ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಮತ್ತೆ ಕಾಂಗ್ರೆಸ್ ಸಚಿವರು, ಶಾಸಕರು ಕಿಡಿಕಾರಲಾಂಭಿಸಿದ್ದಾರೆ. ವಸತಿ ಸಚಿವ ಎಂ.ಟಿ.ಬಿ.ನಾಗರಾಜ್ ತಮ್ಮದೇ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದಷ್ಟೂ ಬೇಗ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ. ಹೊಸಕೋಟೆಯಲ್ಲಿ ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಸಚಿವರು, ಮೈತ್ರಿ ಸರಕಾರದಲ್ಲಿ ಅಭಿವೃದ್ಧಿ ಕಾರ್ಯಗಳೇ ನಡೆಯುತ್ತಿಲ್ಲ. ನಮ್ಮ ವೇಗಕ್ಕೆ ಪೂರಕ ಸಹಕಾರ ಸಿಗುತ್ತಿಲ್ಲ. ಬಹಳ ಅಡೆತಡೆಗಳಿವೆ. ಸಂಪುಟ ಸಹೋದ್ಯೋಗಿಗಳಲ್ಲಿ ಬಹಳಷ್ಟು ಮಂದಿ ಅತೃಪ್ತಿಯಿಂದಿದ್ದಾರೆ. ಸಚಿವನಾ ದರೂ ನನಗೆ ಪೂರ್ಣ ಅಧಿಕಾರವೇ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕುಮಾರಸ್ವಾಮಿ ಅವರು ಮೈತ್ರಿ ಧರ್ಮವನ್ನೇ ಪಾಲಿಸುತ್ತಿಲ್ಲ. ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಎರಡೂ ಪಕ್ಷಗಳ ಸಚಿವರು, ಶಾಸಕರೆಲ್ಲರಿಗೂ ಸಮಾನ ವಾಗಿ ಅನುದಾನ ಹಂಚಿಕೆಯಾಗಬೇಕು. ಆಗ ಕುಮಾರಸ್ವಾಮಿ ಅವರೇ 5 ವರ್ಷಗಳೂ ಮುಖ್ಯಮಂತ್ರಿ ಆಗಿರಲಿ ಎಂದು ಎಂಟಿಬಿ ನಾಗರಾಜ್ ನುಡಿದರು.