ಬೆಂಗಳೂರು: ಜನತಾ ಪರಿವಾರದಿಂದ ದೂರವಾಗಿರುವ ನಾಯಕರನ್ನು ಮತ್ತೆ ಒಗ್ಗೂಡಿಸಲು ಪ್ರಯತ್ನಿಸಲಾಗುವುದು ಎಂದು ಜೆಡಿಎಸ್ನ ನೂತನ ರಾಜ್ಯಾಧ್ಯಕ್ಷ ಅಡಗೂರು ಹೆಚ್. ವಿಶ್ವನಾಥ್ ತಿಳಿಸಿದ್ದಾರೆ.
ರಾಜ್ಯ ಘಟಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರಕ್ಕೆ ಮುನ್ನ ದೇವಾಲಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರೂ ಒಗ್ಗಟ್ಟಿನಿಂದ ಪಕ್ಷ ಬಲಪಡಿಸಬೇಕಿದೆ ಎಂದರು.
ನಂತರ ಪಕ್ಷದ ಕಚೇರಿಯಲ್ಲಿ ಮಾತನಾಡಿ, ಪಕ್ಷ ಸಂಘಟನೆ ಮೊದಲ ಗುರಿ, ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಮರ್ಥವಾಗಿ ಸಂಘಟಿಸುವಲ್ಲಿ ಒಟ್ಟಾಗಿ ಹೋಗಲು ಸಜ್ಜಾಗುತ್ತಿದ್ದೇವೆ, ಕೊಟ್ಟಿರುವ ದೊಡ್ಡ ಜವಾಬ್ದಾರಿ ನಿರ್ವಹಿಸಲು ಹಿರಿಯರು ನನ್ನ ಜೊತೆಗಿದ್ದಾರೆ ಎಂದರು.
ಇದಕ್ಕೂ ಮುನ್ನ ಜೆಡಿಎಸ್ ವರಿಷ್ಠ ನಾಯಕ ಹೆಚ್.ಡಿ. ದೇವೇಗೌಡ ಅವರ ಮನೆಗೆ ತೆರಳಿ ಕೆಲ ಹೊತ್ತು ಚರ್ಚೆ ನಡೆಸಿದರು.
ನಂತರ ಜೆಡಿಎಸ್ ಪಕ್ಷದ ಕಛೇರಿಗೆ ಆಗಮಿಸಿದ ಹೆಚ್. ವಿಶ್ವನಾಥ್ ಅಧಿಕಾರ ವಹಿಸಿಕೊಂಡಿದ್ದಾರೆ.