ಬೆಂಗಳೂರು: ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್ ಅವರ ಜತೆ ತಾವು ಬಿರಿಯಾನಿ ತಿಂದಿಲ್ಲ, ಖರ್ಜೂರವನ್ನಷ್ಟೇ ತಿಂದಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿಂದು ಬಿರಿಯಾನಿ ಕಥೆ ಯನ್ನು ಬಿಚ್ಚಿಟ್ಟರು. ಆತನ ಜೊತೆ ಕುಳಿತು ತಾವು ಬಿರಿಯಾನಿ ತಿಂದಿದ್ದಾಗಿ ಮಾಧ್ಯಮ ಗಳಲ್ಲಿ ವರದಿಯಾಗಿದೆ. ಸದನದಲ್ಲೂ ತಮ್ಮನ್ನೇ ಉದ್ದೇಶಿಸಿ ಬಿಜೆಪಿ ಸದಸ್ಯ ಸಿ.ಟಿ. ರವಿ ಟೀಕೆ ಮಾಡಿದ್ದಾರೆ. ಆತ ಐಎಂಎ ಮುಖ್ಯ ಸ್ಥರು ಎಂಬುದೇ ಗೊತ್ತಿರಲಿಲ್ಲ. ರಂಜಾನ್ ಹಬ್ಬದ ಸಂದರ್ಭದಲ್ಲಿ ತಮ್ಮನ್ನು ಬಲ ವಂತ ಮಾಡಿ ಶಾಸಕರೊಬ್ಬರು ಕರೆದೊಯ್ದಿದ್ದರು.
ಹೃದಯ ಸಮಸ್ಯೆ ಕಾಣಿಸಿ ಕೊಂಡ ನಂತರ ತಾವು ಮಾಂಸಾ ಹಾರ ತ್ಯಜಿಸಿದ್ದೇನೆ. ಅವರ ಜತೆ ತಿಂದಿದ್ದು ಒಂದೆರಡು ಖರ್ಜೂರ ಮಾತ್ರ ಎಂದು ಸ್ಪಷ್ಟಪಡಿಸಿದರು.
ವಿಶ್ವಾಸಮತ ಯಾಚನೆ ನಿರ್ಣಯದ ಮೇಲೆ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಅವರು ಚರ್ಚೆ ನಡೆಸುತ್ತಿದ್ದ ಸಂದರ್ಭದಲ್ಲಿ ಐಎಂಎ ಪ್ರಕರಣದ ಬಗ್ಗೆ ಪ್ರಸ್ತಾಪಿಸಿದರು. ಈಗ ರಾಜೀನಾಮೆ ಕೊಟ್ಟಿ ರುವ ಶಾಸಕರೊಬ್ಬರು ಐಎಂಎ ಸಂಸ್ಥೆಯಿಂದ 450 ಕೋಟಿ ರೂ ಪಡೆದು ವಂಚಿಸಿದ್ದಾರೆ ಎಂದು ಆ ಸಂಸ್ಥೆಯ ಮುಖ್ಯಸ್ಥರೇ ಸ್ಪಷ್ಟಪ ಡಿಸಿದ್ದಾರೆ. ಇದು ಮಾಧ್ಯಮಗಳಲ್ಲಿ ವರದಿ ಯಾಗಿದೆ. ಇಂತಹ ಶಾಸಕರು ತಾವು ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಬಿಜೆಪಿ ಸೇರುವು ದಾಗಿ ಹೇಳಿದ್ದಾರೆ ಎಂದರು. ಆಗ ಸಿ.ಟಿ.ರವಿ, ಗುಪ್ತದಳ ಆಡಳಿತ ಪಕ್ಷದ ಕೈಯಲ್ಲಿದೆ. ಅದರ ಜತೆಗೆ ಆ ಸಂಸ್ಥೆಯ ಮುಖ್ಯಸ್ಥರ ಜತೆಗೆ ಬಿರಿಯಾನಿ ತಿಂದರಲ್ಲ. ಆ ಪಾಪದ ಹಣದಲ್ಲಿ ಚುನಾವಣೆ ನಡೆಸಿದರಲ್ಲ. ಆ ಎಲ್ಲಾ ವಿಚಾರಗಳನ್ನು ಬಹಿರಂಗಪಡಿಸಿ. ಸರ್ಕಾರ ನಿಮ್ಮ ಜತೆಗಿದೆ ಬನ್ನಿ ಎಂದು ಕಳ್ಳನ ರಕ್ಷಣೆಗೆ ಮುಂದಾಗಿದ್ದನ್ನೂ ಹೇಳಿ ಎಂದು ಕುಟುಕಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಯವರು ತಮ್ಮನ್ನೇ ಗುರಿಯಾಗಿಸಿ ರವಿ ಬಿರಿಯಾನಿ ಕಥೆ ಹೇಳಿದ್ದಾರೆ. ಐಎಂಎ ವಂಚನೆ ಪ್ರಕರಣದ ಬಗ್ಗೆ ತನಿಖೆಗೆ ಈಗಾಗಲೇ ವಿಶೇಷ ತನಿಖಾ ತಂಡ ರಚನೆ ಮಾಡಿದ್ದು, ತನಿಖೆ ನಡೆಯುತ್ತಿದೆ.
ತನಿಖಾಧಿಕಾರಿಗಳಿಗೆ ಮುಕ್ತ ಸ್ವಾತಂತ್ರ್ಯ ನೀಡಲಾಗಿದೆ. ತಮಗೆ ಐಎಂಎ ಸಂಸ್ಥೆಯ ಮುಖ್ಯಸ್ಥರ ಪರಿಚಯವಿಲ್ಲ. ನನಗೂ ಆತನಿಗೂ ಅಲ್ಲಿಯವರೆಗೂ ಪರಿಚಯವೇ ಇರಲಿಲ್ಲ. ಆ ವ್ಯಕ್ತಿಯ ಕಚೇರಿಯಲ್ಲಿ ಈ ದೇಶದ ಪ್ರಧಾನಿಯ ಫೋಟೋ ಹಾಕಿಕೊಂಡಿದ್ದಾರೆ. ಅತ್ಯುತ್ತಮ ಉದ್ಯಮಿ ಎಂದು ಕೇಂದ್ರ ಸರ್ಕಾರದಿಂದ ಬಹುಮಾನವನ್ನೂ ಕೊಡಲಾಗಿದೆ. ಈ ಹಗರಣವನ್ನು ಜಾರಿ ನಿರ್ದೇಶನಾಲಯದ ತನಿಖೆಗೆ ಕೊಡುವಂತೆ ಶಿಫಾರಸ್ಸು ಮಾಡಿದ್ದೇ ನಾನು. ಬಡವರ ಹಣ ದುರುಪಯೋಗ ಮಾಡಿಕೊಂಡವರನ್ನು ಖಂಡಿತ ಬಿಡುವುದಿಲ್ಲ. ಆ ವ್ಯಕ್ತಿಯನ್ನು ಬಂಧಿಸಿದ್ದು ನಮ್ಮ ಎಸ್ಐಟಿ ಪೊಲೀಸರು. ಈಗ ಇಡಿಯವರು ವಿಚಾರಣೆಗೆ ಕರೆದುಕೊಂಡು ಹೋಗಿ ಕೂರಿಸಿಕೊಂಡಿದ್ದಾರೆ ಎಂದರು. ಆಗ ಸಭಾಧ್ಯಕ್ಷರು ಮಧ್ಯ ಪ್ರವೇಶಿಸಿ ಕುಮಾರಸ್ವಾಮಿ ಅವರನ್ನು ಉದ್ದೇಶಿಸಿ “ಹಾಗೆಲ್ಲ ಪೂರ್ತಿಯಾಗಿ ಮಾಂಸಾಹಾರ ಬಿಡಬಾರದು. ಮೀನು, ನಾಟಿಕೋಳಿಯಾದರೂ ತಿನ್ನಬೇಕು. ಇಲ್ಲ ಎಂದರೆ ಜನ ತಿನ್ನೋದೇ ಬಿಟ್ಟುಬಿಟ್ಟಿದ್ದಾರೆ. ತಿನ್ನಬಾರದವರೆಲ್ಲಾ ಶುರುಮಾಡಿಕೊಂಡಿದ್ದಾರೆ ಎಂದು ನಮ್ಮ ಮೇಲೆ ತಪ್ಪು ತಿಳಿದುಕೊಳ್ಳುತ್ತಾರೆ” ಎಂದು ಹಾಸ್ಯ ಚಟಾಕಿ ಹಾರಿಸಿದರು.