ಬಿಜೆಪಿ ಫ್ಯೂಸ್ ಕಿತ್ತಾಕಿದ್ದೇನೆ…!
ಮೈಸೂರು

ಬಿಜೆಪಿ ಫ್ಯೂಸ್ ಕಿತ್ತಾಕಿದ್ದೇನೆ…!

February 5, 2019

ನಮ್ಮ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ನಾಯಕರಿಗೆ ಛಾನ್ಸೇ ಇಲ್ಲ: ಸಿಎಂ ಕುಮಾರಸ್ವಾಮಿ ನಿಶ್ಚಿಂತೆ ಮಾತು

ಬೆಂಗಳೂರು: ಭಾರತೀಯ ಜನತಾ ಪಕ್ಷ ಏನೇ ಪ್ರಯತ್ನ ಮಾಡಿದರೂ, ಸರ್ಕಾರ ಅಸ್ಥಿರಗೊಳಿಸಲು ಸಾಧ್ಯವಿಲ್ಲ. ಈಗಾಗಲೇ ಅವರ `ಫ್ಯೂಸ್’ ಕಿತ್ತು ಹಾಕಿದ್ದೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ.

ಬಜೆಟ್ ಅಧಿವೇಶನಕ್ಕೂ ಮುನ್ನ ಪತ್ರಿಕಾ ಸಂಪಾದಕರ ಜೊತೆ ಅನೌಪಚಾರಿಕವಾಗಿ ಮಾತನಾಡುವ ಸಂದರ್ಭದಲ್ಲಿ ಪ್ರತಿ ಬಾರಿ ಸರ್ಕಾರ ಉರುಳಿಸುವ ಪ್ರಯತ್ನದಲ್ಲಿದ್ದಾಗ ಬಿಜೆಪಿ ಮುಖಂಡರು ಮತ್ತು ಶಾಸಕರೇ ನನ್ನ ನೆರವಿಗೆ ನಿಂತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಎಷ್ಟೇ ಪ್ರಯತ್ನ ಮಾಡಿದರೂ, ಅವರ ಕನಸು ಈಡೇರುವುದಿಲ್ಲ. ಈಗಾಗಲೇ ಫ್ಯೂಸ್ ಕಿತ್ತು ಹಾಕಿ, ನಾನು ಅಧಿಕಾರಾವಧಿ ಪೂರ್ಣಗೊಳಿಸಲು ಪರ್ಯಾಯ ವ್ಯವಸ್ಥೆ ಮಾಡಿದ್ದೇನೆ.

ಬಿಜೆಪಿಯ ಕೆಲವು ಮುಖಂಡರು ಹೇಳುವಂತೆ ಬಜೆಟ್ ಮಂಡನೆಗೂ ಅವಕಾಶವಿಲ್ಲ ಎನ್ನುವವರಿಗೆ ಮುಂದೆ ತಿಳಿಯು ತ್ತದೆ. ಐದು ವರ್ಷಗಳ ಕಾಲ ಪೂರ್ಣ ಅಧಿಕಾರ ಮಾಡಿ ತೋರಿಸುತ್ತೇನೆ. ನಾನು ಯಾವುದೇ ಪೊಲಿಟಿಕಲ್ ಮ್ಯಾನೇಜ್ ಮೆಂಟ್ ಮಾಡುತ್ತಿಲ್ಲ. ಸಮ್ಮಿಶ್ರ ಸರ್ಕಾರ ನಡೆಸುವ ಅನು ಭವ ನನಗೆ ಗೊತ್ತಿದೆ. ಇದರಿಂದ ನಾನು ಹೇಗೆ ಅಧಿಕಾರ ಉಳಿಸಿ ಕೊಳ್ಳಬೇಕೆನ್ನುವುದು ತಿಳಿದಿದೆ. ಬಿಜೆಪಿಯಲ್ಲಿ ನನ್ನ ಬಗ್ಗೆ ಹಲವರಿಗೆ ಸಾಫ್ಟ್ ಕಾರ್ನರ್ ಇದೆ.

ನಿಮ್ಮ ಪಾಡಿಗೆ ನೀವು ಸರ್ಕಾರ ನಡೆಸಿಕೊಂಡು ಹೋಗಿ, ನಾವು ನಿಮ್ಮ ಬೆಂಬಲಕ್ಕೆ ಇದ್ದೇವೆ ಎಂದು ಹೇಳಿದ್ದಾರೆ. ಆ ಪಕ್ಷದ ಮುಖಂಡರು ಮತ್ತು ಶಾಸಕರು ನಿರಂತರವಾಗಿ ನನ್ನ ಸಂಪರ್ಕದಲ್ಲಿ ರುವುದರಿಂದಲೇ ಯಡಿಯೂ ರಪ್ಪ ಎಷ್ಟು ಬಾರಿ ಸರ್ಕಾರ ಅಭದ್ರಗೊಳಿಸಲು ನಡೆಸಿದ ಪ್ರಯತ್ನ ಕೈಗೂಡಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಪಕ್ಷದ ಎಲ್ಲಾ ಎಂಎಲ್‍ಎಗಳು ತಮ್ಮ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಯಾರಿಗೂ ಅತೃಪ್ತಿಯಿಲ್ಲ. ಎಲ್ಲರನ್ನೂ ನಾನು ಮ್ಯಾನೇಜ್ ಮಾಡುತ್ತಿ ದ್ದೇನೆ. ಮಾಧ್ಯಮದಲ್ಲಿ ಕೆಲವರು ಇಲ್ಲ ಸಲ್ಲದ ಅಪಪ್ರಚಾರ ಮಾಡಿ, ತಪ್ಪು ಸುದ್ದಿಗಳನ್ನು ಪ್ರಕಟಿಸಿ, ಸರ್ಕಾರಕ್ಕೆ ಗಡುವು ನೀಡುವ ಕೆಲಸ ಮತ್ತು ಮೈತ್ರಿಯಲ್ಲಿ ಒಡಕು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಮೊದಲು ಆಪರೇಷನ್ ಕಮಲ ಆಗಬೇಕಾಗಿದೆ. ಏನೂ ಸುದ್ದಿ ಇಲ್ಲದಿದ್ದ ಸಂದರ್ಭದಲ್ಲೂ ಥಟ್ಟನೆ ಇಂತಹ ಸುದ್ದಿಗಳನ್ನು ಸೃಷ್ಟಿಸಿ, ಪ್ರಚಾರ ಮಾಡುತ್ತಿದ್ದಾರೆ. ಇವರು ಯಾರು, ಏತಕ್ಕೆ ಮಾಡುತ್ತಿದ್ದಾರೆ ಎಂಬುದು ತಿಳಿದಿದೆ. ಮುಂದಿನ ದಿನಗಳಲ್ಲಿ ಅಲ್ಲಿಯೂ ಫ್ಯೂಸ್ ತೆಗೆಯುವ ಕೆಲಸ ಮಾಡುತ್ತೇನೆ ಎಂದಿದ್ದಾರೆ. ಇದೇ 8 ರಂದು ಬಜೆಟ್ ಮಂಡಿಸಿಯೇ ತೀರುತ್ತೇನೆ. ಉಳಿದಿರುವ ನಾಲ್ಕೂವರೆ ವರ್ಷ ಉತ್ತಮ ಆಡಳಿತ ನೀಡುತ್ತೇನೆ ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

Translate »