ನೀರು ತುಂಬಿಸುವ ಯೋಜನೆ ವಿಸ್ತಾರಗೊಳ್ಳಲು ಬಿಎಸ್‍ವೈ ಸಿಎಂ ಮಾಡಿ ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಮನವಿ
ಚಾಮರಾಜನಗರ

ನೀರು ತುಂಬಿಸುವ ಯೋಜನೆ ವಿಸ್ತಾರಗೊಳ್ಳಲು ಬಿಎಸ್‍ವೈ ಸಿಎಂ ಮಾಡಿ ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಮನವಿ

April 30, 2018

ಚಾಮರಾಜನಗರ/ಗುಂಡ್ಲಪೇಟೆ: ಈ ಭಾಗದ 20 ಕೆರೆಗಳಿಗೆ ನೀರು ತುಂಬಿಸಿದ ರೂವಾರಿ ಬಿ.ಎಸ್.ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿಯಾಗಿ ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಿಸಿ ರೈತರು ಸಮೃದ್ಧಿಯಾಗಿ ನೆಮ್ಮದಿ ಜೀವನ ನಡೆಸಲು ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಮನವಿ ಮಾಡಿದರು.

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹರವೆ, ಅರಳಿಕಟ್ಟೆ, ಮಲೆಯೂರು, ತೆರಕಣಾಂಬಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೋಡ್ ಶೋ ಹಾಗೂ ಪಾದಯಾತ್ರೆ ಮೂಲಕ ಭಾನುವಾರ ಬಿಜೆಪಿ ಅಭ್ಯರ್ಥಿ ಸಿ.ಎಸ್.ನಿರಂಜನ್ ಪರವಾಗಿ ಮತಯಾಚನೆ ಮಾಡಿ ಸಾರ್ವಜನಿರಕರನ್ನುದ್ದೇಶಿಸಿ ಅವರು ಮಾತನಾಡಿದರು.

2008ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಭಾಗದ 20 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 212 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ ಬಜೆಟ್‍ನಲ್ಲಿ ಘೋಷಣೆ ಮಾಡಿದ್ದರು. ಕಾವೇರಿ ನ್ಯಾಯಾಧಿಕರಣ ತೀರ್ಪು ಬರುವ ಮುನ್ನವೇ ಈ ಭಾಗದ ಜನರ ಸಂಕಷ್ಟವನ್ನು ನೋಡಿ, ಕುಡಿಯುವ ನೀರಿಗಾಗಿ ಯೋಜನೆಯನ್ನು ಜಾರಿ ಗೊಳಿಸಿ, ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾದರೆ ನಾನು ಎದುರಿಸುತ್ತೇನೆ, ಈ ಭಾಗದ ರೈತರ ಸಂಕಷ್ಟವನ್ನು ಮೊದಲು ಪರಿಹರಿಸೋಣ. ಅವರಿಗೆ ಒಳ್ಳೆಯದನ್ನು ಮಾಡಲು ನಮಗೆ ಅಧಿಕಾರ ಸಿಕ್ಕಿರುವುದು ಎಂದು ಕಡತಕ್ಕೆ ಸಹಿ ಮಾಡಿದರು. ಶರವೇಗದಲ್ಲಿ ಕಾಮಗಾರಿ ಪೂರ್ಣಗೊಂಡು ಈ ಭಾಗದ 20 ಕೆರೆಗಳಿಗೆ ನೀರು ತುಂಬಿಸಿ ರೈತರು ಸಂತೃಪ್ತಿಯಿಂದ ಜೀವನ ನಡೆಸುತ್ತಿದ್ದಾರೆ. ಇಂಥ ಯೋಜನೆಗಳು ಜಿಲ್ಲೆಗೆ ವಿಸ್ತಾರಗೊಳ್ಳಲು ಮತ್ತೆ ಬಿಜೆಪಿಗೆ ಮತ ಹಾಕಿ ಎಂದು ಮನವಿ ಮಾಡಿದರು.

ಈ ಬಾರಿ ಮತದಾನ ಮಾಡುವಾಗ ಯಡಿಯೂರಪ್ಪ ಅವರನ್ನು ಮನಸ್ಸಿನಲ್ಲಿಟ್ಟುಕೊಂಡು ಬಿಜೆಪಿ ಅಭ್ಯರ್ಥಿ ಪ್ರೊ.ಮಲ್ಲಿಕಾರ್ಜುನಪ್ಪ ಅವರಿಗೆ ಮತಚಲಾಯಿಸುವ ಮೂಲಕ ಬಿ.ಎಸ್.ಯಡಿಯೂಪ್ಪ ಸಿಎಂ ಆಗಲು ಶಕ್ತಿ ತುಂಬಬೇಕು.
-ಬಿ.ವೈ.ವಿಜಯೇಂದ್ರ, ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ

ಕ್ಷೇತ್ರ ಅಭಿವೃದ್ಧಿಯಲ್ಲಿ ಭಾರೀ ಹಿನ್ನಡೆ: ಗುಂಡ್ಲುಪೇಟೆ ಕ್ಷೇತ್ರವನ್ನು ಬಹಳ ವರ್ಷಗಳಿಂದ ಅಧಿಕಾರ ನಡೆಸಿರುವ ಕಾಂಗ್ರೆಸ್ ಜ್ವಲಂತ ಸಮಸ್ಯೆಗಳಿಗೆ ಸಾಕ್ಷಿಯಾಗಿದೆ. ಬರ ಪೀಡಿತ ಕ್ಷೇತ್ರವಾಗಿರುವ ಗುಂಡ್ಲುಪೇಟೆಯನ್ನು ಅಭಿವೃದ್ಧಿಪಡಿಸಲು ಮುಂದಾಗಿಲ್ಲ. ಕೇವಲ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಇನ್ನೂ ಸಹ ಕ್ಷೇತ್ರದ ಬಹಳಷ್ಟು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಇದೆ. ಯುವಕರಿಗೆ ಉದ್ಯೋಗವಿಲ್ಲದೇ ಗುಳೆ ಹೋಗುತ್ತಿದ್ದಾರೆ. ಮೂರು ಬಾರಿ ಸೋಲು ಕಂಡು ತಮ್ಮ ಸೇವೆ ಮಾಡಲು ಮುಂದಾಗಿರುವ ಯುವ ಮುಖಂಡ ನಿರಂಜನ್ ಕುಮಾರ್ ಅವರಿಗೆ ಒಂದು ಅವಕಾಶ ಕೊಟ್ಟು ನೋಡಿ ಎಂದು ಮನವಿ ಮಾಡಿದರು.

ಬಿಜೆಪಿ ಅಭ್ಯರ್ಥಿ ನಿರಂಜನ್‍ಕುಮಾರ್ ಮಾತನಾಡಿ, ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಕೇವಲ 20 ದಿನಗಳಲ್ಲಿ ವರುಣಾ ಕ್ಷೇತ್ರ ಅಲ್ಲದೇ ರಾಜ್ಯಾದ್ಯಂತ ಮನೆ ಮಾತಾಗಿದ್ದಾರೆ. ತಮ್ಮ ಸಂಘಟನಾ ಚತುರತೆಯ ಮೇಲೆ ವರುಣಾ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಸಂಚಲನವನ್ನು ಉಂಟು ಮಾಡಿದ್ದರು. ಇಂಥವರು ನಮ್ಮ ಕ್ಷೇತ್ರದಲ್ಲಿ ರೋಡ್ ಶೋ ಮಾಡಲು ಬಿಜೆಪಿ ಪರವಾಗಿ ಪ್ರಚಾರಕ್ಕೆ ಆಗಮಿಸಿದ್ದಾರೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಸ್ಥಾಪನೆಯಾಗಬೇಕು. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಬೇಕು ಎಂಬ ಮಹದಾಸೆಯಿಂದ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಅಪ್ಪಣ್ಣ, ಎಸ್ಸಿ ಮೋರ್ಚಾ ಅಧ್ಯಕ್ಷ ಕೆರೆಹಳ್ಳಿ ಮಹದೇವಸ್ವಾಮಿ, ರಘು ಕೌಟಿಲ್ಯ, ಮುಖಂಡರಾದ ಅಶೋಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಟ್ಟರಸು, ಯುವ ಮೋರ್ಚಾ ಅಧ್ಯಕ್ಷ ಪ್ರಣಯ್, ಮುಖಂಡರಾದ ಮಲೆಯೂರು ನಾಗೇಂದ್ರ, ಜ್ಯೋತಿ ರೇಚಣ್ಣ, ಶಕ್ತಿ ಕೇಂದ್ರದ ಅಧ್ಯಕ್ಷ ಹರವೆ ಮಹೇಶ್, ಸಚಿನ್ ದೀಕ್ಷಿತ್, ಅಲ್ಪ ಸಂಖ್ಯಾತ ಮೋರ್ಚಾ ಅಧ್ಯಕ್ಷ ಅಫ್ಸರ್ ಪಾಷಾ, ಡಿ.ಎನ್.ಪರÀಶಿವಮೂರ್ತಿ, ಹಳೇಪುರ ನಟರಾಜು, ಹರವೆ ಸುರೇಶ್, ಮಹೇಶ್ ಕೆಂಡಾ, ಕಲ್ಪುರ ಶಿವಕುಮಾರ್ ಇತರರು ಇದ್ದರು.
ಚಾಮರಾಜನಗರ ವರದಿ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಉಪ್ಪಾರ ಮುಖಂಡ ಹಾಗೂ ದೇವರಾಜ ಅರಸು ಟ್ರಕ್ ಟರ್ಮಿನಲ್ ಮಾಜಿ ಅಧ್ಯಕ್ಷ ಹನುಮಂತಶೆಟ್ಟಿ ಅವರಿಗೆ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯಯೇಂದ್ರ ಭರವಸೆ ನೀಡಿದರು.

ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೊಡ್ಡರಾಯಪೇಟೆ, ಕೂಡ್ಲೂರು, ಆಲೂರು, ಕಾಗಲವಾಡಿ, ಅಮ್ಮನಪುರ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಪರ ಬಿರುಸಿ ಪ್ರಚಾರ ನಡೆಸಿ ಮತಯಾಚಿಸಿದರು.
ನಂತರ ಕೂಡ್ಲೂರು ಗ್ರಾಮದ ಉಪ್ಪಾರ ಮುಖಂಡ ಹಾಗೂ ದೇವರಾಜ ಅರಸು ಟ್ರಕ್ ಟರ್ಮಿನಲ್ ಮಾಜಿ ಅಧ್ಯಕ್ಷ ಹನುಮಂತಶೆಟ್ಟಿ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿ, ಮೇ 1ರಂದು ಸಂತೇಮರಹಳ್ಳಿಯಲ್ಲಿ ನಡೆಯಲಿರುವ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಪಕ್ಷ ಸೇರಲಿದ್ದಾರೆ ಎಂದು ವಿಜೇಂದ್ರ ತಿಳಿಸಿದರು.

ಬಿಜೆಪಿ ಅಭ್ಯರ್ಥಿ ಪ್ರೊ.ಮಲ್ಲಿಕಾರ್ಜುನಪ್ಪ ಮಾತನಾಡಿ, ನಮ್ಮ ಕ್ಷೇತ್ರಕ್ಕೆ ಆಗಮಿಸಿ ವಿಜೇಂದ್ರ ಅವರು ಮತಯಾಚಿಸಿರುವುದರಿಂದ ಪಕ್ಷಕ್ಕೆ ಹೆಚ್ಚು ಶಕ್ತಿ ಬಂದಿದೆ. ಇನ್ನು ಈ ಭಾಗದ ಉಪ್ಪಾರ ಮುಖಂಡ ಹನುಮಂತಶೆಟ್ಟಿ ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ಬಿಜೆಪಿಗೆ ಬರುತ್ತಿರುವುದರಿಂದ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಇದರಿಂದ ಈ ಬಾರಿ ನನ್ನ ಗೆಲವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉಪ್ಪಾರ ಮುಖಂಡ ಹನುಮಂತಶೆಟ್ಟಿ, ಜಿಪಂ ಮಾಜಿ ಅಧ್ಯಕ್ಷೆ ನಾಗಶ್ರೀ, ಎಂ.ರಾಮಚಂದ್ರ, ರಘು, ಅಪ್ಪಣ್ಣ, ಮಲ್ಲೇಶ್, ಮಂಗಲ ಶಿವಕುಮಾರ್, ಜಿಪಂ ಸದಸ್ಯ ಬಾಲರಾಜ್, ತಾಪಂ ಉಪಾಧ್ಯಕ್ಷ ದಯಾನಿಧಿ, ಆಲೂರು ಬಾಬು, ಅಯ್ಯನಪುರ ಶಿವಕುಮಾರ್, ದೊಡ್ಡರಾಯಪೇಟೆ ಗಿರೀಶ್, ಮೂಡ್ಲುಪುರ ನಂದೀಶ್, ಕಾಗಲವಾಡಿ ಶಿವಸ್ವಾಮಿ, ಬಿಸಲವಾಡಿ ಬಸವರಾಜ್, ಚಾಮುಲ್ ನಿರ್ದೇಶಕ ರವಿಶಂಕರ್, ಸುಂದರಪ್ಪ, ಸುಂದರಮ್ಮ, ನಂದಿಭವನ ಪ್ರಸಾದ್, ನಂಜದೇವನಪುರ ಪ್ರಶಾಂತ್, ನಲ್ಲೂರು ಶಿವರುದ್ರಸ್ವಾಮಿ, ಬಸವಣ್ಣ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.

Translate »