ಅರಣ್ಯ ಹಕ್ಕು ಕಾಯ್ದೆ ಅಸಮರ್ಪಕ ಅನುಷ್ಠಾನ: ಬುಡಕಟ್ಟು ಸಮುದಾಯದಿಂದ ಚುನಾವಣೆ ಬಹಿಷ್ಕಾರ ಎಚ್ಚರಿಕೆ
ಮೈಸೂರು

ಅರಣ್ಯ ಹಕ್ಕು ಕಾಯ್ದೆ ಅಸಮರ್ಪಕ ಅನುಷ್ಠಾನ: ಬುಡಕಟ್ಟು ಸಮುದಾಯದಿಂದ ಚುನಾವಣೆ ಬಹಿಷ್ಕಾರ ಎಚ್ಚರಿಕೆ

April 30, 2018

ಮೈಸೂರು: ಅರಣ್ಯ ಹಕ್ಕು ಕಾಯ್ದೆಯ ಸಮರ್ಪಕ ಅನುಷ್ಠಾನ ಗೊಳಿಸದೇ ಅರಣ್ಯವಾಸಿಗಳನ್ನು ಶೋಷಣೆ ಮಾಡಲಾಗುತ್ತಿರುವ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆಯ ಮತದಾನ ವನ್ನು ಆದಿವಾಸಿ ಸಮುದಾಯಗಳು ಒಕ್ಕೊರಲಿನಿಂದ ಬಹಿಷ್ಕಾರ ಮಾಡುತ್ತಿವೆ ಎಂದು ಅರಣ್ಯವಾಸಿ ಬುಡಕಟ್ಟು ಸಮು ದಾಯಗಳ ಒಕ್ಕೂಟ ಪ್ರಕಟಿಸಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಸಂಚಾಲಕ ಬಾಬು, ಅರಣ್ಯವಾಸಿ ಬುಡಕಟ್ಟು ಸಮು ದಾಯಗಳನ್ನು ಓಟ್ ಬ್ಯಾಂಕ್ ಆಗಿ ಬಳಸಿ ಕೊಳ್ಳಲಾಗುತ್ತಿದ್ದು, ನಮ್ಮ ಸಮು ದಾಯಕ್ಕೆ ಸೌಲಭ್ಯ ಮಾತ್ರ ಮರೀಚಿಕೆ ಯಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ತೀರ್ಮಾನಿಸ ಲಾಗಿದೆ ಎಂದು ತಿಳಿಸಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 71 ವರ್ಷ ಗಳ ಮೇಲಾದರೂ ಅರಣ್ಯವಾಸಿ ಸಮು ದಾಯಗಳಿಗೆ ಯಾವುದೇ ಸ್ವಾತಂತ್ರ್ಯ ವಿಲ್ಲವಾಗಿದೆ. ಅರಣ್ಯ ಇಲಾಖೆಯು ಸಮುದಾಯವನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದೆ. ಹಕ್ಕುಗಳನ್ನು ಕೇಳಿದರೆ ಅವರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿ ಸುವ ಮೂಲಕ ಅರಣ್ಯದಿಂದ ಬಲವಂತ ವಾಗಿ ಹೊರಹಾಕಲಾಗುತ್ತಿದೆ. 2006ರ ಅರಣ್ಯ ಹಕ್ಕು ಕಾಯ್ದೆ ಸಮರ್ಪಕ ಅನುಷ್ಠಾನಗೊಳಿಸದೇ ಶೋಷಣೆ ಮಾಡ ಲಾಗುತ್ತಿದೆ. ಕೇಂದ್ರ ಸರ್ಕಾರ ಶೇ.40ರಷ್ಟು ಅರಣ್ಯ ಪ್ರದೇಶವನ್ನು ಖಾಸಗಿ ನಿರ್ವಹಣೆಗೆ ನೀಡುವ ಉದ್ದೇಶಿಸಿದ್ದು, ಇದರಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.

ಸ್ಥಳಾಂತರಗೊಂಡು 25-30 ವರ್ಷಗಳಾಗಿ ದ್ದರೂ ನಮಗೆ ಪುನರ್ವಸತಿ ಕಲ್ಪಿಸಿಲ್ಲ. ನಮ್ಮ ಹಕ್ಕುಗಳಿಗೆ ಹಲವು ಬಾರಿ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನ ವಾಗಿಲ್ಲ. ಪ್ರತಿ ಬಾರಿ ಭರವಸೆ ನೀಡಿ ನಮ್ಮನ್ನು ಮತ ಬ್ಯಾಂಕ್ ಆಗಿ ಬಳಸಿಕೊಳ್ಳ ಲಾಗುತ್ತಿದೆ ಎಂದು ದೂರಿದರು.

ಅರಣ್ಯವಾಸಿ ಸಮುದಾಯಗಳಿಗೆ ಮೂಲ ಸೌಲಭ್ಯ ಕಲ್ಪಿಸಬೇಕು. ಆದಿವಾಸಿಗಳು ವಾಸಿಸುವ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ವಸತಿ ವ್ಯವಸ್ಥೆ ಕಲ್ಪಿಸಬೇಕು. ವಿದ್ಯುತ್, ಶುದ್ಧ ಕುಡಿಯುವ ನೀರು, ರಸ್ತೆ, ಶೌಚಾಲಯ ಸೌಲಭ್ಯಗಳನ್ನು ಕಲ್ಪಿಸಬೇಕು. ಸ್ಥಳಾಂತರ ಗೊಂಡ ಸಮುದಾಯಗಳಿಗೆ ಸಮಗ್ರ ಪುನ ರ್ವಸತಿ ಕಲ್ಪಿಸಬೇಕು. ಸಮುದಾಯಗಳಿಗೆ ಗುಣಮಟ್ಟದ ಆಹಾರ ಪದಾರ್ಥ ನೀಡ ಬೇಕು. ಅರಣ್ಯವಾಸಿಗಳಿಗೆ ಪ್ರತ್ಯೇಕ ಆರೋಗ್ಯ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು. ಬುಡಕಟ್ಟು ಸಮು ದಾಯದ ಇಂದ್ರ, ಸುನೀತಾ, ಕೆಂಪಮ್ಮ, ರಘು ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »