ಹಾಸನ: ಗ್ರಾನೈಟ್ ಮಾಲೀಕನನ್ನು ಅವರ ಮನೆಗೆ ನುಗ್ಗಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಬೇಲೂರು ರಸ್ತೆಯ ತಣ್ಣೀರು ಹಳ್ಳದ ಸುಭಾಷ್ನಗರ ಬಡಾವಣೆಯಲ್ಲಿ ಬುಧವಾರ ರಾತ್ರಿ ನಡೆದಿದೆ.
ಶ್ರೀರಂಗನಾಥ ಗ್ರಾನೈಟ್ ಮಾಲೀಕ ಅಪ್ಪಣ್ಣಗೌಡ (48) ಹತ್ಯೆಯಾದವರು. ಅವರು ಬುಧವಾರ ರಾತ್ರಿ ಸಂಬಂಧಿಕರ ಮನೆಗೆ ಹೋಗಿ ಬಂದು, ಮಲಗಿದ್ದರು. ಮನೆಯ ಮುಂಬಾಗಿಲು ತೆರೆ ಯದೇ ಒಳ ನುಗ್ಗಿರುವ ಹಂತಕರು, ತಲೆಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಂದು, ಪರಾರಿಯಾಗಿದ್ದಾರೆ. ಕೊಠಡಿಯ ಅನೇಕ ಕಡೆ ರಕ್ತದ ಕಲೆಗಳಾಗಿವೆ. ಘಟನೆ ನಡೆದಾಗ ಮನೆಯಲ್ಲಿ ಯಾರು ಇರಲಿಲ್ಲ. ಮನೆ ಮುಂದೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾ ತಿಂಗಳ ಹಿಂದಷ್ಟೇ ಕೆಟ್ಟು ಹೋಗಿತ್ತು ಎನ್ನಲಾಗಿದೆ. ಅಪ್ಪಣ್ಣರಿಗೆ ಇಬ್ಬರು ಪತ್ನಿಯರು ಹಾಗೂ ನಾಲ್ವರು ಮಕ್ಕಳಿದ್ದಾರೆ. ಮೃತ ಅಪ್ಪಣ್ಣಗೌಡ ಅವರ ಸಹೋದರ ಲೋಕೇಶ್ ನೀಡಿರುವ ದೂರು ಆಧರಿಸಿ ಪೊಲೀಸರು ಎಲ್ಲಾ ದೃಷ್ಟಿಕೋನಗಳಿಂದಲೂ ತನಿಖೆ ತೀವ್ರಗೊಳಿಸಿದ್ದಾರೆ.
ಘಟನೆಯಿಂದ ನೆರೆ ಹೊರೆಯವರು ಬೆಚ್ಚಿ ಬಿದ್ದಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ನಗರ ಠಾಣೆ ಪೊಲೀಸರು ಹಾಗೂ ಮೇಲಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಹಾಗೆಯೇ ಶ್ವಾನದಳದಿಂದಲೂ ತಪಾಸಣೆ ನಡೆಸಲಾಯಿತು. ‘ಆಸ್ತಿ ವೈಷ್ಯಮ್ಯದಿಂದ ಅಥವಾ ಕೌಟುಂಬಿಕ ಕಲಹದಿಂದ ಈ ಕೃತ್ಯ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಪಕ್ಕಾ ಪ್ಲಾನ್ ಮಾಡಿ ಕೃತ್ಯ ಎಸಗಿ ಪರಾರಿಯಾಗಿದ್ದು, ಶೀಘ್ರ ಹಂತಕರನ್ನು ಪತ್ತೆ ಮಾಡಲಾಗುವುದು’ ಎಂದು ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಸಿಂಗ್ ರಾಥೋಡ್ ತಿಳಿಸಿದ್ದಾರೆ.