ಕಬ್ಬಿನ ಬಾಕಿ ಹಣ, ವೈಜ್ಞಾನಿಕ ಬೆಲೆಗೆ ಬೆಳೆಗಾರರ ಒತ್ತಾಯ
ಮೈಸೂರು

ಕಬ್ಬಿನ ಬಾಕಿ ಹಣ, ವೈಜ್ಞಾನಿಕ ಬೆಲೆಗೆ ಬೆಳೆಗಾರರ ಒತ್ತಾಯ

July 24, 2018

ಮೈಸೂರು: ಕಬ್ಬಿನ ಬಾಕಿ ಹಣ ನೀಡಬೇಕು. ಪ್ರಸಕ್ತ ಸಾಲಿನ ಕಬ್ಬು ಬೆಳೆಗೆ ಸೂಕ್ತ ವೈಜ್ಞಾನಿಕ ಬೆಲೆ ನಿಗದಿಗೊಳಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಹೋರಾಟ ಹಿತರಕ್ಷಣಾ ಸಮಿತಿ ಸರ್ಕಾರವನ್ನು ಆಗ್ರಹಿಸಿದೆ.

ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹಳೆ ಮಿರ್ಲೆ ಸುಜಯ್ ಗೌಡ ಸೋಮವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ಕಬ್ಬಿಗೆ ನ್ಯಾಯಯುತ ಬೆಲೆ ನೀಡುವಲ್ಲಿ ವಿಫಲವಾಗಿದೆ. ಎಫ್‍ಆರ್‍ಪಿಗೆ ಕೊಡುವುದಾಗಿ ಹೇಳಿದ್ದು, ಕೇವಲ 200 ರೂ. ಮಾತ್ರ ಹೆಚ್ಚಿಸಿರುವುದು ಅವೈಜ್ಞಾನಿಕವಾಗಿದೆ ಎಂದು ದೂರಿದರು.
ಪ್ರತಿ ವರ್ಷ ಏರುತ್ತಿರುವ ಶೇ.25ರಷ್ಟು ವೆಚ್ಚವನ್ನು ಸರಿದೂಗಿಸಲು ರೈತರು ಸೆಣಸುತ್ತಿದ್ದು, ಸರ್ಕಾರ ಇವೆಲ್ಲವನ್ನೂ ಪರಿಗಣನೆಗೆ ತೆಗೆದುಕೊಳ್ಳದೇ ಮನಸೋಇಚ್ಛೆ ದರ ನಿಗದಿಗೊಳಿಸುತ್ತಿದೆ ಎಂದು ಆರೋಪಿಸಿದರು.

ಸರ್ಕಾರ ಕೂಡಲೇ ಕಬ್ಬಿಗೆ ರೂ. 3600 ಬೆಂಬಲ ಬೆಲೆ ಘೋಷಿಸಬೇಕು. ಎಪಿಎಂಸಿಯಲ್ಲಿ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಬೇಕು. ಡಾ.ಸ್ವಾಮಿನಾಥನ್ ವರದಿಯನ್ನು ಶೀಘ್ರ ಅನುಷ್ಟಾನಗೊಳಿಸಬೇಕು. ಉತ್ತಮ ಮಳೆಯಿಂದ ಭರ್ತಿಯಾಗಿರುವ ರಾಜ್ಯದ ಜಲಾಶಯಗಳಿಂದ ವಿಳಂಬ ಮಾಡದೆ ಕೂಡಲೇ ಕಾವೇರಿ ಜಲಾನಯನ ಪ್ರದೇಶದ ಕೆರೆ ಕಟ್ಟೆಗಳಿಗೆ ನೀರು ತುಂಬಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ಜಿ.ಮಾರಳ್ಳಿ ಮಂಜು, ಮುಖಂಡರಾದ ಎಂ.ಎಸ್.ರಾಜೇಂದ್ರ, ಮಧುಸೂದನ್ ದೊಡ್ಡಕೊಪ್ಪಲು ಉಪಸ್ಥಿತರಿದ್ದರು.

Translate »