ವಿಪಕ್ಷಗಳ ಅಪಪ್ರಚಾರದಿಂದ ಕಾಂಗ್ರೆಸ್‍ಗೆ ಸೋಲು
ಮೈಸೂರು

ವಿಪಕ್ಷಗಳ ಅಪಪ್ರಚಾರದಿಂದ ಕಾಂಗ್ರೆಸ್‍ಗೆ ಸೋಲು

September 25, 2018
  • ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ
  • ಸಂಗೊಳ್ಳಿ ರಾಯಣ್ಣ ಸಮುದಾಯ ಭವನ ಉದ್ಘಾಟನೆ

ಕೆ.ಆರ್.ನಗರ:  ನಾನು ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ವರ್ಗದ ಬಡವರಿಗಾಗಿ ಮಾಡಿದ್ದ ಜನಪರ ಕೆಲಸಗಳು ವಿಪಕ್ಷಗಳ ಅಪಪ್ರಚಾರದಿಂದ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಆಗಲಿಲ್ಲ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪಟ್ಟಣದ ಕಾಗಿನೆಲೆ ಕನಕಗುರು ಪೀಠದ ಆವರಣದಲ್ಲಿ ತಾಲೂಕು ಕುರುಬರ ಸಂಘದ ವತಿಯಿಂದ ನಿರ್ಮಾಣ ಮಾಡಿರುವ ಸಂಗೊಳ್ಳಿರಾಯಣ್ಣ ಸಮುದಾಯ ಭವನ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಪಕ್ಷ ಸೋತಿದ್ದಕ್ಕೆ ನನಗೆ ಯಾವುದೇ ಬೇಸರವಿಲ್ಲ, ಜನರಿಗೆ ಉತ್ತಮ ಕಾರ್ಯಕ್ರಮ ನೀಡಿದ್ದೇನೆ ಎಂಬ ತೃಪ್ತಿ ಇದೆ ಎಂದರು.

ಡಿ.ದೇವರಾಜ ಅರಸು ನಂತರ 5 ವರ್ಷಗಳ ಕಾಲ ಸಂಪೂರ್ಣವಾಗಿ ಅಧಿಕಾರ ನಡೆಸಿದ ಮತ್ತು ಜನಪರವಾದ ಕೆಲಸ ಮಾಡಿದ ತೃಪ್ತಿ ಇದ್ದು, ಅಧಿಕಾರ ಶಾಶ್ವತವಲ್ಲ. ಕಾಲ ಚಕ್ರ ಉರುಳಿದಂತೆ, ಮೇಲಿದ್ದವರು ಕೆಳಗೆ ಇಳಿಯಲೇ ಬೇಕು ಕೆಳಗಿದ್ದವರು ಮೇಲೆರಲೇಬೇಕು ಎಂದು ಮಾರ್ಮಿಕವಾಗಿ ನುಡಿದರು.

ನಾನು ಸದಾ ಪರಸ್ಪರ ಜಾತಿಗಳನ್ನು ಜೋಡಿಸುವ ಕೆಲಸವನ್ನು ಮಾಡುತ್ತೇನೆ ಹೊರತು. ಅವುಗಳನ್ನು ಒಡೆಯುವ ಕೆಲಸ ಮಾಡಿಲ್ಲ ಎಂದ ಮಾಜಿ ಮುಖ್ಯಮಂತ್ರಿಗಳು. ಕೆಲವರು ನನ್ನನ್ನು ಅಹಿಂದ ಪರ ಮತ್ತು ಮೇಲ್ವರ್ಗದ ವಿರೋಧಿ ಎಂದು ಟೀಕೆ ಮಾಡುತ್ತಾರೆ. ಅಹಿಂದ ಪರ ಎಂಬುದರಲ್ಲಿ ಯಾವುದೇ ಮುಲಾಜಿಲ್ಲಾ. ಅದರ ಜತೆಗೆ ಅವಕಾಶ ವಂಚಿತರಿಗೆ ಹಾಗೂ ರಾಜಕೀಯವಾಗಿ ಹಿಂದುಳಿದವರಿಗೆ ಸಮಾನವಾದ ಅಧಿಕಾರ ಸಿಗಬೇಕು ಎಂಬ ವಿಚಾರದಲ್ಲಿ ನಂಬಿಕೆ ಇಟ್ಟುಕೊಂಡಿದ್ದೇನೆ ಎಂದು ತಿಳಿಸಿದರು.

ರಾಜ್ಯದ ಹಿಂದುಳಿದ ವರ್ಗಗಳ 11 ಮಹನೀಯರ ಜಯಂತಿಗಳನ್ನು ಆಚರಣೆÉ ಮಾಡುವಂತೆ ಮಾಡಿದ್ದು ಕಾಂಗ್ರೆಸ್ ಸರ್ಕಾರ, ಇದರ ಜತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಅನುಕೂಲಕ್ಕೆ ಹೊಸ ಕಾಯ್ದೆಗೆ ಜಾರಿಗೆ ತಂದು 5 ವರ್ಷಗಳ ಅವಧಿಯಲ್ಲಿ 89 ಸಾವಿರ ಕೋಟಿ ರೂ.ಗಳನ್ನು ಆ ಸಮುದಾಯದ ಅಭಿವೃದ್ಧಿಗಾಗಿ ಖರ್ಚು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯದ ವಿವಿಧ ಸಮಾಜದ 2800 ಸಮುದಾಯಗಳ ಭವನಗಳ ಕಾಮಗಾರಿಗೆ 413 ಕೋಟಿ ಹಣ ಬಿಡುಗಡೆ ಮಾಡಿದ್ದು, ಕೆ.ಆರ್.ನಗರ ತಾಲೂಕಿನ ವಿವಿಧ ಸಮುದಾಯ ಭವನಗಳಿಗೆ 6 ಕೋಟಿ ರೂ. ಮತ್ತು ವಿವಿಧ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗೆ 30 ಕೋಟಿ ವಿಶೇಷ ಅನುದಾನ ನೀಡಿದ್ದೇನೆ. ಅಲ್ಲದೆ ಕೆ.ಆರ್.ನಗರ ಪಟ್ಟಣದ ಅಭಿವೃದ್ಧಿಗಾಗಿ ಪುರಸಭೆಗೆ 40 ಕೋಟಿ ರೂ.ಗಳನ್ನು ನೀಡಿದ್ದೇನೆ ಎಂದರು.

ಗಾವಡಗೆರೆ ಗುರುಲಿಂಗ ಜಂಗಮ ದೇವರ ಮಠದ ಶ್ರೀ ನಟರಾಜಸ್ವಾಮೀಜಿ, ಕಾಗಿನೆಲೆ ಕನಕಗುರು ಪೀಠದ ಶ್ರೀ ಶಿವಾನಂದಪುರಿಸ್ವಾಮೀಜಿ, ಕಾಗಿನೆಲೆ ತಿಂಥಣಿ ಮಠದ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿ ದಿವ್ಯ ಸಾನಿದ್ಯ ವಹಿಸಿ ಆರ್ಶಿವಚನ ನೀಡಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ಸಚಿವರಾದ ಆರ್.ಶಂಕರ್, ಪುಟ್ಟರಂಗಶೆಟ್ಟಿ, ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣ, ಸಿ.ಎಚ್.ವಿಜಯಶಂಕರ್, ಶಾಸಕ ಅನಿಲ್‍ಚಿಕ್ಕಮಾದು, ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಮಾತನಾಡಿದರು.

ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಜಿಪಂ ವಿಪಕ್ಷ ನಾಯಕ ಡಿ.ರವಿಶಂಕರ್, ಸದಸ್ಯರಾದ ಅಚ್ಚುತಾನಂದ, ಅಮಿತ್.ವಿ.ದೇವರಹಟ್ಟಿ, ನಾಗರತ್ನ, ತಾಪಂ ಅಧ್ಯಕ್ಷ ಹೆಚ್.ಟಿ.ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪಿ.ಯೋಗೀಶ್, ಸದಸ್ಯರಾದ ಜಿ.ಎಸ್.ಮಂಜುನಾಥ್, ಮಹದೇವ್, ಪುರಸಭೆ ಅಧ್ಯಕ್ಷೆ ಹರ್ಷಲತಾ, ಉಪಾಧ್ಯಕ್ಷೆ ಪಾರ್ವತಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ನೈಸ್ ಸಂಸ್ಥೆಯ ಉಪಾಧ್ಯಕ್ಷ ಟಿ.ಮಹದೇವ್, ಕೆಪಿಸಿಸಿ ವಕ್ತಾರೆ ಐಶ್ವರ್ಯಮಹದೇವ್, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಸಿದ್ದೇಗೌಡ, ಕುರುಬ ಸಂಘದ ಮಾಜಿ ಅಧ್ಯಕ್ಷ ಜಿ.ಎನ್.ಮಲ್ಲೇಗೌಡ, ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಂ.ಮಾಲೇಗೌಡ ಸೇರಿದಂತೆ ಸಮಾಜದ ಮುಖಂಡರು ಮತ್ತು ಚುನಾಯಿತ ಸದಸ್ಯರು ಹಾಜರಿದ್ದರು.

ಒಂದೇ ವೇದಿಕೆಯಲ್ಲಿದ್ದರೂ ಮಾತಿಲ್ಲ… ಕಥೆಯಿಲ್ಲಾ…
ಕೆ.ಆರ್.ನಗರ:  ಕಳೆದ 2 ವರ್ಷಗಳಿಂದ ರಾಜಕೀಯವಾಗಿ ಪರಸ್ಪರ ದೂರವಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಜೆಡಿಎಸ್ ಅಧ್ಯಕ್ಷ ಎಚ್.ವಿಶ್ವನಾಥ್ ಒಂದೇ ವೇದಿಕೆಯಲ್ಲಿ 2 ಗಂಟೆಗೂ ಹೆಚ್ಚು ಕುಳಿದ್ದರೂ ಪರಸ್ಪರ ಮಾತನಾಡದೆ, ಮುಖವನ್ನು ನೋಡದೆ ಅಂತರ ಕಾಯ್ದುಕೊಂಡರು.

ಕೆ.ಆರ್.ನಗರದಲ್ಲಿ ಸಂಗೊಳ್ಳಿ ರಾಯಣ್ಣ ಸಮುದಾಯ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇಬ್ಬರು ನಾಯಕರು ಬಹುದಿನಗಳ ನಂತರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರಿಂದ ಇಬ್ಬರೂ ಮಾತನಾಡಬಹುದು ಎಂದು ಜನತೆ ನಿರೀಕ್ಷಿಸಿದ್ದರು.

ಮಾಜಿ ಮುಖ್ಯಮಂತ್ರಿಗಳು ಸಭೆಗೆ ಆಗಮಿಸುವ ಮುನ್ನ ಎಚ್.ವಿಶ್ವನಾಥ್ ಮಾತನಾಡಿ, ವೇದಿಕೆಯಲ್ಲಿ ಆಸೀನರಾಗಿದ್ದರು. ನಂತರ ಬಂದ ಸಿದ್ದರಾಮಯ್ಯನವರು ಮಾತು ಆರಂಭಿಸಿದ್ದಾಗ ವೇದಿಕೆಯಲ್ಲಿ ಆಸೀನರಾಗಿದ್ದ ಯಾರ ಹೆಸರನ್ನು ಹೇಳದೆ ನೇರವಾಗಿ ಭಾಷಣ ಆರಂಭಿಸಿದರು. ಆನಂತರವೂ ಇಬ್ಬರು ಮಾತನಾಡಲಿಲ್ಲ.

Translate »