ಉಗ್ರರಿಗೆ ತಕ್ಕ ಉತ್ತರ ನೀಡುವುದು ನಿಶ್ಚಿತ
ಮೈಸೂರು

ಉಗ್ರರಿಗೆ ತಕ್ಕ ಉತ್ತರ ನೀಡುವುದು ನಿಶ್ಚಿತ

February 18, 2019

ಬೆಂಗಳೂರು: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಕಾರಣರಾದವ ರಿಗೆ ತಕ್ಕ ಉತ್ತರ ನೀಡುವುದು ನಿಶ್ಚಿತ. ನಾವು ತಾಳ್ಮೆಯಿಂದ ಕಾಯೋಣ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಪುಲ್ವಾಮಾದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರ ಸೇವೆಯನ್ನು ಸ್ಮರಿಸಿ ಯೋಧ ರಿಗೆ ಶ್ರದ್ಧಾಂಜಲಿ ಸಲ್ಲಿಸಲು ಇಂದು ಬೆಂಗಳೂರಿನಲ್ಲಿ ಬೃಹತ್ ಸಭೆ ಆಯೋ ಜನೆಗೊಂಡಿತ್ತು.

ರಾಜ್ಯ ಬಿಜೆಪಿ ಅಧ್ಯಕ್ಷರೂ ಆದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಈ ಸಂದರ್ಭದಲ್ಲಿ ಉಗ್ರವಾದ ಖಂಡಿಸಿ ನಡೆದ ಧರಣಿಯ ನೇತೃತ್ವ ವಹಿಸಿದ್ದರು.

ಸಭೆಯಲ್ಲಿ ಸಂಸದರಾದ ಪಿ.ಸಿ.ಮೋಹನ್, ಶೋಭಾ ಕರಂದ್ಲಾಜೆ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಅರವಿಂದ್ ಲಿಂಬಾವಳಿ, ಎನ್.ರವಿ ಕುಮಾರ್, ಶಾಸಕರಾದ ಎಂ.ಕೃಷ್ಣಪ್ಪ, ವೈ.ಎ.ನಾರಾಯಣ ಸ್ವಾಮಿ, ಲೆಹರ್ ಸಿಂಗ್, ಮಾಜಿ ಶಾಸಕರಾದ ಮುನಿರಾಜು, ಮುಖಂಡರಾದ ಚಿ.ನಾ.ರಾಮು, ಅಬ್ದುಲ್ ಅಜೀಂ, ಪಿ.ಎನ್.ಸದಾಶಿವ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಕಾರಣರಾದವರಿಗೆ ತಕ್ಕ ಉತ್ತರ ನೀಡುವುದು ನಿಶ್ಚಿತ. ನಾವು ತಾಳ್ಮೆಯಿಂದ ಕಾಯೋಣ. ಪಾಕ್ ವಿರುದ್ಧ ಎಲ್ಲಾ ರಾಷ್ಟ್ರಗಳು ಆರ್ಥಿಕ ದಿಗ್ಬಂಧನ ವಿಧಿಸಲು ಮುಂದಾಗಿರುವುದು ಸ್ವಾಗತಾರ್ಹ. ಹುತಾತ್ಮ ಯೋಧ ಗುರು ಅವರ ಪತ್ನಿ ನಮ್ಮ ಯುವಕರು ಹೇಗೆ ದೇಶದ ಬಗ್ಗೆ ಚಿಂತನೆ ನಡೆಸಬೇಕು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.

ಜಗತ್ತಿನ ಶಕ್ತಿಗಳ ಬೆಂಬಲದಿಂದ ಪಾಕಿಸ್ತಾನದ ಹುಟ್ಟಡಗಿಸಲು ಪ್ರಧಾನಿ ಮೋದಿಯವರು ಮುಂದಾಗಿದ್ದಾರೆ. ಶೀಘ್ರದಲ್ಲೇ ಇದರಲ್ಲಿ ಯಶಸ್ಸು ಸಿಗುತ್ತದೆ ಎನ್ನುವ ನಂಬಿಕೆ ನಮಗಿದೆ. ಹುತಾತ್ಮರ ಆತ್ಮಕ್ಕೆ ಶಾಂತಿ ಕೋರಲು ದೇಶಾದ್ಯಂತ ಇಂತಹ ಸಭೆಗಳು ನಡೆಯುತ್ತಿವೆ ಎಂದು ಯಡಿಯೂರಪ್ಪ ಹೇಳಿದರು.

ಅರವಿಂದ ಲಿಂಬಾವಳಿ ಮತ್ತು ಶ್ರೀ ಎನ್. ರವಿಕುಮಾರ್ ಅವರು ಮಾತನಾಡಿ, ಪಾಕಿಸ್ತಾನವು ಎಂದಿನ ತನ್ನ ಚಾಳಿಯನ್ನು ಮುಂದುವರಿಸಿದೆ, ಇದಕ್ಕೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಅಬ್ದುಲ್ ಅಜೀಂ ಮಾತನಾಡಿ, ನಮ್ಮ ದೇಶಕ್ಕೆ ಇಂದು ಪ್ರಬಲ ನಾಯಕತ್ವ ಬೇಕು.ವಿಶ್ವದ ಭೂಪಟದಲ್ಲಿ ಪಾಕಿಸ್ತಾನವನ್ನು ನಿರ್ನಾಮ ಮಾಡುವ ತೀರ್ಮಾನ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು. ಸಂಸದೆ ಶೋಭಾ ಕರಂದ್ಲಾಜೆ ಅವರು ಮಾತನಾಡಿ, ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳಲು ಸುಮಾರು 50 ವರ್ಷ ದೇಶವನ್ನಾಳಿದ ಕಾಂಗ್ರೆಸ್ ವಿಫಲವಾಗಿದೆ ಎಂದು ಆರೋಪಿಸಿದರು.

Translate »