ಮೈತ್ರಿ ಸರ್ಕಾರಕ್ಕೆ ಸದನದಲ್ಲಿ ಸೆಡ್ಡು ಹೊಡೆಯಲು ಬಿಜೆಪಿ ನಿರ್ಧಾರ
ಮೈಸೂರು

ಮೈತ್ರಿ ಸರ್ಕಾರಕ್ಕೆ ಸದನದಲ್ಲಿ ಸೆಡ್ಡು ಹೊಡೆಯಲು ಬಿಜೆಪಿ ನಿರ್ಧಾರ

July 3, 2018
  • ಬಿಜೆಪಿ ಶಾಸಕರ ಸಂಪರ್ಕದಲ್ಲಿರುವ ಕಾಂಗ್ರೆಸ್
  • ಎಚ್ಚರದಿಂದಿರಲು ತಮ್ಮವರಿಗೆ ಬಿಎಸ್‍ವೈ ಸೂಚನೆ

ಬೆಂಗಳೂರು: ಅಧಿವೇಶನ ಆರಂಭಗೊಂಡ ಹಿನ್ನೆಲೆಯಲ್ಲಿ ಬಿಎಸ್ ಯಡಿಯೂರಪ್ಪನವರು ಸಮ್ಮಿಶ್ರ ಸರ್ಕಾರದ ವಿರುದ್ಧ ಪಕ್ಷದ ಹೋರಾಟ ಯಾವ ರೀತಿ ಇರಬೇಕು ಎನ್ನುವುದನ್ನು ಶಾಸಕರಿಗೆ ಹೇಳಿದ್ದಾರೆ.

ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಬಹುತೇಕ ಶಾಸಕರು ಭಾಗಿಯಾಗಿದ್ದರು. ಮಂಗಳವಾರ ದಿಂದ ಸದನದಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಹಿನ್ನೆಲೆ ಯಲ್ಲಿ ಮೈತ್ರಿ ಸರ್ಕಾರದ ವಿರುದ್ಧ ಯಾವೆಲ್ಲಾ ವಿಚಾರಗಳನ್ನು ಪ್ರಸ್ತಾಪಿಸಬೇಕೆಂಬ ಮಹತ್ವದ ಚರ್ಚೆ ನಡೆಸಲಾಯಿತು ಅಲ್ಲದೇ ನೂತನ ಶಾಸಕರಿಗೆ ಸದನದಲ್ಲಿ ಪಕ್ಷವನ್ನು ಹೇಗೆ ಸಮರ್ಥಿಸಿಕೊಳ್ಳಬೇಕು ಎಂಬುದರ ಬಗ್ಗೆ ಬಿಎಸ್‍ವೈ ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿದೆ.

ಕಾಂಗ್ರೆಸ್‍ನಿಂದ ಬಿಜೆಪಿ ಶಾಸಕರ ಸಂಪರ್ಕದ ಬಗ್ಗೆ ಚರ್ಚೆ ನಡೆಸಿದರು. ನಮ್ಮ ಐದಾರು ಶಾಸಕರನ್ನ ಕಾಂಗ್ರೆಸ್‍ನವರು ಸಂಪರ್ಕ ಮಾಡಿರೋದು ನನಗೆ ಗೊತ್ತಾಗಿದೆ. ನಮ್ಮ ಶಾಸಕರು ಎಲ್ಲೂ ಹೋಗಲ್ಲ ಅನ್ನೋದು ಗೊತ್ತಿದೆ. ಆದರೂ ನಾವು ಹುಷಾರಾಗಿ ರೋದು ಒಳ್ಳೆಯದು ಎಂದು ಶಾಸಕರಿಗೆ ಬಿಎಸ್‍ವೈ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ನೂತನ ಶಾಸಕರಿಗೆ ಕ್ಲಾಸ್ ತೆಗೆದುಕೊಂಡ ಯಡಿಯೂರಪ್ಪ, ಹೆಚ್ಚು ಕಲಾಪದಲ್ಲಿ ಪಾಲ್ಗೊಳ್ಳಿ, ಸಾಧ್ಯವಾದಷ್ಟು ಸದನದಲ್ಲಿ ಕುಳಿತುಕೊಳ್ಳುವುದು ಅಭ್ಯಾಸ ಮಾಡಿಕೊಳ್ಳಿ. ರಮೇಶ್ ಕುಮಾರ್ ಸ್ಪೀಕರ್ ಆಗಿರುವ ಕಾರಣ ಹೊಸಬರಿಗೆ ಅವಕಾಶ ಕೊಡುತ್ತಾರೆ. ಸದನಕ್ಕೆ ಬರುವಾಗ ವಿಷಯದ ಬಗ್ಗೆ ಅಧ್ಯಯನ ಮಾಡಿ ಕೊಂಡು ಬನ್ನಿ. ಕೇವಲ ನಿಮ್ಮ ನಿಮ್ಮ ಕ್ಷೇತ್ರದ ಸಮಸ್ಯೆಗಳಿಗೆ ಮಾತ್ರ ಸೀಮಿತವಾಗದೇ, ನಿಮ್ಮ ಕ್ಷೇತ್ರದಾಚೆಗೂ ಅಧ್ಯಯನ ಮಾಡಿಕೊಂಡು ಸದನದಲ್ಲಿ ಮಾತನಾಡಿ ಎಂದು ಕಿವಿಮಾತು ಹೇಳಿದರು.

ಸಭೆ ಬಳಿಕ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯ ಸರ್ಕಾರ ಬಜೆಟ್ ಮಂಡನೆ ಮಾಡಲಿ. ಬಜೆಟ್‍ನಲ್ಲಿ ಘೋಷಣೆ ಯಾಗುವ ಅಂಶಗಳನ್ನು ಗಮನಿಸಿ ಹೋರಾಟ ನಿರ್ಧಾರದ ಬಗ್ಗೆ ಚರ್ಚೆಯಾಗಲಿ. ನಮ್ಮ ಪಾತ್ರವನ್ನೂ ಸದನದಲ್ಲಿ ಡಿ.ಕೆ.ಶಿವಕುಮಾರ್ ನಿರ್ವಹಿಸುತ್ತಿದ್ದಾರೆ ಎಂದು ಜಲಸಂಪನ್ಮೂಲ ಸಚಿವರಿಗೆ ಟಾಂಗ್ ನೀಡಿದರು. ಅವರು ಹೇಳಿದಂತೆ ನಾವಿನ್ನೂ ಟೇಕಾಫ್ ಆಗಿಲ್ಲ. ಆದರೆ ನಾವು ಟೇಕಾಫ್ ಆದ ದಿನ ಅವರು ರೂಲಿಂಗ್ ಪಾರ್ಟಿಯಲ್ಲಿ ಉಳಿಯಲ್ಲ ಎಂದು ವ್ಯಂಗ್ಯವಾಡಿದರು.

Translate »