ಅರಸೀಕೆರೆ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ತವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕು ಬಾಣಾವರ ಹೋಬಳಿ ಹರತನಹಳ್ಳಿ ಗ್ರಾಮದ ಲೋಕೇಶ್ ನಾಯ್ಕ(40) ಎಂಬ ರೈತ ಸಾಲ ಭಾದೆಯಿಂದ ನೇಣಿಗೆ ಶರಣಾದ ಪ್ರಕರಣ ಗುರುವಾರ ನಡೆದಿದೆ.
ಗ್ರಾಮದ ಸಾಮ್ಯನಾಯ್ಕ ಎಂಬುವವರ ಮಗನಾದ ಲೋಕೇಶ್ ನಾಯ್ಕ ಕಾರ್ಪೊರೇಷನ್ ಬ್ಯಾಂಕಿನಲ್ಲಿ 4.5 ಲಕ್ಷ ಬೆಳೆ ಸಾಲವನ್ನು ಪಡೆದಿದ್ದರು.ತಮ್ಮ 5 ಎಕರೆ 20 ಗುಂಟೆ ಜಮೀನಿನಲ್ಲಿ ದಾಳಿಂಬೆ ಮತ್ತು ರಾಗಿ ಬೆಳೆಯೊಂದಿಗೆ ತೆಂಗು ಬೆಳೆದಿದ್ದರು.ಈ ಮೊದಲೇ ಬರಗಾಲ ಪೀಡಿತವಾದ ಈ ತಾಲ್ಲೂಕಿ ನಲ್ಲಿ ಸೂಕ್ತ ಮಳೆ ಇಲ್ಲದೇ ತೆಂಗು ಮತ್ತು ರಾಗಿ ಬೆಳೆಗಳು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬಂತೆ ಫಸಲು ಬರದೇ ಸಂದಿಗ್ದ ಪರಿಸ್ಥಿತಿ ಎದುರಾಗಿತ್ತು.
ಇತ್ತ ಬೆಳೆ ನಾಶ ಮತ್ತು ಸಾಲ ತೀರಿಸಲಾಗುವುದಿಲ್ಲವೆಂಬ ಭಯದಿಂದ ನೊಂದ ರೈತ ತಮ್ಮ ಜಮೀನಿನಲ್ಲಿ ಮಾವಿನ ಮರಕ್ಕೆ ನೇಣು ಹಾಕಿಕೊಂಡು ಗುರುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.ಮೃತ ರೈತನಿಗೆ ಪತ್ನಿ ಸಾಕುಬಾಯಿ(30), ಮಕ್ಕಳಾದ ಲೇಖನ(10) ಮಗ ರೋಹಿತ್(5) ಮತ್ತು 60 ವರ್ಷ ವಯಸ್ಸಿನ ಸೀತಾ ಬಾಯಿ ಎಂಬ ತಾಯಿ ಇದ್ದಾರೆಂದು ತಿಳಿದು ಬಂದಿದೆ. ಪ್ರಕರಣ ಬಾಣಾವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.




