ಮೈಸೂರು: ಮೈಸೂರಿನ ರಾಮಕೃಷ್ಣನಗರದಲ್ಲಿರುವ ಮಾಜಿ ಮುಖ್ಯ ಮಂತ್ರಿ ಹಾಗೂ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅವರ ನಿವಾಸಕ್ಕೆ ಮೂವರು ಪಕ್ಷೇತರ ಪಾಲಿಕೆ ಸದಸ್ಯರುಗಳು ಸೇರಿದಂತೆ ಹಲವು ಮುಖಂಡರು ಭೇಟಿ ನೀಡುವ ಮೂಲಕ ಸಿದ್ದರಾಮಯ್ಯ ಅವರ ನಿವಾಸ ಶಕ್ತಿ ಕೇಂದ್ರವಾಗಿರುವುದನ್ನು ತೋರ್ಪಡಿಸಿದರು. ಮೈಸೂರು ನಗರಪಾಲಿಕೆಗೆ ಚುನಾವಣೆ ನಡೆದು ಹೊಸ ಸದಸ್ಯರು ಆಯ್ಕೆಯಾಗಿದ್ದರೂ, ಮೇಯರ್ ಚುನಾ ವಣೆ ನಡೆಯದೇ ಇರುವುದರಿಂದ ಮೈಸೂರು ನಗರದ ಮೇಯರ್ ಪಟ್ಟ ಯಾರಿಗೆ ಕೊಡಬೇ ಕೆಂಬ ಚರ್ಚೆ ಪ್ರಚಲಿತದಲ್ಲಿರುವ ಸಂದರ್ಭ ದಲ್ಲಿಯೇಭಾನುವಾರ ಮಾಜಿ ಸಿಎಂ ಮನೆಗೆ ಮೂವರು ಪಕ್ಷೇತರ ಪಾಲಿಕೆ ಸದಸ್ಯರು ಮಾಜಿ ಸಿಎಂ ಮನೆಗೆ ಭೇಟಿ ನೀಡಿ ಗಮನ ಸೆಳೆದರು.
ಜೆಡಿಎಸ್ನಿಂದ ಬಂಡಾಯವೆದ್ದು ಪಕ್ಷೇತರರಾಗಿ ಕಳೆದ ವಿಧಾನ ಸಭಾ ಚುನಾವಣೆ ಯಲ್ಲಿ ಚಾಮರಾಜ ಕ್ಷೇತ್ರದಿಂದ ಸ್ಪರ್ಧಿಸಿದ್ದ ಹರೀಶ್ಗೌಡ ಅವರು ತಮ್ಮ ಬೆಂಬಲಿಗ ಪಾಲಿಕೆ ಸದಸ್ಯರಾದ ಪೈಲ್ವಾನ್ ಶ್ರೀನಿವಾಸ್ ಹಾಗೂ ಕೆ.ಜಿ.ಕೊಪ್ಪಲು ಶಿವಕುಮಾರ್ ಅವರನ್ನು ಸಿದ್ದರಾಮಯ್ಯ ಅವರ ಮನೆಗೆ ಕರೆತಂದು ಸುದೀರ್ಘ ಮಾತುಕತೆ ನಡೆಸಿದರು. ಈಗಾ ಗಲೇ ಜೆಡಿಎಸ್ ನಾಯಕರುಗಳಿಗೆ ಸೆಡ್ಡು ಹೊಡೆದು ಪಕ್ಷದ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದ ಹರೀಶ್ಗೌಡ, ಜೆಡಿಎಸ್ನಿಂದ ಅಂತರ ಕಾಯ್ದುಕೊಂಡಿದ್ದು, ಪಾಲಿಕೆಯ ಚುನಾವಣೆಯಲ್ಲಿ ತನ್ನ ಇಬ್ಬರು ಬೆಂಬಲಿಗರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರುವುದರಲ್ಲಿ ಯಶಸ್ವಿಯಾಗಿದ್ದರು. ಮೇಯರ್ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿಯೇ ಇಬ್ಬರು ಪಕ್ಷೇತರ ಪಾಲಿಕೆ ಸದಸ್ಯರನ್ನು ಸಿದ್ದರಾಮಯ್ಯ ಅವರ ಮನೆಗೆ ಕರೆತರುವ ಮೂಲಕ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದರು.
ಈ ನಡುವೆ ಕಾಂಗ್ರೆಸ್ನಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿರುವ ಕೆ.ವಿ.ಶ್ರೀಧರ್ ಕೂಡ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿದ್ದರು. ಪಾಲಿಕೆಯ ಪಕ್ಷೇತರ ಸದಸ್ಯರುಗಳು ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿರುವುದು ಮೇಯರ್ ಗದ್ದುಗೆ ಯಾರಿಗೆ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಕುರಿತಂತೆ ಸಿದ್ದರಾಮಯ್ಯ ಅವರು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮೈಸೂರು ನಗರಪಾಲಿಕೆಯ ಮೇಯರ್ ಆಯ್ಕೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣವಿದೆ ಎಂದು ಸ್ಪಷ್ಟಪಡಿಸಿದರು.