ಪ್ರಧಾನಿ ಹುದ್ದೆ ಬಿಟ್ಟವರು, ಸಿಎಂ ಸ್ಥಾನಕ್ಕೆ ಅಂಟಿ ಕೂರುತ್ತೇವಾ…!
ಮೈಸೂರು

ಪ್ರಧಾನಿ ಹುದ್ದೆ ಬಿಟ್ಟವರು, ಸಿಎಂ ಸ್ಥಾನಕ್ಕೆ ಅಂಟಿ ಕೂರುತ್ತೇವಾ…!

January 31, 2019

ಬೆಂಗಳೂರು: ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿದ ಕುಟುಂಬ ನಮ್ಮದು. ಇನ್ನು ಕೇವಲ ಮುಖ್ಯ ಮಂತ್ರಿ ಸ್ಥಾನಕ್ಕೆ ಅಂಟಿ ಕೂರುತ್ತೇವಾ? ಜನರಿಗೆ ಮೋಸ ಮಾಡಿ ನಾನು ಸಿಎಂ ಸ್ಥಾನದಲ್ಲಿ ಇರುತ್ತೇನಾ? ಎಂದು ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ.

ಇಂದು ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜೆಡಿಎಸ್ ರಾಷ್ಟ್ರೀಯ ಅಧಿವೇಶನ ದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಸಿಎಂ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತೇನೆ ಅಂತ ಹೇಳಿದ್ದು ನಿಜ. ಮಿತ್ರ ಪಕ್ಷದವರು ನನ್ನ ಮೇಲೆ ತೀವ್ರ ಒತ್ತಡ ಹೇರಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ನನಗೆ ಉಸಿರಾಡಲು ಪುರುಸೊತ್ತಿಲ್ಲದಂತೆ ಕೆಲಸ ಮಾಡುತ್ತಿದ್ದೇನೆ. ಎಷ್ಟು ಅಂತ ಕಾಂಗ್ರೆಸ್ ಶಾಸಕರ ಕಾಟ ತಡೆದುಕೊಳ್ಳಲು ಸಾಧ್ಯ ಎಂದಿದ್ದಾರೆ.

ಅವತ್ತು ಕೇಂದ್ರದಲ್ಲಿ ಪ್ರಧಾನಿಯಾಗಲು ಯಾರೂ ಸಿದ್ಧರಿರಲಿಲ್ಲ. ದೇವೇಗೌಡರನ್ನು ಬಲವಂತದಿಂದ ಕರೆದುಕೊಂಡು ಹೋಗಿ ಕೂರಿಸಿದರು. ಆ ಸ್ಥಾನ ಬಿಡಬೇಕಾದರೆ ಗೌಡರು ತ್ಯಾಗ ಮಾಡಿ ಬಂದರು. ಅಂತಹ ಕುಟುಂಬ ನಮ್ಮದು ಎಂದರು.

ಸಾಲಮನ್ನಾ ಬಗ್ಗೆ ಇನ್ನೂ ಅನುಮಾನವೇ? ಜನವರಿ 25ರವರೆಗೆ 2.5 ಲಕ್ಷ ರೈತ ಕುಟುಂಬಗಳಿಗೆ ಸಾಲಮನ್ನಾ ಆದೇಶ ಹೋಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾಡಿದ್ದ ಸಾಲಮನ್ನಾದ ಹಣ ಬಾಕಿ ಇತ್ತು. ಅದನ್ನು ನಾವು ತೀರಿಸಿದ್ದೇವೆ ಎಂದರು.

ಸಾಲಮನ್ನಾ ಮಾಡಿದರೂ ಕೂಡ ನನ್ನ ಮೇಲೆ ಅನುಮಾನ ಪಡುತ್ತಿದ್ದಾರೆ. ನರೇಂದ್ರ ಮೋದಿ ಅವರ ಕೈಯಲ್ಲೂ ಸಾಲಮನ್ನಾವನ್ನು ಲಾಲಿಪಪ್ ಎಂದು ಹೇಳಿಸುತ್ತಿದ್ದಾರೆ. ಸಿದ್ದರಾಮಯ್ಯ ಕಾಲದ ಸಾಲಮನ್ನಾದ 3,800 ಕೋಟಿ ಬಾಕಿ ಉಳಿದಿತ್ತು. ಅದನ್ನು ನಮ್ಮ ಸರ್ಕಾರದಲ್ಲಿ ಕೊಟ್ಟಿದ್ದೇನೆ. ಫೆ.8 ರಂದು ಬಜೆಟ್‍ನಲ್ಲಿ 44 ಲಕ್ಷ ರೈತರ ಸಾಲಮನ್ನಾ ಆಗುತ್ತದೆ ಎಂದರು.

Translate »