ಚಾಮರಾಜನಗರ  ಬಳಿ ಗಾಯಗೊಂಡಿದ್ದ ಚಿರತೆ ಸೆರೆ
ಚಾಮರಾಜನಗರ, ಮೈಸೂರು

ಚಾಮರಾಜನಗರ ಬಳಿ ಗಾಯಗೊಂಡಿದ್ದ ಚಿರತೆ ಸೆರೆ

May 21, 2019

ಚಾ.ನಗರ: ಗಾಯಗೊಂಡಿದ್ದ ಚಿರತೆಯನ್ನು ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿರುವ ಘಟನೆ ತಾಲೂಕಿನ ಹೊನ್ನಹಳ್ಳಿ ಗ್ರಾಮದ ಜಮೀನಿನಲ್ಲಿ ಸೋಮವಾರ ನಡೆದಿದೆ.

ಹೊನ್ನಹಳ್ಳಿ ಗ್ರಾಮದ ಮಹದೇವಶೆಟ್ಟಿ ಎಂಬುವರ ಪಂಪ್‍ಸೆಟ್ ಜಮೀನಿನ ಮನೆ ಮುಂದೆ ಚಿರತೆ ಮಲಗಿರುವುದನ್ನು ಮಹದೇವಶೆಟ್ಟಿ ಪುತ್ರ ನಾಗರಾಜು ಗಮನಿ ಸಿದ್ದಾರೆ. ಇದರಿಂದ ಗಾಬರಿಗೊಂಡ ನಾಗ ರಾಜು ಈ ವಿಷಯವನ್ನು ಗ್ರಾಮಸ್ಥರು ಹಾಗೂ ಅರಣ್ಯಾಧಿಕಾರಿಗಳ ಗಮನಕ್ಕೆ ತಂದರು.

ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವುದಕ್ಕಿಂತ ಮುನ್ನವೇ ಚಿರತೆ ಮನೆ ಮುಂದಿನ ಜಾಗ ದಿಂದ ಜಮೀನಿನ ಪಕ್ಕದಲ್ಲಿದ್ದ ಕಾಲುವೆಗೆ ಆಗಮಿಸಿ ಮಲಗಿತ್ತು. ಇದನ್ನು ಗಮನಿ ಸಿದ ಗ್ರಾಮಸ್ಥರು ಕೂಗಾಟ, ಕಿರುಚಾಟ ನಡೆಸಿ ಚಿರತೆಯನ್ನು ಕಾಡಿಗೆ ಓಡಿಸಲು ಯತ್ನಿಸಿದರು. ಆದರೆ, ಚಿರತೆ ಗ್ರಾಮಸ್ಥರ ಕೂಗಾ ಟಕ್ಕೆ ಯಾವುದೇ ರೀತಿಯ ಸ್ಪಂದನೆ ನೀಡದೇ ಕಾಲುವೆಯಲ್ಲಿಯೇ ಮಲಗಿತ್ತು. ಕೆಲವರು ಹತ್ತಿರಕ್ಕೆ ತೆರಳಿ ಗಮನಿಸಿದಾಗ ಚಿರತೆಯ ಕತ್ತಿನ ಭಾಗದಲ್ಲಿ ಗಾಯ ಗಳಾಗಿರುವುದು ಕಂಡು ಬಂದಿತು. ನಂತರ ಗ್ರಾಮಸ್ಥರು ಗಾಯಗೊಂಡಿದ್ದ ಚಿರತೆಗೆ ಮರದ ತಡಿಕೆಯನ್ನು ಅಡ್ಡಲಾಗಿ ಹಿಡಿದು ಸ್ಥಳಕ್ಕೆ ತೆರಳಿದರು. ಈ ವೇಳೆಯಲ್ಲಿ ಚಿರತೆ ಯಾವುದೇ ರೀತಿಯ ಪ್ರತಿರೋಧ ವ್ಯಕ್ತಪಡಿಸಲಿಲ್ಲ ಎನ್ನಲಾಗಿದೆ.

ಗ್ರಾಮಸ್ಥರು ಚಿರತೆಯ ಕಾಲಿಗೆ ಹಗ್ಗ ಕಟ್ಟಿದ ನಂತರ ಕಾಲುವೆಯಲ್ಲಿಯೇ ಇದ್ದ ಮರವೊಂದಕ್ಕೆ ಕಟ್ಟಿ ಹಾಕಿದ್ದರು. ಈ ವೇಳೆಗೆ ಸ್ಥಳಕ್ಕೆ ಬಿಳಿಗಿರಿರಂಗನಬೆಟ್ಟದ ಹುಲಿ ಸಂರಕ್ಷಿತಾರಣ್ಯದ ಪ್ರಭಾರ ಚಾಮರಾಜನಗರ ವಲಯ ಅರಣ್ಯಾಧಿಕಾರಿ ಮಹದೇವಯ್ಯ, ಅರಣ್ಯ ಸಂರಕ್ಷಣಾಧಿಕಾರಿಗಳಾದ ಸುರೇಶ್, ದೊರೆನಾಯಕ ಮತ್ತು ಫೈರೋಜ್ ಆಗಮಿಸಿ ಗಾಯಗೊಂಡಿದ್ದ ಚಿರತೆಯನ್ನು ಪರಿಶೀಲಿಸಿದರು.

ಚಿರತೆಗೆ ಸುಮಾರು 5 ವರ್ಷವಾಗಿದೆ. ಗಂಡು ಚಿರತೆ ಆಗಿದ್ದು, ಕತ್ತಿನ ಭಾಗದಲ್ಲಿ ಕಚ್ಚಿದ ಗಾಯಗಳಾಗಿರುವುದರಿಂದ ಈ ಚಿರತೆ ಮತ್ತೊಂದು ಚಿರತೆ ಜೊತೆ ಕಾದಾಟ ನಡೆಸುವ ಸಂದರ್ಭದಲ್ಲಿ ಗಾಯವಾಗಿರುವ ಸಾಧ್ಯತೆ ಇದೆ. ಈ ಗಾಯವಾಗಿ ಹಲವು ದಿನಗಳು ಆಗಿರುವುದರಿಂದ ಗಾಯದ ಸ್ಥಳದಲ್ಲಿ ಹುಳಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದರು. ಬಂಡೀಪುರ ಅರಣ್ಯ ವೈದ್ಯ ಡಾ.ನಾಗರಾಜು ಅವರಿಂದ ಗಾಯಗೊಂಡಿ ರುವ ಚಿರತೆಗೆ ಚಿಕಿತ್ಸೆ ಕೊಡಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಮೃಗಾ ಲಯಕ್ಕೆ ಕಳುಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

Translate »