ದುಡ್ಡು, ದೌಲತ್ತಿನ ರಾಜಕಾರಣ ಕೈಬಿಡಿ
ಮೈಸೂರು

ದುಡ್ಡು, ದೌಲತ್ತಿನ ರಾಜಕಾರಣ ಕೈಬಿಡಿ

June 2, 2019

ಕೆ.ಆರ್.ನಗರ:`ನಿಮ್ಮ ದುಡ್ಡು, ದೌಲತ್ತಿನ ರಾಜಕಾರಣ ನಡೆಯುವುದಿಲ್ಲ. ಹಣದಿಂದ ಜನರನ್ನು ಅಳೆಯಬೇಡಿ. ಅದರಿಂದ ಏನೂ ಆಗಲ್ಲ. ಹಣದಿಂದ ಎಲ್ಲವನ್ನೂ ಮಾಡುತ್ತೇನೆ ಎಂಬ ದುರಹಂಕಾರ ಒಳ್ಳೆಯದಲ್ಲ. ನಿಮ್ಮನ್ನು ನೀವು ತಿದ್ದಿಕೊಳ್ಳಿ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆದ ಶಾಸಕ ಎ.ಹೆಚ್.ವಿಶ್ವನಾಥ್ ಅವರು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರಿಗೆ ಕಟು ಎಚ್ಚರಿಕೆ ನೀಡಿದ್ದಾರೆ.

ಕೆ.ಆರ್.ನಗರ ಪುರಸಭೆಯಲ್ಲಿ ಅಧಿಕಾರದ ಗದ್ದುಗೆ ಏರಲು ಜೆಡಿಎಸ್ ವಿಫಲವಾಗಿ ಕಾಂಗ್ರೆಸ್ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಕೆ.ಆರ್.ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಈ ಚುನಾವಣೆಯ ಫಲಿತಾಂಶ ನೋಡಿದರೆ ನಾವು ಅಲ್ಪ ಸಂಖ್ಯಾತರನ್ನು ಹಾಗೂ ಎಲ್ಲಾ ಜಾತಿ ಧರ್ಮದವರನ್ನು ಧಿಕ್ಕರಿಸಿದ್ದೇವಾ? ಎಂಬ ಪ್ರಶ್ನೆ ಮೂಡುತ್ತಿದೆ ಎಂದರು. ಸುದ್ದಿಗೋಷ್ಠಿಯುದ್ದಕ್ಕೂ ಸಚಿವ ಸಾ.ರಾ.ಮಹೇಶ್ ವಿರುದ್ಧ ಕಿಡಿ ಕಾರಿದ ಅವರು, ಪಕ್ಷದ ರಾಜ್ಯಾಧ್ಯಕ್ಷನಾಗಿ ನಾನು ಹೇಳಿದ ಒಬ್ಬರಿಗೂ ಪುರಸಭೆ ಯಲ್ಲಿ ಸ್ಪರ್ಧಿಸಲು ಸಾ.ರಾ. ಮಹೇಶ್ ಟಿಕೆಟ್ ಕೊಟ್ಟಿಲ್ಲ. ನನ್ನ ಸಮುದಾಯದ ವರನ್ನು (ಕುರುಬರು) ಕಡೆಗಣಿಸಲಾ ಗಿದೆ. ನನ್ನ ಮಗ ಅಮಿತ್ ಕೂಡ ಟಿಕೆಟ್ ಕೇಳಿದ್ದರು. ಅವರಿಗೂ ಟಿಕೆಟ್ ಕೊಟ್ಟಿಲ್ಲ. ಪರಶುರಾಮ ಕ್ಷತ್ರಿಯರನ್ನು ನಾಶ ಮಾಡಲು ಕೊಡಲಿ ಹಿಡಿದಂತೆ ಸಾ.ರಾ. ಮಹೇಶ್ ಕುರುಬ ಸಮಾಜದ ವಿರುದ್ಧ ವರ್ತಿಸುತ್ತಿದ್ದಾರೆ. ಅದು ಒಳ್ಳೆಯದಲ್ಲ ಎಂದು ಅವರು ಹೇಳಿದರು.

“ನೀವು ಶಾಸಕರಾಗಿ ಗೆಲ್ಲಲು ಎಲ್ಲಾ ವರ್ಗದ ಜನರು ಮತ ನೀಡಿದ್ದಾರೆ. ಕುರುಬ ಸಮಾಜದವರೂ ಕೂಡ ನಿಮಗೆ ಮತ ನೀಡಿದ್ದಾರೆ. ನೀವು 1600 ಓಟು ಅಂತರದಲ್ಲಿ ಗೆದ್ದಿರುವುದಕ್ಕೆ ನನ್ನ ಸಮಾಜದವರು ಹಾಗೂ ಕಾಂಗ್ರೆಸ್‍ನಿಂದ ನಾನು ಜೆಡಿಎಸ್‍ಗೆ ಬಂದಾಗ ನನ್ನ ಜೊತೆ ಬಂದವರು ರೂವಾರಿಗಳಾಗಿದ್ದಾರೆ ಎಂದ ವಿಶ್ವನಾಥ್, ದ್ವೇಷ ಒಳ್ಳೆಯದಲ್ಲ. ದ್ವೇಷದ ರಾಜಕಾರಣ ಮಾಡಬೇಡಿ. ಹಣದಿಂದ ಎಲ್ಲಾ ಎಂಬ ಭಾವನೆ ಬೇಡ, ತಿದ್ದಿಕೊಳ್ಳಿ. ನಮ್ಮನ್ನು ಆಳುವುದು ಜನರ ಮನಸ್ಸು. ಆದ್ದರಿಂದ ಜನರ ಮನಸ್ಸು ಗೆಲ್ಲುವುದನ್ನು ಕಲಿತುಕೊಳ್ಳಿ’’ ಎಂದು ಸಾ.ರಾ.ಮಹೇಶ್ ಅವರನ್ನುದ್ದೇಶಿಸಿ ಹೇಳಿದರು.
ದುಡ್ಡೇ ಸರ್ವಸ್ವ ಎಂದರೆ ಅದು ಒಳ್ಳೆಯದಲ್ಲ. ದುಡ್ಡಿನಿಂದ ಹಾಗೂ ಒಂದೇ ಜಾತಿಯಿಂದ ಪಂಚಾಯಿತಿ ಸದಸ್ಯನೂ ಆಗಲು ಸಾಧ್ಯವಿಲ್ಲ. ರಾಜಕಾರಣದಲ್ಲಿ ಗೆಲುವು ಸಾಧಿಸಲು ಎಲ್ಲಾ ಜನಾಂಗ, ಧರ್ಮಗಳ ಸಹಕಾರ ಬೇಕು. ನಾನು ಕಳೆದ 40 ವರ್ಷ ರಾಜಕಾರಣದಲ್ಲಿ ಎಲ್ಲರ ಕಷ್ಟ-ಸುಖಕ್ಕೂ ಸ್ಪಂದಿಸಿದ್ದೇನೆ. ಯಾರೇ ಓಟು ಹಾಕಲಿ, ಬಿಡಲಿ, ಎಲ್ಲರನ್ನೂ ಸಾಮರಸ್ಯದಿಂದ ನಡೆಸಿಕೊಂಡು ಬಂದಿದ್ದೇನೆ. ನಾನು ಮತ್ತು ಮಾಜಿ ಸಚಿವ ದಿವಂಗತ ನಂಜಪ್ಪ ಅವರು ತಾಲೂಕಿನಲ್ಲಿ ಸಾಮರಸ್ಯ ರಾಜಕಾರಣ ಮಾಡಿಕೊಂಡು ಬಂದಿದ್ದೇವೆ. ಅದೇ ಸಾಮರಸ್ಯ ರಾಜಕಾರಣ ಮುಂದುವರೆಯಲಿ ಎಂದು ಅವರು ಹೇಳಿದರು.

ಮಂಡ್ಯದಲ್ಲಿ ಸುಮಲತಾ ಅವರು ಗೆದ್ದದ್ದು ಒಳ್ಳೆಯ ಮನಸ್ಸಿನಿಂದಲೇ ಹೊರತು, ಹಣದಿಂದ ಅಲ್ಲ. ಹೊಳೆಯಲ್ಲಿ ಸ್ನಾನ ಮಾಡಿ ಸೈಕಲ್‍ನಲ್ಲಿ ತಿರುಗಾಡುತ್ತಾ, ಗುಡಿಸಿಲಿನಲ್ಲಿ ವಾಸಿಸುತ್ತಿದ್ದ ಸಾರಂಗ್ ಅವರು, ಲೋಕಸಭಾ ಚುನಾವಣೆಯಲ್ಲಿ ಗೆದ್ದು ಕೇಂದ್ರ ಸಚಿವರಾಗಿದ್ದೂ ಕೂಡ ಒಳ್ಳೆಯ ಮನಸ್ಸಿನಿಂದಲೇ ಹೊರತು ದುಡ್ಡಿನಿಂದಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದು ಅವರು ಸಾ.ರಾ.ಮಹೇಶ್ ಅವರಿಗೆ ಹಿತವಚನ ಹೇಳಿದರು. ನಾನು ಜೆಡಿಎಸ್‍ನ ರಾಜ್ಯಾಧ್ಯಕ್ಷನಾಗಿದ್ದು, ಪುರಸಭೆ ಚುನಾವಣೆಯಲ್ಲಿ ಒಬ್ಬರಿಗೂ ಟಿಕೆಟ್ ಕೊಡಿಸಲಾಗಲಿಲ್ಲ. `ಒಬ್ಬರಿಗೆ ಒಂದು ಟಿಕೆಟ್ ಕೂಡ ಕೊಡಿಸಲಾಗದ ನೀನು, ಅದ್ಯಾವ ಸೀಮೆ ಜೆಡಿಎಸ್ ರಾಜ್ಯಾಧ್ಯಕ್ಷ’’ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ನಾನು ಹೇಳಿದ ಒಬ್ಬರಿಗೂ ಟಿಕೆಟ್ ಕೊಡದೇ ಸಾ.ರಾ.ಮಹೇಶ್ ದುರಹಂಕಾರದಿಂದ ವರ್ತಿಸಿದ್ದಾರೆ. ಇನ್ನು ಮುಂದಾದರೂ ಅವರು ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕು. ದುಡ್ಡು, ದೌಲತ್ತಿನಿಂದಲೇ ಎಲ್ಲವನ್ನೂ ಮಾಡಿಬಿಡುತ್ತೇನೆ ಎಂಬ ಮನೋಭಾವವನ್ನು ಕೈಬಿಡಬೇಕು ಎಂದು ವಿಶ್ವನಾಥ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪುರಸಭಾ ಸದಸ್ಯ ಪ್ರಭುಶಂಕರ್, ಜೆಡಿಎಸ್ ಮುಖಂಡರಾದ ಡಾ. ಮೆಹಬೂಬ್ ಖಾನ್, ಇಬ್ರಾಹಿಂ ಕನೋಳಿ, ಹುಣಸೂರು ಕುಮಾರ್ ಇನ್ನಿತರರಿದ್ದರು.

Translate »