ಮೈಸೂರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡಿಗೆ ಕೆಆರ್ಎಸ್ ಜಲಾಶಯ ದಿಂದ 9.19 ಟಿಎಂಸಿ ನೀರು ಬಿಡಲು ಆದೇಶಿರುವುದನ್ನು ಖಂಡಿಸಿ ಮೈಸೂರಿ ನಲ್ಲಿ ಬುಧವಾರ ರಾಜ್ಯ ರೈತಸಂಘ ಹಾಗೂ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ರೈತಸಂಘ ಹಾಗೂ ಹಸಿರು ಸೇನೆ: ಮೈಸೂರಿನ ನ್ಯಾಯಾಲಯದ ಮುಂದೆ ಇರುವ ಮಹಾತ್ಮ ಗಾಂಧಿ ಪುತ್ಥಳಿ ಬಳಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಾವೇರಿ ನೀರು ನಿರ್ವಹಣಾ ಮಂಡಳಿ ತೀರ್ಪನ್ನು ವಿರೋಧಿಸಿದರು. ಕಾವೇರಿ ಕಣಿ ವೆಯ ಕೆಆರ್ಎಸ್, ಕಬಿನಿ, ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳಲ್ಲಿ ಸದ್ಯ 14 ಟಿಎಂಸಿ ಮಾತ್ರ ನೀರಿದೆ. ಮುಂದಿನ ದಿನಗಳಲ್ಲಿ ಸರಿಯಾಗಿ ಮಳೆಯಾಗದಿ ದ್ದರೆ ಕುಡಿಯುವ ನೀರಿಗೂ ಸಮಸ್ಯೆಯಾಗು ತ್ತದೆ. ಅಣೆಕಟ್ಟೆಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗದಿದ್ದರೂ ತಮಿಳುನಾಡಿಗೆ ನೀರು ಬಿಡಬೇಕೆಂದು ನೀಡಿರುವ ಆದೇಶ ಪೂರ್ವಾಗ್ರಹ ಪೀಡಿತವಾಗಿದೆ. ವಾಸ್ತವತೆ ಅರಿಯದೆ ಏಕಪಕ್ಷೀಯವಾಗಿ ಆದೇಶ ನೀಡಬಾರದು. ಪ್ರಾಧಿಕಾರ ನೀಡಿರುವ ಆದೇಶವನ್ನು ರಾಜ್ಯ ಸರ್ಕಾರ ಧಿಕ್ಕರಿಸಬೇಕು. ತಮಿಳುನಾಡಿಗೆ ನೀರು ಬಿಡಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕಾವೇರಿ ನೀರು ಸಮಸ್ಯೆ ಬಗೆಹರಿಸಲು ಪ್ರಾಧಿಕಾರವು ಮೇಕೆದಾಟು ಯೋಜನೆಗೆ ಕೂಡಲೇ ಅನುಮತಿ ನೀಡಬೇಕು. ಇಲ್ಲದಿ ದ್ದರೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಜಟಿಲಗೊಳ್ಳುತ್ತದೆ. ಆದರೆ ರಾಜ ಕೀಯ ಉದ್ದೇಶಕ್ಕಾಗಿ ತಮಿಳು ನಾಡು ಆಕ್ಷೇಪ ವ್ಯಕ್ತಪಡಿಸುತ್ತಲೇ ಇದೆ. ಅಲ್ಲದೆ ಕೇಂದ್ರ ಸರ್ಕಾರವೂ ರಾಜ್ಯದ ಹಿತಾಸಕ್ತಿ ಕಾಪಾಡಲು ಮಲತಾಯಿ ಧೋರಣೆ ಅನುಸರಿಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನೀರು ಬಿಡದೆ ರೈತರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಧ್ಯಕ್ಷ ಹೊಸೂರು ಕುಮಾರ, ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಪದಾಧಿಕಾರಿಗಳಾದ ಅಶ್ವತ್ನಾರಾಯಣ ರಾಜೇ ಅರಸ್, ಮಹದೇವ ನಾಯಕ, ಪಿ.ಮರಂಕಯ್ಯ, ಪುನೀತ್, ದೇವಮ್ಮ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಮೈಸೂರು ಕನ್ನಡ ವೇದಿಕೆ: ಮೈಸೂರಿನ ಕಾಡಾ ಕಚೇರಿ ಮುಂದೆ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶ ಹಾಗೂ ಕಾವೇರಿ ಸಮಸ್ಯೆಗೆ ಕಿಡಿ ಹಚ್ಚುತ್ತಿರುವ ನಟ ಸೂಪರ್ ಸ್ಟಾರ್ ರಜನಿಕಾಂತ್ ಹೇಳಿಕೆ ವಿರೋಧಿಸಿ ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ಬಿರು ಬೇಸಿಗೆಯಿಂದ ಕುಡಿ ಯುವ ನೀರಿಗೂ ತೀವ್ರ ಸಮಸ್ಯೆ ಉಂಟಾ ಗಿದೆ. ಕೆರೆ-ಕಟ್ಟೆಗಳು ಬತ್ತಿ ಹೋಗಿದ್ದು, ಜಲಾ ಶಯಗಳಲ್ಲಿನ ನೀರಿನ ಪ್ರಮಾಣ ಕುಸಿದಿದೆ. ಆದರೂ ರಾಜ್ಯದ ಪರಿಸ್ಥಿತಿಯನ್ನು ಅವ ಲೋಕಿಸದೆ ತಮಿಳುನಾಡಿಗೆ ಕೆಆರ್ಎಸ್ ಜಲಾಶಯದಿಂದ 9.19 ಟಿಎಂಸಿ ನೀರು ಬಿಡ ಬೇಕೆಂದು ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವುದು ಹಲವು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ. ಈ ನಡುವೆ ತನ್ನ ಸ್ವಾರ್ಥಕ್ಕಾಗಿ ರಾಜಕೀಯ ಲಾಭ ಮಾಡಿ ಕೊಳ್ಳುವುದಕ್ಕಾಗಿ ಚಿತ್ರ ನಟ ರಜನಿಕಾಂತ್ ಕಾವೇರಿ ನೀರು ತಮಿಳುನಾಡಿಗೆ ದೊರಕಿಸಿ ಕೊಡುವುದಕ್ಕೆ ಪ್ರಥಮ ಆಧ್ಯತೆ ಎಂದು ಹೇಳುವ ಮೂಲಕ ಎರಡೂ ಭಾಷಿಗರ ನಡುವೆ ಕಿಡಿ ಹಚ್ಚುತ್ತಿದ್ದಾರೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ, ಪದಾಧಿಕಾರಿಗಳಾದ ನಾಲಾ ಬೀದಿ ರವಿ, ಬೋಗಾದಿ ಸಿದ್ದೇಗೌಡ, ಗೋಪಿ ಇತರರು ಪಾಲ್ಗೊಂಡಿದ್ದರು.