಾಡು, ಜಲಸಾರಿಗೆ ಜೂ.27: ಲೋಕೋಪಯೋಗಿ, ಸಾರಿಗೆ, ಇಂಧನ, ಉನ್ನತ ಶಿಕ್ಷಣ, ಮೂಲಸೌಕರ್ಯ, ಕೃಷಿ ಮಾರುಕಟ್ಟೆ, ಸಾರ್ವಜನಿಕ ಉದ್ದಿಮೆ, ನಗರಾಭಿವೃದ್ಧಿ, ವಸತಿ ಜೂ.28: ಗಣಿ , ಭೂವಿಜ್ಞಾನ, ಮುಜರಾಯಿ, ಯೋಜನೆ, ಕಾರ್ಯಕ್ರಮ ಅನುಷ್ಠಾನ, ವಾರ್ತಾ, ಜವಳಿ, ಆಹಾರ, ಅಲ್ಪಸಂಖ್ಯಾತರ ಕಲ್ಯಾಣ, ಹಜ್, ಅರಣ್ಯ, ಡಿಪಿಎಆರ್, ಇ-ಆಡಳಿತ ಜೂ.29: ವಾಣಿಜ್ಯ, ಸಾರಿಗೆ, ಅಬಕಾರಿ, ಭೂ ಮಾರುಕಟ್ಟೆ ಸಂಘ, ಸಂಸ್ಥೆಗಳು ಜೂ.30: ತೆರಿಗೆ ಸಂಬಂಧ ವಾಣಿ ಜ್ಯ, ಸಾರಿಗೆ, ಅಬಕಾರಿ, ನೋಂದಣಿ ಮತ್ತು ಮುದ್ರಾಂಕ, ಗಣಿ ಮತ್ತು ಭೂವಿಜ್ಞಾನ ಇಲಾಖೆಗಳು, ಸರಕಾರಿ ನೌಕರರರ ಸಂಘದ ಪ್ರತಿನಿಧಿಗಳು.

 

Translate »