ಗ್ರಾಪಂ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತರಾದ ಲತಾ ರಮೇಶ್ ಆಯ್ಕೆ
ಹಾಸನ

ಗ್ರಾಪಂ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತರಾದ ಲತಾ ರಮೇಶ್ ಆಯ್ಕೆ

November 15, 2018

ಶ್ರವಣಬೆಳಗೊಳ: ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು ಮೈತ್ರಿ ಸರ್ಕಾರ ನಡೆಸು ತ್ತಿದ್ದರೂ, ಸ್ಥಳೀಯವಾಗಿ ಒಂದಾಗದ ಕಾರ್ಯ ಕರ್ತರು ಕಾಂಗ್ರೆಸ್ ಮತ್ತು ಜೆಡಿಎಸ್ ಬದ್ದ ವೈರಿಗಳೆಂದು ಸಾಬೀತು ಮಾಡಿದ್ದಾರೆ.
ಕುತೂಹಲ ಕೆರಳಿಸಿದ್ದ ಶ್ರವಣಬೆಳಗೊಳ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಚುನಾವಣೆ ಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆಯ್ಕೆಯಾಗುವ ಮೂಲಕ ದಶಕಗಳ ನಂತರ ಈ ಗ್ರಾಮ ಪಂಚಾಯ್ತಿ ಕಾಂಗ್ರೆಸ್ ಕೈವಶವಾಗಿದ್ದು, ಅಡ್ಡ ಮತದಾನದಿಂದ ಜೆಡಿಎಸ್‍ಗೆ ಮುಖಭಂಗವಾಗಿದೆ.

17 ಸದಸ್ಯ ಬಲ ಹೊಂದಿರುವ ಈ ಗ್ರಾಮ ಪಂಚಾಯ್ತಿಗೆ ಜೆಡಿಎಸ್ ಬೆಂಬ ಲಿತ 9 ಹಾಗೂ ಕಾಂಗ್ರೆಸ್ ಬೆಂಬಲಿತ 8 ಸದಸ್ಯರು ಆಯ್ಕೆಯಾಗಿದ್ದರು. ಈ ಹಿಂದೆ ಅಧ್ಯಕ್ಷರಾಗಿದ್ದ ಜೆಡಿಎಸ್ ಬೆಂಬಲಿತ ಹೇಮಾ ಪ್ರಭಾಕರ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು.

ಜೆಡಿಎಸ್ ಬೆಂಬಲಿತ 9 ಸದಸ್ಯರನ್ನೊಳ ಗೊಂಡಿದ್ದರೂ ಅಡ್ಡ ಮತದಾನ ಮಾಡುವ ಮೂಲಕ ಜೆಡಿಎಸ್‍ಗೆ ಶಾಕ್ ನೀಡಿದ ಸದಸ್ಯರು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಸ್.ಕೆ.ಲತಾ ರಮೇಶ್ ಅವರಿಗೆ 10 ಮತ ಗಳನ್ನು ನೀಡಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದು, ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಸರಸ್ವತಿ ಮಹೇಶ್ 7 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.

ಬೆಳಗ್ಗೆ 11 ಘಂಟೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿತು. ಜೆಡಿಎಸ್ ಬೆಂಬಲಿತ ಸರಸ್ವತಿ ಮಹೇಶ್ ಹಾಗೂ ಕಾಂಗ್ರೇಸ್ ಬೆಂಬಲಿತ ಲತಾ ರಮೇಶ್ ನಾಮಪತ್ರ ಸಲ್ಲಿಸಿದ್ದರು. ಮಧ್ಯಾಹ್ನ 12-30 ಘಂಟೆಗೆ ಮತದಾನ ಪ್ರಕ್ರಿಯೆ ಆರಂಭ ಗೊಂಡು, 1.30 ಕ್ಕೆ ಮತ ಎಣಿಕೆ ಪೂರ್ಣ ಗೊಂಡಿತು. ಸರಸ್ವತಿ ಮಹೇಶ್ 7 ಹಾಗೂ ಎಸ್.ಕೆ.ಲತಾ ರಮೇಶ್ 10 ಮತಗಳನ್ನು ಪಡೆದಿದ್ದು, ಎಸ್.ಕೆ.ಲತಾ ರಮೇಶ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ನಂದಿನಿ ಘೋಷಣೆ ಮಾಡಿದರು.

ನಂತರ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಕೆ.ಲತಾ ರಮೇಶ್ ಮಾತನಾಡಿ, ಮತ ನೀಡಿ ಸಹಕರಿಸಿದ ಎಲ್ಲಾ ಸದಸ್ಯರಿಗೂ ಧನ್ಯವಾದ ತಿಳಿಸಿ ದರು. ಮಹಾಮಸ್ತಕಾಭೀಷೇಕ ಸಂದ ರ್ಭದಲ್ಲಿ ಆರಂಭವಾದ ಹಲವಾರು ಕಾಮಗಾರಿಗಳು ನೆನೆಗುದಿಗೆ ಬಿದ್ದಿದ್ದು, ಸ್ವಚ್ಚತೆ, ಕುಡಿಯುವ ನೀರು, ಬೀದಿ ದೀಪ ಹಾಗೂ ಮೂಲಭೂತ ಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಗ್ರಾಮ ಪಂಚಾಯ್ತಿ ಸದಸ್ಯ ಎನ್. ಆರ್.ವಾಸು ಮಾತನಾಡಿ, ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ವಿರುವುದರಿಂದ ಪಕ್ಷದ ಮುಖಂಡರು ಮಾತುಕತೆಗೆ ಮುಂದಾಗಬಹುದು ಎಂದು ಭಾವಿಸಿದ್ದೆವು. ಆದರೆ ಯಾರೊ ಬ್ಬರೂ ನಮ್ಮ ಅಭಿಪ್ರಾಯ ಕೇಳದ ಹಿನ್ನೆಲೆಯಲ್ಲಿ ಚುವಾವಣೆಯಲ್ಲಿ ಸ್ಪರ್ಧೆ ಮಾಡಬೇಕಾಯಿತು ಎಂದು ತಿಳಿಸಿದರು.

ಸದಸ್ಯ ಎಸ್.ಎಂ.ಜನಾರ್ಧನ್ ಮಾತನಾಡಿ, ಕಾಂಗ್ರೆಸ್ ನಾಯಕರ ದ್ವಂದ್ವ ನೀತಿಯ ನಡುವೆ ಕಾರ್ಯಕರ್ತರ ಪಕ್ಷನಿಷ್ಠೆಯಿಂದ ಈ ಗೆಲುವು ಲಭಿಸಿದೆ ಎಂದು ತಿಳಿಸಿದರು. ನಂತರ ಕಾಂಗ್ರೆಸ್ ಕಾರ್ಯಕರ್ತರು ನೂತನವಾಗಿ ಆಯ್ಕೆ ಯಾದ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿ, ಸಿಹಿ ವಿನಿಮಯ ಮಾಡಿಕೊಳ್ಳುವ ಮೂಲಕ ಸಂಭ್ರಮಾಚರಣೆ ನಡೆಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎ.ಬಿ.ನಂಜುಂಡೇಗೌಡ, ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕ ಎಸ್.ಕೆ.ರಾಘವೇಂದ್ರ, ಮುಖಂಡರಾದ ಎಸ್.ಆರ್.ರಮೇಶ್, ಕಬ್ಬಾಳು ಸುರೇಶ್, ಪೂಮಡಿಹಳ್ಳಿ ನಿಂಗೇಗೌಡ, ನಾಗರಾಜು, ಬಸವರಾಜ್ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರು ಉಪಸ್ಥಿತರಿದ್ದರು.

Translate »